ಉಡುಪಿ, ಡಿ.26 (DaijiworldNews/PY): "ಸನಾತನ ಹಿಂದು ಪರಂಪರೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇದೆ. ನೂರಾರು ವರ್ಷಗಳ ಕಾಲ ಸತತವಾಗಿ ಭಾರತೀಯ ಸಂಸ್ಕೃತಿಯ ಮೇಲೆ ದಾಳಿ ನಡೆದರೂ ಗಟ್ಟಿಯಾಗಿ ನಿಂತಿದೆ. ಹಿಂದು ಉಳಿಯಬೇಕಾದರೆ ಹಿಂದುತ್ವ ಅನಿವಾರ್ಯ. ಅವೆರಡು ಬೇರೆ ಬೇರೆ ಅಲ್ಲ. ನಮ್ಮ ಸಂಸ್ಕೃತಿ ಗೆ ಸರಿ ಸಮಾನವಾದ ಬೇರೆ ಯಾವ ಸಂಸ್ಕೃತಿಯೂ ಈ ಜಗತ್ತಿನಲ್ಲಿ ಇಲ್ಲ. ಹಿಂದು ಧಾರ್ಮಿಕ ಕೇಂದ್ರದ ನಾಯಕರು ನಾಯಕತ್ವ ವಹಿಸಿಕೊಂಡು ಹಿಂದು ಧರ್ಮವನ್ನು ಉಳಿಸಿ ಕೊಳ್ಳುವಲ್ಲಿ ಕಟಿಬದ್ಧರಾಗಬೇಕು" ಎಂದು ಬೆಂಗಳೂರಿನ ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ರಾಜಕಾರಣದಲ್ಲಿ ಯುವ ಪೀಳಿಗೆ ಪ್ರವೇಶ ಎಂಬ ವಿಷಯದಲ್ಲಿ ವಿಶೇಷ ಉಪನ್ಯಾಸದಲ್ಲಿ ತಿಳಿಸಿದರು.
ಅವರು ಶನಿವಾರದಂದು ಉಡುಪಿ ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಶ್ರೀ ನರಹರಿ ವೇದಿಕೆಯಲ್ಲಿ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ 'ವಿಶ್ವಾರ್ಪಣಮ್' ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಬಳಿಕ ಮಾತನಾಡಿದ ತೇಜಸ್ವಿ ಸೂರ್ಯ, "ಹಿಂದು ಧರ್ಮದ ವಿರೋಧಿಗಳನ್ನು ಅರ್ಥಮಾಡಿಕೊಳ್ಳುವ ಅನಿವಾರ್ಯತೆ ಇದೆ. ಹಿಂದು ಸಂಸ್ಕೃತಿಯ, ಪರಂಪರೆ ಸಮಾಜದ ಮೇಲೆ ಆಕ್ರಮಣ ನಡೆದಾಗ ರಾಜಕೀಯ ಪ್ರೇರಿತ ಸಿದ್ದಾಂತದ ಮೂಲಕ ಹಿಂದು ತೆಗೆದುಕೊಂಡು ಬಂದ ಉತ್ತರವೇ ಹಿಂದುತ್ವ. ಹಿಂದು ಸಂಸ್ಕೃತಿಯ ರಕ್ಷಣೆಗೆ ಹಿಂದುತ್ವ ಎನ್ನುವ ಅಸ್ತ್ರ ಬಳಸಬೇಕು. ಹಿಂದು ಎನ್ನುವುದು ನಂಬಿಕೆ ಅಲ್ಲ. ಎಲ್ಲಾ ಧರ್ಮಗಳು ಒಂದೇ ಅಲ್ಲ. ಒಂದೇ ಸಿದ್ದಾಂತವನ್ನು ತಿಳಿಸುವುದಿಲ್ಲ. ಎಲ್ಲರಲ್ಲಿಯೂ ದೈವತ್ವ ಕಾಣುವುದು ಹಿಂದು ಧರ್ಮದ ಮೂಲಭೂತ ಹಕ್ಕಾಗಿದೆ.ಬೇರೆ ಮತಧರ್ಮದಲ್ಲಿ ಯಾರು ಆಚಾರ ವಿಚಾರಗಳನ್ನು ಪಾಲಿಸುವುದಿಲ್ಲ. ಡಾ. ಎಪಿಜೆ ಅಬ್ದುಲ್ ಕಲಾಂರ ಜನ್ಮದಿನವನ್ನು ಯಾವ ಮುಸ್ಲಿಂ ಸಮುದಾಯವರೂ ಆಚರಿಸುವುದಿಲ್ಲ. ಏಕೆಂದರೆ ಅವರು ಭಗವದ್ಗೀತೆ ಯ ಸಾರವನ್ನು ಅರಿತು ಜನರಿಗೆ ಪ್ರಚುರ ಪಡಿಸಿದವರು. ಈಗ ಸರಿಯಾದ ಕಾಲ ಬಂದಿದೆ, ಹಾಗಾಗಿ ಹಿಂದು ಧರ್ಮದ ಬಗ್ಗೆ ನಿರ್ಭೀತಿಯಿಂದ ಹೇಳುವಂತ ಪರಿಸ್ಥಿತಿ ಇದೆ" ಎಂದರು.
"ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಸಾಫ್ಟ್ವೇರ್ ಕಂಪನಿಗಳನ್ನು ನಡೆಸುವ ಸಾಮರ್ಥ್ಯ ಭಾರತಕ್ಕಿದೆ. ಹಾಗಿರುವ ಸರಕಾರ ಏಕೆ ಧಾರ್ಮಿಕ ಕೇಂದ್ರಗಳನ್ನು ಆಳಬೇಕು. ಹಿಂದು ಸಂಸ್ಕೃತಿಯ ಉಳಿವಿಗೆ ಮಠಗಳನ್ನು, ಧಾರ್ಮಿಕ ಶ್ರದ್ದಾ ಕೇಂದ್ರಗಳನ್ನು ಗಟ್ಟಿಗೊಳಿಸಬೇಕು. ನಮ್ಮ ಮಠಗಳು ನಮ್ಮ ಕೈಯಲ್ಲಿರಬೇಕು. ಪಕ್ಷಾತೀತವಾಗಿ ಒಕ್ಕೊರಲಿನಿಂದ ಈ ಬೇಡಿಕೆಯನ್ನು ಸರಕಾರದ ಮುಂದಿಡಬೇಕು. ಜಾತಿ ತಾರತಮ್ಯವನ್ನು ವಿರೋಧಿಸಬೇಕು" ಎಂದು ತಿಳಿಸಿದರು.
"ಹಿಂದು ಧರ್ಮದಿಂದ ಮತಾಂತರ ಹೊಂದಿದವರನ್ನು ಮತ್ತೆ ನಮ್ಮ ಧರ್ಮಕ್ಕೆ ವಾಪಾಸು ಕರೆತರಬೇಕು. ಆಗ ಮಾತ್ರ ಹಿಂದು ಧರ್ಮವನ್ನು ಸದೃಢಗೊಳಿಸಲು ಸಾಧ್ಯವಾಗುತ್ತದೆ. ಅದು ಬಿಟ್ಟು ಅನ್ಯ ದಾರಿಯಿಲ್ಲ. ಪ್ರತಿ ವರ್ಷ ಅನ್ಯ ಧರ್ಮಕ್ಕೆ ಮತಾಂತರ ಆದವರನ್ನು ಇಂತಿಷ್ಟು ಮಂದಿಯಂತೆ ಮರು ಮತಾಂತರ ಮಾಡುವ ಗುರಿಯಿಟ್ಟುಕೊಂಡು ಕೆಲಸ ಮಾಡಬೇಕು. ಅದನ್ನು ಟಿಪ್ಪು ಜಯಂತಿಯಂದೇ ಘರ್ ವಾಪ್ಸಿ ಮಾಡಬೇಕು ಎನ್ನುವ ಇರಾದೆ ಇದೆ. ಮತಾಂತರಗೊಂಡವರು ತಮ್ಮ ಮೂಲ ಧರ್ಮಕ್ಕೆ ವಾಪಾಸು ಆದಾಗ ಮಾತ್ರ ಪರಂಪಾರಗತವಾದ ಹಿಂದು ಧರ್ಮ, ಸಂಸ್ಕೃತಿಯ ರಕ್ಷಣೆ ಮಾಡಬಹುದು" ಎಂದರು.
ಪರ್ಯಾಯ ಪೀಠಾಧೀಶ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು, ಖ್ಯಾತ ಜ್ಯೋತಿಷ್ಯ ಶಾಸ್ತ್ರಜ್ಞ ವಿ. ವಿಷ್ಣುಪ್ರಸಾದ್ ಹೆಬ್ಬಾರ್,ಮುಂಬೈಯ ಡಾ.ಸುರೇಶ ರಾವ್, ಉಡುಪಿಯ ಉದ್ಯಮಿ ಟಿ.ಶಂಭು ಶೆಟ್ಟಿ, ಹಿರಿಯ ಛಾಯಾಗ್ರಾಹಕ ಯಜ್ಞ ಮಂಗಳೂರು ಇವರಿಗೆ ಸನ್ಮಾನಿಸಿ ಅನುಗ್ರಹ ಸಂದೇಶ ನೀಡಿದರು.
ಶ್ರೀಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀವಿದ್ಯಾಪ್ರಸನ್ನತೀರ್ಥ ಶ್ರೀಪಾದರು ಹಾಗೂ ಕೊಂಡೆವೂರು ಶ್ರಿನಿತ್ಯಾನಂದ ಯೋಗಾಶ್ರಮದ ಶ್ರಿಯೋಗಾನಂದ ಸರಸ್ವತಿ ಸ್ವಾಮೀಜಿಯವರು ಆಶೀರ್ವಚನ ನೀಡಿದರು.
ಅಭ್ಯಾಗತರಾಗಿ ಉಡುಪಿಯ ವಾಸ್ತು ತಜ್ಞ ಶತಾವಧಾನಿ ಸುಬ್ರಹ್ಮಣ್ಯ ಭಟ್ ಮತ್ತು ಹೈದರಾಬಾದಿನ ದ್ವಾರಕಾ ಹೋಟೆಲಿನ ಬಿ.ಪಿ.ರಾಘವೇಂದ್ರ ರಾವ್ ಭಾಗವಹಿಸಿದ್ದರು.
ಮಠದ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿದರು.ಮಠದ ಆಸ್ಥಾನ ವಿದ್ವಾಂಸ ಕೃಷ್ಣರಾಜ ಭಟ್ ಕುತ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.