ಮಂಗಳೂರು, ಡಿ 23 (DaijiworldNews/MS): ನಗರದ ಅತ್ತಾವರ ನಿವಾಸಿ, ಶ್ರೀ ಗಣೇಶ್ ಆ್ಯಂಬುಲೆನ್ಸ್ ಮಾಲಕ ಗಂಗಾಧರ್ ಅತ್ತಾವರ (62) ಡಿ. 22ರಂದು ಬುಧವಾರ ತಡರಾತ್ರಿ ನಿಧನರಾಗಿದ್ದಾರೆ.
ಮೂರು ದಿನಗಳಿಂದ ತೀವ್ರ ಅಸ್ವಸ್ಥರಾಗಿದ್ದ ಅವರಿಗೆ ನಗರದ ಹೈಲ್ಯಾಂಡ್ ಮತ್ತು ಕೆಎಂಸಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಕಳೆದ ರಾತ್ರಿ 12:30ರ ಸುಮಾರಿಗೆ ಮೃತಪಟ್ಟಿದ್ದಾರೆ.
ಕೇವಲ ಒಂದು ಆ್ಯಂಬುಲೆನ್ಸ್ ಮೂಲಕ ಶ್ರೀ ಗಣೇಶ್ ಆ್ಯಂಬುಲೆನ್ಸ್ ಸಂಸ್ಥೆಯನ್ನು ಕಟ್ಟಿ ಬೆಳೆಸಿದ್ದ ಗಂಗಾಧರ ಅವರು 35 ವರ್ಷಗಳಲ್ಲಿ 18ಕ್ಕೂ ಅಧಿಕ ಆ್ಯಂಬುಲೆನ್ಸ್ ಗಳನ್ನು ಹೊಂದಿದ್ದರು. ಅನೇಕ ಚಾಲಕರಿಗೆ ಉದ್ಯೋಗ ನೀಡಿದ್ದರು. ಕೋವಿಡ್ 19 ಅವಧಿಯಲ್ಲಿ ಸಲ್ಲಿಸಿದ ಅವರ ನಿಸ್ವಾರ್ಥ ಸೇವೆಯನ್ನು ಎಲ್ಲರೂ ಇಂದಿಗೂ ಕೃತಜ್ಞತೆಯಿಂದ ಸ್ಮರಿಸುತ್ತಿದ್ದಾರೆ.