Karavali
ಕಾರ್ಕಳ: ಮುಂಡ್ಲಿ ಗೇಟ್ ಹಗರಣ : ಪೊಲೀಸ್ ವರದಿ ಬಹಿರಂಗಪಡಿಸಲು ಆಗ್ರಹ
- Thu, Dec 23 2021 05:09:51 PM
-
ಕಾರ್ಕಳ, ಡಿ 23 (DaijiworldNews/MS): ಕಾರ್ಕಳ ಪುರಸಭಾ ವ್ಯಾಪ್ತಿಗೆ ಸಮಗ್ರ ಕುಡಿಯುವ ನೀರು ಸರಬರಾಜು ಆಗುತ್ತಿರುವ ದುರ್ಗ-ತೆಳ್ಳಾರಿನ ಬಲ್ಮಗುಂಡಿಯ ಮುಂಡ್ಲಿ ಕಿರುಅಣೆಕಟ್ಟಿಗೆ ಅಳವಡಿಸುವ ೧೨೫ ಕೆ.ಜಿ ಭಾರವಿರುವ 150 ಕಬ್ಬೀನ ಗೇಟ್ಗಳ ಕಳವು ಕೃತ್ಯದ ಕುರಿತು ಪೊಲೀಸರ ವರದಿಯನ್ನು ಬಹಿರಂಗ ಪಡಿಸುವಂತೆ ಪ್ರತಿಪಕ್ಷ ನಾಯಕ ಅಶ್ಪಕ್ ಅಹಮ್ಮದ್ ಆಗ್ರಹಿಸಿದ್ದಾರೆ.
ಕಾರ್ಕಳ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಈ ವಿಚಾರವನ್ನು ಪ್ರಸ್ತಾಪಿಸಿ ಮಾತನಾಡಿ, ಪುರಸಭಾ ಅಧೀನದಲ್ಲಿರುವ ಬೆಲೆಬಾಳುವ ಕೋಟ್ಯಾಂತರ ರೂ.ಮೌಲ್ಯದ ಸೊತ್ತಿಗೆ ರಕ್ಷಣೆ ಮಾಡುವವರು ಯಾರು? ಇಂತಹದೇ ಇನ್ನಿತರ ಸೊತ್ತುಗಳ ಕಥೆ-ವ್ಯಥೆ ಏನು? ಈ ಕೃತ್ಯದ ತೆರೆ ಮರೆಯಲ್ಲಿ ಇನ್ನಿತರ ವ್ಯಕ್ತಿಗಳಿದ್ದು, ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಎಡೆಮುರಿ ಕಟ್ಟಬೇಕು. ಒಬ್ಬ ನಿರಾಪರಾಧಿಗೆ ಶಿಕ್ಷೆಯಾಗದೇ ತಪ್ಪಿಸ್ಥರ ವಿರುದ್ಧ ಕ್ರಮಕ್ಕೆ ಅವರು ಇದೇ ಸಂದರ್ಭದಲ್ಲಿ ಒತ್ತಾಯಿಸಿದರು.ಇಂತಹದೇ ವಿಚಾರವನ್ನು ಮುಂದಿಟ್ಟು ಕಳೆದ ಮೂರು ಸಭೆಗಳ ಹಿಂದೆ ಸಾಮಾನ್ಯ ಸಭೆಯಲ್ಲಿ ದುಸ್ಥಿತಿಯಲ್ಲಿರುವ ಬೆಲೆಬಾಳುವ ವಸ್ತುಗಳನ್ನು ರಾಮಸಮುದ್ರದ ದಾಸ್ತನು ಗೋದಾನಿದಲ್ಲಿ ಇರಿಸಬೇಕಾಗಿದ್ದರೂ ಅವೆಲ್ಲವೂ ವ್ಯಕ್ತಿಯೊಬ್ಬರಿಗೆ ಸೇರಿದ ಗೋದಾಮಿನಲ್ಲಿ ಶೇಖರಿಸುತ್ತಿದ್ದು, ಇದರಿಂದ ಪುರಸಭಾ ಆದಾಯಕ್ಕೆ ಲಕ್ಷಾಂತರ ರೂ.ನಷ್ಟ ಉಂಟಾಗುತ್ತಿರುವ ವಿಚಾರವನ್ನು ಪ್ರಸ್ತಾಪಿಸಿದೆ. ಆದರೆ ಅದೇ ವಿಚಾರದಲ್ಲಿ ನನ್ನ ವಿರುದ್ಧ ಷಡ್ಯಂತರ ನಡೆಸಿರುವುದನ್ನು ಬಯಲು ಪಡಿಸಿದರು.
ಆಡಳಿತ ಹಾಗೂ ಪ್ರತಿಪಕ್ಷ ಸದಸ್ಯರು ತಮ್ಮ ಸಹಮತ ವ್ಯಕ್ತಪಡಿಸಿ ಮುಂಡ್ಲಿ ಗೇಟ್ ಹಗರಣ ಕುರಿತು ಸಮಗ್ರ ತನಿಖೆಯಾಗಬೇಕೆಂದು ನಿರ್ಣಯ ಕೈಗೊಂಡರು.
ಕೊಳಚೆ ನಿರ್ಮೂಲನ ಮಂಡಳಿಯ ಚರಂಡಿ ಮಣ್ಣುಪಾಲು
ಮನೆ ಹಾಗೂ ವಾಣಿಜ್ಯ ಸಂಕೀರ್ಣಗಳು ತಲೆಎತ್ತುತ್ತಿರುವ ಸಂದರ್ಭದಲ್ಲಿ ಕೊಳಚೆ ನಿರ್ಮೂಲನ ಮಂಡಳಿಯಿಂದ ನಿರ್ಮಾಣಗೊಂಡಿರುವ ಬೆಲೆಬಾಳುವ ಚರಂಡಿಗಳು ಮಣ್ಣುಪಾಲಾಗುತ್ತಿದೆ. ಕಟ್ಟಡ ನಿರ್ಮಾಣದ ಪರಿಕರಗಳನ್ನು ಶೇಖರಿಸಿಡಲು ಸ್ಥಳದ ಅವಕಾಶ ಇಲ್ಲದಿದ್ದಾಗ ಚರಂಡಿಗೆ ತುಂಬಿ ಹಾಕಲಾಗುತ್ತದೆ. ಮಾತ್ರವಲ್ಲದೇ ಚರಂಡಿಯನ್ನು ಹಾಳುಗೆಡವಲಾಗುತ್ತದೆ. ಮನೆ ಹಾಗೂ ವಾಣಿಜ್ಯ ಸಂಕೀರ್ಣ ಕಾಮಗಾರಿ ಪೂರ್ಣಗೊಂಡಾಗ ಡೋರ್ ನಂಬ್ರ ನೀಡುವ ಮುನ್ನ ಚರಂಡಿಯ ಕಡೆ ಗಮನ ಹರಿಸಬೇಕು. ಮದ್ಯವರ್ತಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಹಣದ ಥೈಲಿಯ ಮುಂದೆ ಕಾನೂನು ನಗಣ್ಯವಾಗಬಾರದು. ಸ್ಥಳೀಯ ಕೌನ್ಸಿಲರ ಒಪ್ಪಿಗೆಯೊಂದಿಗೆ ಡೋರ್ ನಂಬ್ರ ನೀಡುವಂತಾಗಲಿ ಎಂಬ ತಮ್ಮ ಅಭಿಪ್ರಾಯವನ್ನು ಅಶ್ಪಕ್ ಅಹಮ್ಮದ್ ಸಭೆಗೆ ಮಂಡಿಸಿದರು.ಸಿ.ಡಿ ಸಿಡಿಯಲೇ ಇಲ್ಲ!
ಕಳೆದ ಮಾಸಿಕ ಸಭೆಯಲ್ಲಿ ಪ್ರತಿಪಕ್ಷ ಸದಸ್ಯ ಸೋಮನಾಥ ನಾಯ್ಕ ಗಂಭೀರ ಆರೋಪವನ್ನುಂಟು ಮಾಡಿರುವ ವಿಚಾರದ ಕುರಿತು ಆಡಳಿತ ಪಕ್ಷದ ಯೋಗೀಶ್ ದೇವಾಡಿಗ ಮಾತನಾಡಿ, ಕಾರ್ಕಳ ಪುರಸಭೆಯ ಅಧೀನದಲ್ಲಿ ಇರುವ ವಾಣಿಜ್ಯ ಸಂಕೀರ್ಣಗಳ ಬಾಡಿಗೆ, ಸ್ಥಳ ಬಾಡಿಗೆ ಸೇರಿದಂತೆ ಜಿಎಸ್ಟಿ ಹೊರತು ಪಡಿಸಿ ಸುಮಾರು ರೂ. ೩೦ ಲಕ್ಷ ಮೊತ್ತ ಸಂಗ್ರಹಕ್ಕೆ ಬಾಕಿ ಉಳಿದಿದೆ. ವಾಣಿಜ್ಯ ಸಂಕೀರ್ಣದ ವ್ಯಾಪಾರ ಮಳಿಗೆಗಳನ್ನು ಬಾಡಿಗೆ ಪಡೆದುಕೊಂಡುವರು ಹೆಚ್ಚುವರಿ ಮೊತ್ತದಲ್ಲಿ ಮತ್ತೊಬ್ಬರಿಗೆ ಒಳಬಾಡಿಗೆಯಾಗಿ ನೀಡಿದ್ದಾರೆ. ಬಹುತೇಕ ವ್ಯಾಪಾರ ಮಳಿಗೆಗಳಿಗೆ ಲೈನಸ್ಸ್ ಇಲ್ಲ. ಈ ಎಲ್ಲಾ ಅವ್ಯವಹಾರದಲ್ಲಿ ಪುರಸಭಾ ಸಿಬ್ಬಂದಿಯೊಬ್ಬರು ಶಾಮೀಲಾಗಿದ್ದಾರೆ. ಮುಖ್ಯಾಧಿಕಾರಿಯವರ ನೇತೃತ್ವದಲ್ಲಿ ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು. ಇಲ್ಲವಾದರೆ ನವಂಬರ್ ತಿಂಗಳ ಮೊದಲವಾರದಲ್ಲಿ ಈ ಕುರಿತು ಸಮಗ್ರ ವಿವರಯುಳ್ಳ ಸಿಡಿಯೊಂದನ್ನು ಬಿಡುಗಡೆಗೊಳಿಸಿ ಪುರಸಭಾ ಕಚೇರಿಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ಬಯಲುಗೊಳಿಸುವುದಾಗಿ ಪ್ರತಿಪಕ್ಷ ಸದಸ್ಯ ಸೋಮನಾಥ ನಾಯ್ಕ ಎಚ್ಚರಿಸಿದ್ದಾರೆ. ಇದೀಗ ಸಿ.ಡಿ ಮೂಲಕವಾದರೂ ಭ್ರಷ್ಟಾಚಾರ ಅಧಿಕಾರಿ ಹಾಗೂ ಸಿಬ್ಬಂದಿಗಳ ಹೆಸರು ಬಹಿರಂಗ ಪಡಿಸಿ ಇಲ್ಲದಿದ್ದರೆ ಕ್ಷಮೆ ಕೇಳುವುಂತೆ ಒತ್ತಾಯಿಸಿದರು.
ಇದಕ್ಕೆ ಪ್ರತ್ಯುತ್ತರ ನೀಡಿ ಮಾಹಿತಿ ಹಕ್ಕುನಂತೆ ಹಲವು ಅರ್ಜಿಗಳನ್ನು ಪುರಸಭಾ ಆಡಳಿತಕ್ಕೆ ಸಲ್ಲಿಸಿದರೂ ತಿಂಗಳು ಕಳೆದರೂ ಅದಕ್ಕೆ ಉತ್ತರಿಸುವಲ್ಲಿ ಪುರಸಭಾ ಆಡಳಿತ ವಿಫಲವಾಗಿದೆ ಎಂಬ ವಿಚಾರದೊಂದಿಗೆ ಮಾಹಿತಿ ಹಕ್ಕಿನ ಅರ್ಜಿಗಳನ್ನು ಸಭೆಯಲ್ಲಿ ಓದಿ ಹೇಳಿದರು.
ಇದಕ್ಕೆ ತೃಪ್ತಿಗೊಳ್ಳದ ಆಡಳಿತ ಪಕ್ಷದ ಸದಸ್ಯರು ಒಗ್ಗೂಡಿ ಆರೋಪ ಮಾಡುವುದು ಸುಲಭ ಅದನ್ನು ಸಾಬೀತು ಮಾಡುವುದೇ ಕಷ್ಟ. ಮಾಹಿತಿ ಹಕ್ಕಿನಲ್ಲಿ ಸಲ್ಲಿಸಿದ ಪತ್ರಗಳಲ್ಲಿ ಒಂದು ಕೂಡಾ ಬಾಡಿಗೆ ವಿಚಾರಕ್ಕೆ ಸಂಬಂಧಿಸಿದಲ್ಲ. ಆದುದರಿಂದ ಕ್ಷಮೆ ಕೇಳಲೇ ಬೇಕು ಎಂದು ಒತ್ತಾಯಿಸ ತೊಡಗಿದರು.
ಪ್ರತಿಪಕ್ಷ ಸದಸ್ಯ ಶುಭದರಾವ್ ಮಾತನಾಡಿ, ಭ್ರಷ್ಟಾಚಾರ ನಡೆಸಿದ್ದರೆಂಬ ಆರೋಪಕ್ಕೆ ಗುರಿಯಾದವರು ಅಧಿಕಾರಿ ಹಾಗೂ ಸಿಬ್ಬಂದಿಗಳು ಅದಕ್ಕೆ ಪೂರಕವಾಗಿ ಮಾಹಿತಿ ಹಕ್ಕಿನಂತೆ ಪತ್ರ ಸಲ್ಲಿಸಿದ್ದಾರೆ. ಉತ್ತರ ನೀಡಲು ಸಾಧ್ಯವಾಗದೇ ಹೋದಲ್ಲಿ ಅಲ್ಲಿ ಭ್ರಷ್ಟಾಚಾರ ನಡೆದಿದೆ ಎಂಬುದಕ್ಕೆ ಪುಷ್ಠೀ ನೀಡುತ್ತದೆ. ಆದರೆ ಆಡಳಿತ ಪಕ್ಷದ ಸದಸ್ಯರು ಕ್ಷಮೆ ಕೇಳಬೇಕೆಂದು ಒತ್ತಾಯಿಸುತ್ತಿರುವ ಹಿಂದೆ ಅವರುಗಳೇ ಭ್ರಚ್ಟಾಚಾರ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಬೆಂಬಲಿಸಿದಂತೆ ಕಾಣುತ್ತಿದೆ. ಸಿ.ಡಿ ಇನ್ನೂ ಅವರಲ್ಲಿ ಇದೆ. ಮುಂದಿನ ದಿನಗಳಲ್ಲಿ ಬಯಲು ಗೊಳಿಸುತ್ತೇವೆಂದು ಧ್ವನಿಗೂಡಿಸಿದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ಯೋಗೀಶ್ ದೇವಾಡಿಗ ಮಾತನಾಡಿ, ಸಿ.ಡಿ. ಇಲ್ಲವಾದರೇ ಪೆನ್ಡ್ರ್ಯಾವ್ ಬಿಡುಗಡೆಗೊಳಿಸಿ ಎಂದು ವ್ಯಂಗ್ಯವಾಡಿದರು.ಇಂಜಿನಿಯರ್ ನಿಯೋಜಿಸಿ:
ಕಾರ್ಕಳ ಪುರಸಭೆಯಲ್ಲಿ ಹಲವು ಹುದ್ದೆಗಳು ತೆರವುಗೊಂಡಿದ್ದು, ಅದನ್ನು ಭರ್ತಿ ಮಾಡುವಂತೆ ಪ್ರತಿಪಕ್ಷ ಸದಸ್ಯರು ಸರಕಾರವನ್ನು ಆಗ್ರಹಿಸಿದ್ದಾರೆ.
ಅಭಿಯಂತರ ಹುದ್ದೆ ತೆರವುಗೊಂಡಿರುವುದರಿಂದ ಲೋಕೋಪಯೋಗಿ ಇಲಾಖೆಯ ಸಹಾಯಕ ಅಭಿಯಂತರರೇ ಹೆಚ್ಚುವರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇದರಿಂದ ಪುರಸಭಾ ಅಭಿವೃದ್ಧಿ ಕಾರ್ಯಕ್ಕೆ ಚುಕ್ತಿ ಬಂದಿದೆ ಎಂದರು.
ಇದಕ್ಕೆ ಧ್ವನಿಗೂಡಿಸಿದ ಆಡಳಿತ ಪಕ್ಷದ ಸದಸ್ಯೆ ಮೀನಾಕ್ಷಿ ಗಂಗಾಧರ್ ಮಾತನಾಡಿ, ಕುಂಟಲ್ಪಾಡಿಯ ಪ್ರಮುಖ ರಸ್ತೆಯಲ್ಲಿನ ಭಾರೀ ಗಾತ್ರದ ಹೊಂಡ ಮುಚ್ಚಲು ನಾವೇ ಅಧಿಕಾರಿಗಳಿಗೆ ದಂಬಾಲು ಬೀಳಬೇಕಾದ ದುರ್ಗತಿ ಎದುರಾಗಿದೆ. ನಾಗರಿಕರು ಪುರಸಭಾ ವಿರುದ್ಧ ಆಕ್ರೋಶಗೊಂಡು ಬೀದಿಗಿಳಿದು ಸ್ವಯಂ ಪ್ರೇರಿತರಾಗಿ ಗುಂಡಿ ಮುಚ್ಚುವ ಕಾಮಗಾರಿ ನಡೆಸಿದ್ದಾರೆ ಎಂಬ ಮಾಹಿತಿಗೆ ಪೂರಕವಾಗಿ ಆಡಳಿತ ಪಕ್ಷದ ಸದಸ್ಯರು ಮಾತನಾಡಿ, ಪ್ರಮುಖ ರಸ್ತೆ ಎಂದರೆ ಕೇವಲ ಪುರಸಭೆಗೆ ಅಗಮಿಸುವ ರಸ್ತೆ ಮಾತ್ರ ಅಲ್ಲ. ಉಡುಪಿ-ಕಾರ್ಕಳ ಕಾರ್ಕಳ, ಪುಲ್ಕೇರಿ-ಕಾರ್ಕಳ ನಗರ, ಜೋಡುರಸ್ತೆ-ಕಾರ್ಕಳ ನಗರ, ದುರ್ಗ-ಕಾರ್ಕಳ ನಗರ, ಪಡುಬಿದ್ರಿ-ಕಾರ್ಕಳ ನಗರ ರಸ್ತೆಗಳು ಇವೆ. ಇದು ಮಾತ್ರವಲ್ಲದೇ ಹೊಂಡ-ಗುಂಡಿ ಮುಚ್ಚುವ ಕಾರ್ಯವು ಪುರಸಭಾ ವ್ಯಾಪ್ತಿಯ ಪ್ರತಿಯೊಂದು ರಸ್ತೆಯಲ್ಲಿ ನಡೆಯಲೇ ಬೇಕೆಂದರು.ಕಾರ್ಕಳ ಪುರಸಭಾ ಅಧ್ಯಕ್ಷೆ ಸುಮ ಕೇಶವ ಅಧ್ಯಕ್ಷತೆ ವಹಿಸಿದರು. ಉಪಾಧ್ಯಕ್ಷೆ ಪಲ್ಲವಿರಾವ್ ಸ್ಥಾಯೀ ಸಮಿತಿ ಅಧ್ಯಕ್ಷ ಲಕ್ಷ್ಮೀ ನಾರಾಯಣ ಮಲ್ಯ, ಮುಖ್ಯಾಧಿಕಾರಿ ರೂಪಾ ಶೆಟ್ಟಿ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.