ಕುಂದಾಪುರ, ಡಿ. 27 (DaijiworldNews/HR): ಭಂಡಾರಿ ಯುವ ವೇದಿಕೆ ಕುಂದಾಪುರ ಹಾಗೂ ಕೆಎಂಸಿ ಆಸ್ಪತ್ರೆ ಮಣಿಪಾಲದ ಸಹಯೋಗದಲ್ಲಿ ಕುಂದಾಪುರದ ಜೂನಿಯರ್ ಕಾಲೇಜಿನ ಕಲಾಮಂದಿರದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಬೃಹತ್ ರಕ್ತದಾನ ಶಿಬಿರ ರವಿವಾರ ನಡೆಯಿತು.
ಶಿಬಿರವನ್ನು ಉದ್ಘಾಟಿಸಿದ ಕುಂದಾಪುರದ ಸಾರ್ವಜನಿಕ ಆಸ್ಪತ್ರೆಯ ವೈದ್ಯಾಕಾರಿ ಡಾ. ನಾಗೇಶ್ ಮಾತನಾಡಿ, "ಸಾರ್ವಜನಿಕ ಸೇವೆಯೇ ನಮ್ಮೆಲ್ಲರ ಧ್ಯೇಯವಾಗಿರಬೇಕು. ಇಂತಹ ಆರೋಗ್ಯ ಶಿಬಿರಗಳಿಂದ ಉತ್ತಮ ಆರೋಗ್ಯದ ಜತೆಗೆ ಕಾಳಜಿಯೂ ಮೂಡುತ್ತದೆ. ಅದು ಇಂದಿನ ಅವಶ್ಯಕ ಎಂದ ಅವರು, ಜಗತ್ತು ಎಷ್ಟೇ ಮುಂದುವರಿದರೂ, ರಕ್ತಕ್ಕೆ ಸರಿಸಮಾನವಾದುದನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ರಕ್ತಕ್ಕೆ ರಕ್ತವೇ ದಾನ ನೀಡಬೇಕು. ಆದ್ದರಿಂದ ರಕ್ತದಾನ ಹೆಚ್ಚೆಚ್ಚು ನಡೆಯಬೇಕು. ಆರೋಗ್ಯವಂತ ವ್ಯಕ್ತಿ ವರ್ಷದಲ್ಲಿ 3-4 ಬಾರಿ ರಕ್ತದಾನ ಮಾಡಬಹುದು" ಎಂದು ಹೇಳಿದರು.
ಕುಂದಾಪುರದ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ, ಅಂಕದಕಟ್ಟೆಯ ಸಹನಾ ಗ್ರೂಪ್ಸ್ನ ವ್ಯವಸ್ಥಾಪಕ ಸುರೇಂದ್ರ ಶೆಟ್ಟಿ, ಬಾರ್ಕೂರು ಕಚ್ಚೂರಿನ ಶ್ರೀ ನಾಗೇಶ್ವರ ದೇವಸ್ಥಾನದ ಪ್ರ. ಕಾರ್ಯದರ್ಶಿ ಶ್ರೀಧರ ಭಂಡಾರಿ ಬಿರ್ತಿ ಮಾತನಾಡಿದರು. ಕುಂದಾಪುರದ ಭಂಡಾರಿ ಯುವ ವೇದಿಕೆ ಅಧ್ಯಕ್ಷ ಲೋಕೇಶ್ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.
ಕೆಎಂಸಿ ಆಸ್ಪತ್ರೆಯ ವೈಧ್ಯಾಧಿಕಾರಿಯವರನ್ನು ಹಾಗೂ ಡಾ. ನಾಗೇಶ್ ಅವರನ್ನು ಈ ಸಂಧರ್ಭದಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.
ಗೌರವಾಧ್ಯಕ್ಷ ಹರೀಶ್ ಭಂಡಾರಿ ಮೊಳಹಳ್ಳಿ, ಕಾರ್ಯದರ್ಶಿ ಸಾತ್ವಿಕ್ ಭಂಡಾರಿ, ಹರೀಶ್ ಭಂಡಾರಿ ಕುಂಭಾಶಿ, ರವೀಂದ್ರ ಭಂಡಾರಿ, ಜೂನಿಯರ್ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕ ಪ್ರಕಾಶ್ಚಂದ್ರ ಶೆಟ್ಟಿ, ಕುಂದಾಪುರ ಜೆಸಿಐ ಸಿ ಅಧ್ಯಕ್ಷ ವಿಜಯ ಭಂಡಾರಿ ತೆಕ್ಕಟ್ಟೆ, ಅಸಂಘಟಿತ ಕಾರ್ಮಿಕರ ಸಂಘದ ಅಧ್ಯಕ್ಷ ಅಶೋಕ ಭಂಡಾರಿ ಕೋಣಿ, ಸವಿತಾ ಸಮಾಜ ಕುಂದಾಪುರದ ಅಧ್ಯಕ್ಷ ಸುಭಾಷ್ ಭಂಡಾರಿ ಗುಜ್ಜಾಡಿ, ಭಂಡಾರಿ ಸಮಾಜ ಸಂಘದ ಅಧ್ಯಕ್ಷ ಸುಭಾಷ್ ಭಂಡಾರಿ ಹಂಗಳೂರು, ನಾಗರಾಜ ಖಾರ್ವಿ ಮತ್ತಿತರರು ಉಪಸ್ಥಿತರಿದ್ದರು.
ವೈಭವ್ ಭಂಡಾರಿ ಮಧುವನ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.