ಕಾರ್ಕಳ, ಡಿ. 25 (DaijiworldNews/HR): ಬಸ್ಸೊಂದರ ವ್ಯವಹಾರದಲ್ಲಿ ಮನಸ್ತಾಪದ ಉಂಟಾಗಿ ಮನೆಯೊಂದಕ್ಕೆ ನುಗ್ಗಿ ಆರೋಪಿತರು ಮಹಿಳೆಯರಿಬ್ಬರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿದ ಘಟನೆ ನಂಬಳಿಕೆ ಸಮೀಪದ ಕುರ್ಲಡ್ಕ ಕುಂಟಲ್ಗುಂಡಿ ಎಂಬಲ್ಲಿ ನಡೆದಿದೆ.
ನಂದಳಿಕೆಯ ಸೂರಜ್ ಡಿಸೋಜಾ ಎಂಬವರ ಪತ್ನಿ ವಿಲ್ಮಾ ಲೀಯಾ ಡಿಸೋಜಾ ಹಾಗೂ ಪಲಿಮಾರಿನ ಮಹೇಶ್ ಗಾಣಿಗ ಇವರು ಬಸ್ಸೊಂದರ ವ್ಯವಹಾರ ನಡೆಸುತ್ತಿದ್ದರು. ಇದೇ ವಿಚಾರದಲ್ಲಿ ಅವರಿಬ್ಬರ ನಡುವೆ ತಕರಾರು ಉಂಟಾಗಿ ಹಲವು ಬಾರಿ ಕಾರ್ಕಳ ಗ್ರಾಮಾಂತರ ಠಾಣಾ ಮೆಟ್ಟಲು ಏರಿದರು. ಪೊಲೀಸರು ಅವರಿಬ್ಬರಿಗೆ ಎಚ್ಚರಿಕೆ ನೀಡಿ ಮುಚ್ಚಳಿಕೆಯನ್ನು ಬರೆಸಿ ಕಳುಹಿಸುತ್ತಿದ್ದರು.
ಈ ನಡುವೆ ಡಿಸೆಂಬರ್ 24ರಂದು ಆರೋಪಿ ಮಹೇಶ್ ಗಾಣಿಗ ಹಾಗೂ ಆತನ ಸ್ನೇಹಿತ ನಿತಿನ್ ಶೆಟ್ಟಿ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬಂದು ನಂದಳಿಕೆ ಗ್ರಾಮದ ಕುಂಟಲ್ ಗುಂಡಿ ಎಂಬಲ್ಲಿ ಇರುವ ವಿಲ್ಮಾ ಲೀಯಾ ಡಿಸೋಜಾ ರವರ ಮನೆಯ ಜಗುಲಿಗೆ ಅಕ್ರಮ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ವಿಲ್ಮಾ ಅವರಿಗೆ ಹಲ್ಲೆಗೈದಿದ್ದಾರೆ.
ಅದೇ ವೇಳೆಗೆ ತಡೆಯಲು ಮುಂದಾದ ವಿಲ್ಮಾ ಅವರ ತಾಯಿ ನತಾಲಿಯಾ ಅರಹ್ನಾ ಮೇಲೂ ಆರೋಪಿ ಮಹೇಶ್ ಹಲ್ಲೆ ನಡೆಸಿದ್ದಾನೆ.