ಉಡುಪಿ, ಡಿ.24 (DaijiworldNews/PY): ಬ್ರಹ್ಮಾವರ ಬಾರ್ಕೂರು ಮೂಲದ ರೆ.ಫಾ ಗುರು ಆಲ್ಫ್ರೆಡ್ ರೋಚ್ ಅವರ ಸಾತ್ವಿಕ ಹಾಗೂ ಜನರ ಬೇಡಿಕೆಯನ್ನು ಪರಿಗಣಿಸಿ ವ್ಯಾಟಿಕನ್ನ ಸಂತರು ಹಾಗೂ ಪುನೀತರನ್ನಾಗಿ ಘೋಷಿಸುವ ವಿಭಾಗವು ಅವರನ್ನು ಪುನೀತ ಪದವಿಗೆ ಏರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲು ಅನುಮತಿ ನೀಡಿದ್ದು, ಡಿ.27ರಂದು ಈ ಪ್ರಕ್ರಿಯೆಗೆ ಚಾಲನೆ ದೊರಕಲಿದೆ.
ವಂ. ಗುರು ಆಲ್ಫ್ರೆಡ್ ರೋಚ್ ಅವರು ಉಡುಪಿ ಪರಿಸರದವರಾದ್ದರಿಂದ, ಉಡುಪಿ ಪ್ರಾಂತದ ಮಟ್ಟದ ಪ್ರಕ್ರಿಯೆಯು ಡಿ.27ರಂದು ಬೆಳಗ್ಗೆ 10 ಗಂಟೆಗೆ ಬ್ರಹ್ಮಾವರ ಪವಿತ್ರ ಕುಟುಂಬ ದೇವಾಲಯದಲ್ಲಿ ನಡೆಯುವ ದಿವ್ಯ ಬಲಿಪೂಜೆಯಲ್ಲಿ ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ರೈ. ರೆ. ಡಾ ಜೆರಾಲ್ಡ್ ಐಸಾಕ್ ಲೋಬೋ ಅವರು ಚಾಲನೆ ನೀಡಲಿದ್ದಾರೆ.
ಆಲ್ಪ್ರೆಡ್ ರೋಚ್ ಅವರ ಸಾತ್ವಿಕ ಜೀವನ, ಅವರು ಜನರಿಗೆ ಸಲ್ಲಿಸಿದ ನಿಸ್ವಾರ್ಥ ಸೇವೆ, ಬಡಜನರ ಅಭಿವೃದ್ದಿಗಾಗಿ ಅವರು ಮಾಡಿದ ಸಹಾಯದಿಂದ ಅವರನ್ನು ಆಧ್ಯಾತ್ಮಿಕತೆ ಹಾಗೂ ಜನಸೇವಯ ಮಾದರಿಯಾಗಿ ಪರಿಗಣಿಸಿ ಜಾತಿ-ಮತ, ಬೇಧವಿಲ್ಲದೇ ಜನರು ಗೌರವಿಸಿದರು. ಆಲ್ಪ್ರೆಡ್ ರೋಚ್ ಅವರು ನಿಧರಾಗಿ 25 ವರ್ಷ ಕಳೆದರೂ ಸಹ ಅವರನ್ನು ಪುನೀತ ಪದವಿಗೇರಿಸಬೇಕು ಎನ್ನುವ ಜನರ ಬೇಡಿಕೆಯು ದಿನೇ ದಿನೇ ಹೆಚ್ಚಾಗಿತ್ತು. ಈ ಎಲ್ಲಾ ಅಂಶಗಳನ್ನು ಗಮನಿಸಿ ಆಲ್ಪ್ರೆಡ್ ರೋಚ್ ಅವರನ್ನು ಪುನೀತ ಪದವಿಗೆ ಏರಿಸುವ ಪ್ರಕ್ರಿಯೆಗೆ ಚಾಲನೆ ನೀಡುವಂತೆ ಸೂಚಿಸಲಾಗಿದೆ.
ಫಾ. ಆಲ್ಪ್ರೆಡ್ ರೋಚ್ 1924ರ ಎ.23ರಂದು ಬಾರಕೂರು ಮೂಡುಹಡುವಿನಲ್ಲಿರುವ ಸೈಂಟ್ ಪೀಟರ್ಸ್ ಚರ್ಚ್ನಲ್ಲಿ ಜನಿಸಿದರು. ಇವರ ಬಾಪ್ಟಿಸಮ್ನ ಹೆಸರು ಪೀಟರ್ ಜಾನ್ ರೋಚ್ ಎಂದಾಗಿತ್ತು. ಅಲ್ಪ್ರೆಡ್ ರೋಚ್ ಅವರು ತಮ್ಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ಶಿಕ್ಷಣವನ್ನು ಮೂಡಹಡು, ಸಾಸ್ತಾನ ಹಾಗೂ ಮಿಲಾಗ್ರಿಸ್ ಕಲ್ಯಾಣಪುರದಲ್ಲಿ ಪೂರ್ಣಗೊಳಿಸಿದ ಬಳಿಕ ಅವರು1944ರಲ್ಲಿ ಕಾಪುಚಿನ್ಸ್ ಸಭೆಯನ್ನು ಸೇರಿದರು. ಇಲ್ಲಿ ಅವರು ತಮ್ಮ ಹೆಸರನ್ನು ಆಲ್ಪ್ರೆಡ್ ಎಂದು ಬದಲಾಯಿಸಿಕೊಂಡರು. 1951ರ ಎ.11ರಂದು ಇವರಿಗೆ ಕೋಟಗಿರಿಯಲ್ಲಿ ಯಾಜಕೀ ದೀಕ್ಷೆ ಲಭಿಸಿತು.
ಫರಂಗಿಪೇಟೆಯ ಮಾಂಟೆ ಮರಿಯಾನೊನಲ್ಲಿ ತನ್ನ ಆರಂಭಿಕ ಪೌರೋಹಿತ್ಯ ದಿನಗಳನ್ನು ನವಶಿಷ್ಯರಾಗಿ ಕಳೆದ ಬಳಿಕ ಇವರು 1956ರಲ್ಲಿ ಬ್ರಹ್ಮಾವರದ ಹೋಲಿ ಫ್ಯಾಮಿಲಿ ಚರ್ಚ್ನ ಮೊದಲ ಕಾಪುಚಿನ್ ಪಾದ್ರಿ ಆಗಿ ಅಧಿಕಾರ ವಹಿಸಿಕೊಂಡರು. ಅವರ ನಿವೃತ್ತಿಯ ಬಳಿಕ 90ರ ದಶಕದ ಮಧ್ಯದಲ್ಲಿ ಮತ್ತೆ ಬ್ರಹ್ಮಾವರಕ್ಕೆ ಬಂದರು. 1996ರ ಡಿ.31ರಂದು ಅವರ ಮರಣದ ಬಳಿಕ ಅವರನ್ನು ಇಲ್ಲಿಯೇ ಸಮಾಧಿ ಮಾಡಲಾಯಿತು.
ಮಂಗಳೂರು ಡಯಾಸಿಸ್ನ ಮಾಜಿ ವಿಕಾರ್ ಜನರಲ್ ಹಾಗೂ ಬೆಥನಿಯ ಲಿಟರ್ ಫ್ಲವರ್ ಸಹೋದರಿಯ ಸಭೆಯ ಸ್ಥಾಪಕ ಮೊನ್ಸಿಂಜರ್ ರೇಮಂಡ್ ಫ್ರಾನ್ಸಿಸ್ ಕ್ಯಾಮಿಲ್ಲಸ್ ಮಸ್ಕರೇನ್ಹಸ್, ಅವರ ನಂತರ ಈ ಗೌರವಕ್ಕೆ ಪಾತ್ರರಾದ ಕರ್ನಾಟಕ ಮೂಲದ ಎರಡನೇ ವ್ಯಕ್ತಿ ಫಾ. ಆಲ್ಪ್ರೆಡ್ ರೋಚ್. ಉಡುಪಿ ಧರ್ಮಪ್ರಾಂತ್ಯ ಸ್ಥಾಪನೆಯಾದ ಅತಿ ಅಲ್ಪಾವಧಿಯಲ್ಲಿ ಇಂತಹ ಗೌರವಕ್ಕೆ ಪಾತ್ರವಾಗಿರುವುದು ಧರ್ಮಪ್ರಾಂತ್ಯದ ಮತ್ತೊಂದು ವಿಶಿಷ್ಟತೆಯಾಗಿದೆ.