ಉಡುಪಿ, ಡಿ. 26 (DaijiworldNews/SM): ಪ್ರಧಾನಿ ನರೇಂದ್ರ ಮೋದಿಯವರ ಆತ್ಮ ನಿರ್ಭರ ಭಾರತಕ್ಕೆ ನನ್ನ ಶಿಷ್ಯ ಶ್ರೀ ಈಶಪ್ರಿಯತೀರ್ಥ ಜೊತೆಯಾಗಿದ್ದಾರೆ. ಈ ಬಾರಿಯ ಪರ್ಯಾಯ ಅವಧಿಯಲ್ಲಿ ದೇಶಿ ಉತ್ಪನ್ನ ಗಳನ್ನು ಬಳಸಿದಲ್ಲದೇ, ದೇಶಿ ಉತ್ಪನ್ನಗಳ ಮಾರಾಟ ಮೇಳಕ್ಕೆ ಅವಕಾಶ ಕಲ್ಪಿಸಿದ್ದಾರೆ ಎಂದು ಅದಮಾರು ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಸ್ವಾಮೀಜಿ ಹೇಳಿದರು.
ಅವರು ರವಿವಾರ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ಅದಮಾರು ಪರ್ಯಾಯದ ವಿಶ್ವಾರ್ಪಣಮ್ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು. ನನ್ನ ಶಿಷ್ಯ ಈಶಪ್ರಿಯತೀರ್ಥ ಸ್ವಾಮೀಜಿ ಅದಮಾರು ಶಿಕ್ಷಣ ಸಂಸ್ಥೆಗಳ ಜವಾಬ್ದಾರಿಯನ್ನು ನಿಭಾಯಿಸಲು ಶಕ್ತಿವಂತರಾಗಿದ್ದಾರೆ. ಕೇವಲ ಲೌಕಿಕ ಅಲ್ಲದೇ ಆಧ್ಯಾತ್ಮಿಕ ಪ್ರಿಯರು ಅವರು ಎಂದು ನುಡಿದರು.
ಸಭೆಯಲ್ಲಿ ಪೇಜಾವರ ಯತಿ ಶ್ರೀ ವಿಶ್ವಪ್ರಸನ್ನತೀರ್ಥ, ಸೋದೆ ಯತಿ ಶ್ರೀ ವಿಶ್ವವಲ್ಲಭತೀರ್ಥ, ಶೀರೂರು ಯತಿ ಶ್ರೀ ವೇದವರ್ಧನತೀರ್ಥ, ಕಾಣಿಯೂರು ಯತಿ ಶ್ರೀ ವಿದ್ಯಾವಲ್ಲಭತೀರ್ಥ, ಪಲಿಮಾರು ಕಿರಿಯ ಯತಿ ಶ್ರೀ ವಿದ್ಯಾರಾಜೇಶ್ವರತೀರ್ಥ, ಕಟೀಲು ದೇವಳದ ಅನುವಂಶಿಕ ಅರ್ಚಕ ಹರಿನಾರಾಯಣದಾಸ ಅಸ್ರಣ್ಣ, ಕರ್ನಾಟಕ ಸರಕಾರದ ನಿವೃತ್ತ ಅಧಿಕಾರಿ ಟಿ.ಶ್ಯಾಮ ಭಟ್, ರಾಜ್ ಭವನ್ ಚೆನ್ನೈಯ ಸಿ.ಆರ್.ಬಾಲಕೃಷ್ಣ ಭಟ್ ಉಪಸ್ಥಿತರಿದ್ದರು.
ಶಾಸಕ ರಘುಪತಿ ಭಟ್, ಪಿಪಿಸಿ ಕಾಲೇಜಿನ ಸಂಸ್ಕೃತ ಪ್ರಾಧ್ಯಾಪಕ ಡಾ. ಟಿ. ಎಸ್ ರಮೇಶ್ ಭಟ್, ಪೀಟಿಲು ವಾದಕ ಪ್ರಾದೇಶ ಆಚಾರ್ಯ, ಯಕ್ಷಗಾನ ಕಲಾವಿದ ವಾಸುದೇವ ರಂಗಾಭಟ್ಟ, ವಿದ್ವಾಂಸ ವಿ| ಹೆರ್ಗ ರವೀಂದ್ರ ಭಟ್, ಭಾಗವತ ಸುಬ್ರಹ್ಮಣ್ಯ ಧಾರೇಶ್ವರ, ಕೃಷ್ಣ ಮಠದ ಕಲಾ ಸಲಹೆಗಾರ ಪುರುಷೋತ್ತಮ ಅಡ್ವೆ ಅವರನ್ನು ಸನ್ಮಾನಿಸಲಾಯಿತು. ಅದಮಾರು ಮಠದ ವತಿಯಿಂದ ನೀಡುವ ೨ನೇ ವರ್ಷದ ಯಕ್ಷಗಾನ ಕಲಾ ಪ್ರಶಸ್ತಿಯಾದ ಶ್ರೀ ನರಹರಿತೀರ್ಥ ಪ್ರಶಸ್ತಿಯನ್ನು ಶ್ರೀಪಾದ ತಿಮ್ಮಣ್ಣ ಭಟ್ಟ ಸಾಲ್ಕೋಡು ಅವರಿಗೆ ನೀಡಿ ಗೌರವಿಸಲಾಯಿತು.
ಎರಡು ವರ್ಷದ ಪರ್ಯಾಯ ಅವಧಿಯಲ್ಲಿ ನನ್ನ ಶಿಷ್ಯ ಈಶಪ್ರಿಯತೀರ್ಥ ಧರ್ಮ, ಪ್ರಕೃತಿ ಪ್ರಿಯರಾಗಿ, ಸಂಸ್ಕೃತಿ ಪ್ರಿಯರಾಗಿ ಉತ್ತಮ ಕಾರ್ಯ ಮಾಡಿದ್ದಾರೆ ಎಂದು ಅದಮಾರು ಹಿರಿಯ ಯತಿ ಶ್ರೀ ವಿಶ್ವಪ್ರಿಯತೀರ್ಥ ಮಾತನಾಡುತ್ತಿರುವಾದ ಅವರ ಶಿಷ್ಯ ಅದಮಾರು ಪರ್ಯಾಯ ಪೀಠಾಧಿಪತಿ ಶ್ರೀ ಈಶಪ್ರಿಯತೀರ್ಥ ಭಾವುಕರಾಗಿ ಕಣ್ಣೀರು ಸುರಿಸಿದರು. ನಂತರ ಅವರಿಗೆ ಮಾತನಾಡಲು ಅವಕಾಶ ನೀಡಿದಾಗ ಗದ್ಗದಿತರಾಗಿ ಕೃಷ್ಣಾರ್ಪಣಮಸ್ತು ಎಂದರು.