ವರದಿ: ಹರಿಪ್ರಸಾದ್ ನಂದಳಿಕೆ
ಬೆಳ್ಮಣ್, ಡಿ 24 (DaijiworldNews/MS): ಕ್ರಿಸ್ಮಸ್ ಸಂದರ್ಭ ಕೈಸ್ತ ಭಾಂದವರ ಮನೆಯ ಪರಿಸರ ಹಾಗೂ ಚರ್ಚ್ ಬಳಿಯಲ್ಲಿ ಅಲ್ಲಲ್ಲಿ ಆಕರ್ಷಕ ಗೋದಲಿ ನಮ್ಮನ್ನು ಕಣ್ಮನ ತಣಿಸುತ್ತದೆ. ಆದರೆ ಹಿಂದೂ ಮನೆಯಲ್ಲೂ ಗೋದಲಿ ನಿರ್ಮಾಣವಾಗಿದ್ದು ಸೌಹಾರ್ದತೆಯನ್ನು ಸಾರುವಂತಿದೆ.
ಬಹುತೇಕ ನಾವು ಗಮನಿಸುವಂತೆ ಕೈಸ್ತರ ಮನೆಯಲ್ಲಿ ಗೋದಲಿಯನ್ನು ಕಾಣುವುದು ಸಾಮಾನ್ಯ ಆದರೆ ನಂದಳಿಕೆಯಲ್ಲಿ ಹಿಂದೂ ಭಾಂಧವರ ಮನೆಯಲ್ಲಿ ಗೋದಲಿ ನಿರ್ಮಾಣವಾಗಿರುವುದು ನಿಜಕ್ಕೂ ವಿಶೇಷವಾಗಿದೆ.ಕಾರ್ಕಳ ತಾಲೂಕಿನ ನಂದಳಿಕೆ ಸರಳಾ ಎಸ್.ಹೆಗ್ಡೆಯವರು ತಮ್ಮ ಮನೆಯಲ್ಲೂ ಗೋದಲಿಯನ್ನು ನಿರ್ಮಿಸುವ ಮೂಲಕ ಕ್ರೈಸ್ತ ಬಾಂಧವರಿಗೆ ಕ್ರಿಸ್ಮಾಸ್ ಹಬ್ಬದ ಶುಭವನ್ನು ಕೋರಿದ್ದಾರೆ.
ನಂದಳಿಕೆ ಗ್ರಾಮದಲ್ಲಿ ಈ ಹಿಂದಿನಿಂದಲ್ಲೂ ಸೌಹರ್ದತೆಯಿಂದ ಕೂಡಿರುವ ಗ್ರಾಮವಾಗಿದ್ದು ಹಿಂದೂ , ಕ್ರೈಸ್ತರು ಎನ್ನುವ ಭೇಧವನ್ನು ಮರೆತು ಎಲ್ಲರೂ ಜೊತೆಯಾಗಿ ಗ್ರಾಮದ ಅಭಿವೃದ್ದಿ ಕಾರ್ಯದಲ್ಲಿ ಕೈ ಜೋಡಿಸುತ್ತಾರೆ. ಅಲ್ಲದೆ ಇತಿಹಾಸ ಪ್ರಸಿದ್ದ ನಂದಳಿಕೆ ಶ್ರೀ ಮಹಾಲಿಂಗೇಶ್ವರ ದೇವಾಲಯದಲ್ಲಿ ಪ್ರತೀ ವರ್ಷವೂ ಸಿರಿಜಾತ್ರೆಯ ಸಂದರ್ಭ ಸುಮಾರು 30ಕ್ಕೂ ಅಧಿಕ ಕ್ರೈಸ್ತ ಬಾಂಧವರು ಸ್ವಯಂ ಸೇವಕರಾಗಿ ದುಡಿಯುತ್ತಾರೆ. ಹೀಗಾಗಿ ಊರಿನಲ್ಲಿ ಸೌಹರ್ದತೆಯಿಂದ ಕೂಡಿರುವ ಗ್ರಾಮವಾಗಿದೆ.
ನಮ್ಮಲ್ಲಿ ಕ್ರೈಸ್ತರು ಎಂಬ ಭೇದಭಾವವಿಲ್ಲದೆ ಸಹೋದರತೆಯಿಂದ ಒಗ್ಗಟ್ಟಿನಿಂದ ಇರುವುದರಿಂದ ನಾವು ಅವರ ಸಂಭ್ರಮದಲ್ಲಿ ಭಾಗಿಯಾಗಿದ್ದೇವೆ. ನಮ್ಮ ಮನೆಯಲ್ಲೂ ಗೋದಲಿಯನ್ನು ನಿರ್ಮಿಸುವ ಮೂಲಕ ಕ್ರೈಸ್ತ ಭಾಂಧವರಿಗೆ ಕ್ರಿಸ್ಮಾಸ್ ಹಬ್ಬದ ಶುಭಕೋರಿದ್ದೇವೆ ಎಂದು ಸರಳಾ ಎಸ್. ಹೆಗ್ಡೆ ತಿಳಿಸಿದ್ದಾರೆ.
ಕೋಮು ಗಲಭೆಗಳು ನಡೆಯುವ ಈ ಕಾಲದಲ್ಲೂ ಸಹೋದರತೆ ಮನೋಭಾವವನ್ನು ಹೊಂದಿ ಕ್ರೈಸ್ತರ ಸಂಭ್ರಮದಲ್ಲಿ ಹಿಂದೂಗಳು ಜೊತೆಯಾಗಿ ಗೋದಲಿಯನ್ನು ನಿರ್ಮಿಸಿರುವುದು ನಿಜಕ್ಕೂ ಈ ಭಾರಿಯ ಕ್ರಿಸ್ಮಾಸ್ ಹಬ್ಬಕ್ಕೆ ಹೊಸ ಮೆರುಗು ಮೂಡಿದೆ. ಸರಳಾ ಎಸ್. ಹೆಗ್ಡೆಯವರ ಸೌಹಾರ್ದತೆಯ ಈ ಗೋದಲಿಗೆ ಮೆಚ್ಚುಗೆ ವ್ಯಕ್ತವಾಗಿದೆ.
"ನಮ್ಮ ಗ್ರಾಮದಲ್ಲಿ ಕ್ರೈಸ್ತರು ಹಿಂದೂಗಳು ಎನ್ನುವ ಭೇದವಿಲ್ಲ ಗ್ರಾಮದ ಅಭಿವೃದ್ದಿಗೆ ನಾವೆಲ್ಲರೂ ಜೊತೆಯಾಗಿ ದುಡಿಯುತ್ತೇವೆ. ನಮ್ಮ ಊರಿನ ಸಿರಿಜಾತ್ರೆಯಲ್ಲೂ ಕ್ರೈಸ್ತರು ನಮ್ಮೊಂದಿಗೆ ಕೈ ಜೋಡಿಸುತ್ತಾರೆ. ಹೀಗಾಗಿ ಅವರ ಸಂಭ್ರಮದಲ್ಲಿ ನಾವು ಗೋದಲಿಯನ್ನು ಮಾಡುವ ಮೂಲಕ ಸಹೋದರತೆ, ಸೌಹಾರ್ದತೆಯನ್ನು ಮೆರೆದಿದ್ದೇವೆ."- ಸರಳಾ ಎಸ್. ಹೆಗ್ಡೆ.