ಉಳ್ಳಾಲ, ಡಿ.22 (DaijiworldNews/SM): ನೇತ್ರಾವತಿ ಸೇತುವೆಯ ಮೇಲಿನಿಂದ ದಟ್ಟವಾದ ಹೊಗೆ ಆವರಿಸಿತ್ತು, ನದಿ ತಟದಲ್ಲಿ ಬೆಂಕಿಯೂ ಉರಿಯುತಿತ್ತು, ವಾಹನ ಸವಾರರು ಕುತೂಹಲದಿಂದ ರಾ.ಹೆ.ಯಲ್ಲಿ ವಾಹನಗಳನ್ನು ನಿಲ್ಲಿಸಿ ನೋಡಿದಾಗ ಮನದಲ್ಲಿ ಮೂಡಿದ ಭೀತಿಗೆ ಉತ್ತರ ಸಿಕ್ಕಿತ್ತು.
ನೇತ್ರಾವತಿ ರೈಲ್ವೇ ಸೇತುವೆ ಬಳಿ ಬೆಂಕಿ ಹೊತ್ತಿ ಉರಿಯುವುದನ್ನು ಗಮನಿಸಿದ ಹಲವರು ರೈಲು ಅವಘಢ ಎಂದು ಹೇಳಿಕೊಳ್ಳುತ್ತಿದ್ದರು, ಇನ್ನು ಕೆಲವರು ಮನೆ ಬೆಂಕಿಗೆ ಆಹುತಿ ಅನ್ನುವ ಮಾತುಗಳನ್ನು ಆಡಿದರು. ವಾಹನ ಸವಾರರು ಹೆದ್ದಾರಿ ಬಳಿ ಹೆಚ್ಚಿನ ಸಂಖ್ಯೆಯಲ್ಲಿ ವಾಹನಗಳನ್ನು ನಿಲ್ಲಿಸಿ ಕುತೂಹಲದಿಂದ ಗಮನಿಸಿದರೂ, ಬೆಂಕಿ ದೂರದಲ್ಲಿ ಕಾಣುತ್ತಿರುವುದರಿಂದ ಉತ್ತರ ಸಿಗದೇ ವಾಪಸ್ಸಾದರು. ಬಹಳ ಹೊತ್ತಿನ ಬಳಿಕ ಸ್ಥಳೀಯರೊಬ್ಬರು ರಸ್ತೆ ಬದಿಯಲ್ಲಿ ನಿಂತು ಹಲವರ ಕುತೂಹಲಕ್ಕೆ ಉತ್ತರ ನೀಡಿದರು. ಸ್ಥಳೀಯ ಮನೆಮಂದಿಯೋರ್ವರು ಕ್ರಿಸ್ಮಸ್ ಹಬ್ಬ ಆಗಿರುವುದರಿಂದ ಮನೆಯ ಸುತ್ತ ಸ್ವಚ್ಛಗೊಳಿಸಿದ ನಂತರ ದೊರೆತ ತ್ಯಾಜ್ಯದ ರಾಶಿ ಹಾಗೂ ಥರ್ಮಕೋಲಿಗೆ ಬೆಂಕಿಯನ್ನು ಹಾಕಿದ್ದಾರೆಂದು ತಿಳಿಸಿದರು. ಘಟನೆಯಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.