ಮಂಗಳೂರು, ಡಿ.23 (DaijiworldNews/PY): ಗೋವೆಯ ಕೊಂಕಣಿ ಕವಿ ಆರ್. ರಾಮನಾಥ್ ಅವರು ಕವಿತಾ ಟ್ರಸ್ಟಿನ 2021ನೇ ಸಾಲಿನ ಮಥಾಯಸ್ ಕುಟುಂಬದ ಕವಿತಾ ಪುರಸ್ಕಾರಕ್ಕೆ ಭಾಜನರಾಗಿದ್ದಾರೆ.
ಈ ಪ್ರಶಸ್ತಿಯು 25,000 ರೂ. ನಗದು, ಸ್ಮರಣಿಕೆ ಹಾಗೂ ಮಾನಪತ್ರವನ್ನು ಒಳಗೊಂಡಿದ್ದು, ಈ ಪುರಸ್ಕಾರವನ್ನು 2022 ಜನವರಿ 9ರಂದು ಮಂಗಳೂರಿನ ವಿಶ್ವ ಕೊಂಕಣಿ ಕೇಂದ್ರದಲ್ಲಿ ನಡೆಯುವ ಹದಿನಾರನೇ ಕವಿತಾ ಫೆಸ್ತ್ ಸಂದರ್ಭ ನೀಡಲಾಗುವುದು.
ಆರ್. ರಾಮನಾಥ್ ಅವರು 1956ರಲ್ಲಿ ಗೋವೆಯ ಪೋಂಡಾದಲ್ಲಿ ಜನಿಸಿದ್ದು, ಇವರು ಎಲೆಕ್ಟ್ರೋನಿಕ್ಸ್ ವಿಭಾಗದಲ್ಲಿ ಐಟಿಐ ಹಾಗೂ ಎಟಿಐ ಶಿಕ್ಷಣ ಪಡೆದು ಸರಕಾರಿ ಕರ್ಮಾಚಾರಿಯಾಗಿ ನಿವೃತ್ತಿ ಹೊಂದಿದ್ದಾರೆ.
ಮಳಬ್ರಂಗ್ಮಾಚಿ (1989), ನಿಸಣ್ (2013) ಮತ್ತು ವಿಸ್ತವ್ (2015) - ಇವು ರಾಮನಾಥ್ ಅವರ ಕೊಂಕಣಿ ಕವಿತೆಯ ಸಂಗ್ರಹಗಳಾಗಿವೆ. ದರ್ವಾಜೆ: ಬುಟ್ಕೆ ಆನಿ ಉಂಚ್ (1994) ಮರಾಠಿಯಲ್ಲಿ ಪ್ರಕಟಗೊಂಡ ಕಾವ್ಯಸಂಗ್ರಹ, ಅವರ ಕವಿತೆಗಳಾದ ಜಾಗ್, ಬಿಂಬ್ ಮಾಸಿಕಗಳಲ್ಲಿ, ಭಾಂಗರ್ಭುಂಯ್ ದೈನಿಕ ಮತ್ತು ಇತರೇ ಪತ್ರಗಳಲ್ಲಿ ಖಾಯಂ ಆಗಿ ಪ್ರಕಟಗೊಳ್ಳುತ್ತಿವೆ.
ಕಲಾ ಅಕಾಡೆಮಿ ಸಾಹಿತ ಪುರಸ್ಕಾರ, ಬಿಂಬ್ ಪ್ರಕಾಶನ ಪುರಸ್ಕಾರ, ಗೋವೆಯ ಕೊಂಕಣಿ ಅಕಾಡೆಮಿ ಸಾಹಿತ್ಯ ಪುರಸ್ಕಾರ, ಗೋಮಂತ್ ವಿದ್ಯಾ ನಿಕೇತನ್ ಪುರಸ್ಕಾರ, ಸೋಹಿರೊಬಾನಾತ್ ಅಂಬಿಯೆ ಪುರಸ್ಕಾರ, ಕೊಂಕಣಿ ಕಲಾ ಸಾಹಿತ್ಯ್ ಕೇಂದ್ರ, ಕುರ್ಚೊರೆಂ ಪುರಸ್ಕಾರ, ಬೋರಿ ಡೆವೆಲಪ್ಮೆಂಟ್ ಟ್ರಸ್ಟ್, ಬಾಕಿಬಾಬ್ ಬೋರ್ಕರ್ ಪುರಸ್ಕಾರ ಹೀಗೆ ಹಲವು ಹತ್ತು ಪ್ರತಿಷ್ಠಿತ ಪುರಸ್ಕಾರಗಳು ಅವರಿಗೆ ಒಲಿದಿವೆ.
ಇನ್ನು, ರಾಷ್ಟ್ರೀಯ ಕವಿತಾ ಸಮ್ಮೇಳನದಲ್ಲಿ ಅವರ ಕವಿತೆಗಳನ್ನು ಆಕಾಶವಾಣಿ ಪ್ರಸಾರ ಮಾಡಿದೆ. ರಾಮನಾಥ್ ಅವರು, ಸಾಹಿತ್ಯ ಅಕಾಡೆಮಿಯ ಪೂರ್ವೋತ್ತರಿ ಹಾಗೂ ಪಶ್ಚಿಮೀ ಭಾರತೀಯ ಸಾಹಿತ್ಯ ಸಮ್ಮೇಳನಗಳಲ್ಲಿ, ಕವಿತಾ ಟ್ರಸ್ಟಿನ ಕವಿತಾ ಫೆಸ್ತ್ ಕವಿ ಸಮ್ಮೇಳನದಲ್ಲಿ ಭಾಗವಹಿಸಿದ್ದಾರೆ.
ರಾಮನಾಥ್ ಅವರ ಗೀತೆ ಹಾಗೂ ಕವಿತೆಗಳು ಆಕಾಶವಾಣಿ ಪಣಜಿ ಕೇಂದ್ರದಲ್ಲಿ ಜನಪ್ರಿಯವಾಗಿವೆ. ಇನ್ನು ಕೊಂಕಣಿ ಹೈಕೂಗಳ ಅವರ ಪುಸ್ತಕ ಸದ್ಯದಲ್ಲೇ ಬರಲಿದೆ.
ಕವಿತಾ ಟ್ರಸ್ಟಿನ ಮಥಾಯಸ್ ಕುಟುಂಬದ ಕವಿತಾ ಪುರಸ್ಕಾರವನ್ನು ಮೆರಿಟ್ ಫ್ರೈಟ್ ಸಿಸ್ಟಮ್ಸ್ ದುಬಾಯ್ ಇದರ ಆಡಳಿತ ನಿರ್ದೇಶಕ ಉದ್ಯಮಿ ಜೋಸೆಫ್ ಮಥಾಯಸ್ ಕುಪ್ಪೆಪದವು ತಮ್ಮ ಕುಟುಂಬದ ಹೆಸರಿನಲ್ಲಿ ನೀಡುತ್ತಿದ್ದು, ಈ ಹಿಂದೆ ಈ ಪುರಸ್ಕಾರವು ಗೋವಾ, ಕರ್ನಾಟಕ, ಕೇರಳ ಹಾಗೂ ಮುಂಬೈ ಪ್ರದೇಶದ 13 ಕವಿಗಳಿಗೆ ದೊರೆತಿತ್ತು ಈ ಪ್ರತಿಷ್ಟಿತರ ಸಾಲಿನಲ್ಲಿ ಆರ್. ರಾಮನಾಥ್ ಅವರು ಹದಿನಾಲ್ಕನೆಯವರು.
ಕವಿತಾ ಟ್ರಸ್ಟಿನ ಈ ವರ್ಷದ ಪುರಸ್ಕಾರಕ್ಕೆ 11 ಜನರ ಹೆಸರುಗಳು ಬಂದಿದ್ದು, ಪುರಸ್ಕಾರ ಸಮಿತಿ ಸೂಚಿಸಿದ್ದ ಹೆಸರುಗಳಲ್ಲಿ ಕವಿತಾ ಟ್ರಸ್ಟ್ ಸಭೆಯಲ್ಲಿ ಆರ್. ರಾಮನಾಥ ಅವರನ್ನು ಪುರಸ್ಕಾರಕ್ಕಾಗಿ ಆಯ್ಕೆ ಮಾಡಲಾಗಿದೆ.