ಕುಂದಾಪುರ, ಡಿ.26 (DaijiworldNews/PY): ಹಾರ್ಡ್ವೇರ್ ಅಂಗಡಿಗೆ ಬೆಂಕಿ ಹತ್ತಿಕೊಂಡ ಪರಿಣಾಮ ಅಂಗಡಿ ಸಂಪೂರ್ಣ ಸುಟ್ಟು ಹೋಗಿ ಅಂಗಡಿ ಕೋಣೆಗಳು ಸುಟ್ಟು ಹೋದ ಘಟನೆ ಕುಂದಾಪುರ ತಾಲೂಕಿನ ಮುಳ್ಳಿಕಟ್ಟೆ ಎಂಬಲ್ಲಿ ಡಿ.25ರ ಶನಿವಾರ ಸಂಜೆ ನಡೆದಿದೆ.
ಮುಳ್ಳಿಕಟ್ಟೆ ಕೆಲವು ವರ್ಷಗಳಿಂದ ಕಾರ್ಯಾಚರಿಸುತ್ತಿದ್ದ ಹರೀಶ್ ಜೋಗಿ ಎಂಬುವರು ನಡೆಸುತ್ತಿದ್ದ ಬೆನಕ ಹಾರ್ಡ್ವೇರ್ ಅಂಗಡಿಯೇ ಬೆಂಕಿಗಾಹಿತಿಯಾದ ಅಂಗಡಿ. ಹರೀಶ್ ಶನಿವಾರ ಸಂಜೆ ಸುಮಾರು 7.30 ಗಂಟೆಗೆ ಅಂಗಡಿಯ ಬಾಗಿಲು ಹಾಕಿ ಹೊರ ಬಂದಿದ್ದರು. ಹೊರಗೆ ಬಂದು ಸ್ನೇಹಿತರೊಂದಿಗೆ ಮಾತನಾಡುತ್ತಿದ್ಸ ಸಂದರ್ಭ ಅಂಗಡಿಯೊಳಗಿಂದ ಶೆಟರ್ ಮೂಲಕ ಹೊಗೆ ಬರುತ್ತಿರುವುದನ್ನು ಗಮನಿಸಿದ್ದಾರೆ.
ಅಂಗಡಿಯ ಬೀಗ ಒಡೆದು ಶಟರ್ ತೆಗೆಯುವಷ್ಟರಲ್ಲಿ ಅಂಗಡಿಯೊಳಗಿದ್ದ ಪೈಂಟ್, ಟರ್ಪಂಟೈಲ್ ಮೊದಲಾದ ಆಯಿಲ್ ಬೇಸ್ಡ್ ಕಂಟೆಂಟ್ಗಳಿದ್ದ ಕಾರಣ ಸಂಪೂರ್ಣ ಬೆಂಕಿ ಹತ್ತಿಕೊಂಡಿದ್ದು ಸುಟ್ಟು ಹೋಗಿದೆ. ತಕ್ಷಣ ಅಗ್ನಿಶಾಮಕದಳಕ್ಕೆ ಕರೆ ಮಾಡಲಾಯಿತಾದರೂ ಅಗ್ನಿಶಾಮಕ ವಾಹನ ಬರುವಷ್ಟರಲ್ಲಿ ಅರ್ಧ ಮುಕ್ಕಾಲು ಗಂಟೆಯಲ್ಲಿ ಅಂಗಡಿಯೊಳಗಿನ ವಸ್ತುಗಳೆಲ್ಲ ಸುಟ್ಟು ಭಸ್ಮವಾಗಿದೆ.
ಹಾರ್ಡ್ವೇರ್ ಅಂಗಡಿಗೆ ತಾಗಿಕೊಂಡಿದ್ದ ಮೆಡಿಕಲ್ ಶಾಪ್ ಹಾಗೂ ಇತರ ಅಂಗಡಿಗಳ ಒಳಗಿನ ವಸ್ತುಗಳಿಗೆ ಬೆಂಕಿ ತಾಗಿಲ್ಲವಾದರೂ ಹಾರ್ಡ್ವೇರ್ ಅಂಗಡಿಯ ಬೆಂಕಿಯ ಶಾಖಕ್ಕೆ ವಸ್ತುಗಳು ಹಾನಿಯಾಗಿರುವ ಸಾಧ್ಯತೆಗಳಿವೆ ಎನ್ನಲಾಗಿದೆ. ಅಗ್ನಿಶಾಮಕ ದಳ ಬೆಂಕಿ ನಂದಿಸಿ ಹೋದ ಬಳಿಕ ಮತ್ತೆ ಬೆಂಕಿ ಕಾಣಿಸಿಕೊಂಡ ಕಾರಣ ಮತ್ತೆ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸಿದ್ದಾರೆ.
ಬೆಂಕಿ ಅವಘಡಕ್ಕೆ ಸ್ಪಷ್ಟವಾದ ಕಾರಣ ತಿಳಿದು ಬಂದಿಲ್ಲವಾದರೂ ಕೋಟ್ಯಂತರ ರೂ. ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕಣ್ಣೆದುರೇ ಬೆಂಕಿಗಾಹುತಿಯಾದ ಘಟನೆಯನ್ನು ಕಂಡ ಸ್ಥಳೀಯರಿಗೆ ಒಂದು ಕ್ಷಣ ದಿಗ್ಬ್ರಾಂತಗೊಂಡಿದ್ದರು.