ಕಾಪು, ಡಿ 23 (DaijiworldNews/MS): "ಎಂಇಎಸ್ ಮಹಾರಾಷ್ಟ್ರದ ಏಕೀಕರಣಕ್ಕಾಗಿ ಕೆಲಸ ಮಾಡಬೇಕೇ ಹೊರತು ಕರ್ನಾಟಕದಲ್ಲಿ ಅಲ್ಲ. ನಮ್ಮ ರಾಜ್ಯಕ್ಕೆ ಎಂಇಎಸ್ ಅಗತ್ಯವಿಲ್ಲ.ಬೆಳಗಾವಿಯಲ್ಲಿ ಎಂಇಎಸ್ ಪುಂಡಾಟಿಕೆ ನಿಲ್ಲಿಸಲು ಹಾಗೂ ಅದನ್ನು ಮಣಿಸಲು ಎಲ್ಲಾ ರಾಜಕೀಯ ಪಕ್ಷ ಒಗ್ಗಟ್ಟಾಗಬೇಕು"ಎಂದು ರಾಜ್ಯ ಕೃಷಿ ಮತ್ತು ರೈತ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಕಾಪುವಿನಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, '' ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗವಾಗಿದೆ, ಕರ್ನಾಟಕದ ಎಲ್ಲಾ ರಾಜಕೀಯ ಪಕ್ಷಗಳು ಒಗ್ಗೂಡಿ ಬೆಳಗಾವಿಯಲ್ಲಿ ಎಂಇಎಸ್ನ ಪ್ರತಿಯೊಬ್ಬ ಅಭ್ಯರ್ಥಿಯನ್ನು ಸೋಲಿಸಬೇಕು ಎಂದು ನಾನು ಈ ಹಿಂದೆಯೇ ಹೇಳಿದ್ದೆ. ಭಾರತದ ಜನರು ವಿವಿಧ ರಾಜ್ಯಗಳಲ್ಲಿದ್ದಾರೆ ಮತ್ತು ಆ ರಾಜ್ಯಗಳಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದಾರೆ. ನಾವು ಕನ್ನಡಿಗರು ಕೂಡಾ ಜಾತಿ ಧರ್ಮ ಭಾಷೆ ನೋಡವುದಿಲ್ಲ. ಕನ್ನಡಿಗರು ಎಲ್ಲಿ ಹೋದರೂ ಹೊಂದಿಕೊಳ್ತಾರೆ. ಆದರೆ ಒಂದಷ್ಟು ಮರಾಠಿಗರ ದೇಹ ಮಾತ್ರ ಕರ್ನಾಟಕದಲ್ಲಿ ಬದುಕುತ್ತಿದೆ ಆದರೆ ಅವರ ಮನಸ್ಸು ಮಾತ್ರ ಮಹಾರಾಷ್ಟ್ರದಲ್ಲಿದೆ. ಆದರೆ ಅವರು ಕರ್ನಾಟಕದ ರಾಜ್ಯದ ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ".
"ಬಾವುಟ, ವಾಹನ ಸುಡುವುದು, ಪುತ್ಥಳಿ ಒಡೆಯುವುದು ಶಿಕ್ಷಾರ್ಹ ಅಪರಾಧವಾಗಿದೆ. ಎಂಇಎಸ್ ಮಾಡಿದ
ರಾಜ್ಯದ್ರೋಹ ದೇಶದ್ರೋಹದ ಕೆಲಸಕ್ಕೆ ಸರಕಾರ ಉಗ್ರ ಶಿಸ್ತು ಕ್ರಮ ಕೈಗೊಳ್ಳಲಿದೆ . ಎಂಇಎಸ್ ವಿಚಾರದಲ್ಲಿ ಎಲ್ಲಾ ಪಕ್ಷ ರಾಜಕಾರಣ ದೂರವಿಡೋಣ ಎಂದು ವಿನಂತಿಸಿಕೊಂಡ ಅವರು , ಕನ್ನಡಿಗರ ಹಿತವನ್ನು ಕರ್ನಾಟಕ ಸರಕಾರ ಕಾಪಾಡುತ್ತದೆ ಎಂದರು.
ಮತಾಂತರ ವಿರೋಧಿ ಮಸೂದೆಯ ಬಗ್ಗೆ ಕಾಂಗ್ರೆಸ್ ಗೆ ಯಾಕೆ ಹೊಟ್ಟೆಯುರಿ?
ಕಾಂಗ್ರೆಸ್ ಮತಾಂತರ ವಿರೋಧಿ ಮಸೂದೆಯನ್ನು ಏಕೆ ವಿರೋಧಿಸುತ್ತಿದೆ ಎಂದು ನನಗೆ ಅರ್ಥವಾಗುತ್ತಿಲ್ಲ ಎಂದು ಶೋಭಾ ಕರಂದ್ಲಾಂಜೆ ಪ್ರಶ್ನಿಸಿದರು.
ಮತಾಂತರ ವಿರೋಧಿ ಮಸೂದೆಗೆ ಕಾಂಗ್ರೆಸ್ ಪಕ್ಷದಿಂದ ವಿರೋಧದ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಶೋಭಾ, "ಮತಾಂತರ ವಿರೋಧಿ ಕಾನೂನು ಈ ದೇಶದ ಜನರ ಆಶಯವಾಗಿದೆ. ಕಾಂಗ್ರೆಸ್ ಕೇವಲ ಅಲ್ಪಸಂಖ್ಯಾತರ ಮತ ಬ್ಯಾಂಕ್ನಲ್ಲಿ ಕೇಂದ್ರೀಕೃತವಾಗಿದೆ. ಲವ್ ಜಿಹಾದ್, ಚಿಕಿತ್ಸೆ , ಬಡತನ ಎಂದು ದುರುಪಯೋಗ ಮಾಡಲಾಗುತ್ತಿದೆ. ಎಷ್ಟೋ ಬಡವರನ್ನು ಮತಾಂತರಿಸಿದ ಉದಾಹರಣೆಗಳಿವೆ. ಮಂಗಳೂರಿನಲ್ಲಿ ಬಲವಂತದ ಮತಾಂತರದಿಂದ ನಾಲ್ವರ ಕುಟುಂಬ ಆತ್ಮಹತ್ಯೆ ಮಾಡಿಕೊಂಡಿದ್ದು ಇದಕ್ಕೆ ಜೀವಂತ ಉದಾಹಣೆಯಾಗಿದೆ. ಹೀಗಾಗಿ ಸಮಾಜದ ಶಾಂತಿ ಕಾಪಾಡಲು ಈ ಕಾನೂನು ಮುಖ್ಯವಾಗಿದೆ.
ಓಟ್ ಬ್ಯಾಂಕಿಗಾಗಿ ಕಾಂಗ್ರೆಸ್ ಕಾಯ್ದೆ ವಿರೋಧಿಸುತ್ತಿದೆ. ಡಿ.ಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರೇ ಕಾಂಗ್ರೆಸ್ ನದ್ದು ಅಲ್ಪಸಂಖ್ಯಾತ ಓಟಲ್ಲಿ ಗೆಲ್ಲುವ ಪ್ಲ್ಯಾನ್. ಹಾಗಾದರೆ ನಿಮಗೆ ಬಹು ಸಂಖ್ಯಾತರ ಓಟ್ ಬೇಡವೇ? ಅಲ್ಪಸಂಖ್ಯಾತ ರ ಓಟಲ್ಲಿ ಗೆದ್ದು ಬರ್ತೀರಾ? ಅವರವರು ಅವರ ಧರ್ಮದಲ್ಲಿ ಇದ್ದರೆ ನಿಮಗೆ ಏನು ಸಮಸ್ಯೆ? ಎಂದು ಪ್ರಶ್ನಿಸಿದರು.
ಕರ್ನಾಟಕದ ಜನರು ಕಾಂಗ್ರೆಸ್ ನಾಯಕರ ಶುಭನುಡಿಗಳನ್ನು ಗಮನಿಸುತ್ತಿದ್ದಾರೆ. 2023 ರಲ್ಲಿ ಅಧಿಕಾರಕ್ಕೆ ಬಂದರೆ ಮತಾಂತರ ವಿರೋಧಿ ಮಸೂದೆಯನ್ನು ತೆಗೆದುಹಾಕುತ್ತೇವೆ ಎಂದು ಡಿಕೆಎಸ್ ಹೇಳಿಕೊಂಡಿದ್ದಾರೆ . ಆದರೆ ಕರ್ನಾಟಕದ ಜನತೆ ಅವರಿಗೆ ಅಧಿಕಾರ ನೀಡುತ್ತಾರೋ, ಇಲ್ಲವೋ ಎಂದು ಮೊದಲು ನೋಡಬೇಕು ಎಂದು ಲೇವಡಿ ಮಾಡಿದರು.