Karavali
ಮಂಗಳೂರು: ಫಲಾನುಭವಿಗಳಿಗೆ ಸವಲತ್ತು ಒದಗಿಸಲು ಬ್ಯಾಂಕುಗಳು ಶ್ರಮಿಸಬೇಕು - ಡಾ. ಕುಮಾರ್
- Thu, Dec 23 2021 12:48:15 PM
-
ಮಂಗಳೂರು, ಡಿ 23 (DaijiworldNews/MS): ಜನಸಾಮಾನ್ಯರ ಶ್ರೇಯೋಭಿವೃದ್ದಿಗಾಗಿ ಸರ್ಕಾರ ಅನುಷ್ಠಾನಗೊಳಿಸಿರುವ ವಿವಿಧ ಯೋಜನೆಗಳ ಸಾಲಸೌಲಭ್ಯದ ಬಗ್ಗೆ ಸೂಕ್ತ ಮಾಹಿತಿ ಹಾಗೂ ಫಲಾನುಭವಿಗಳಿಗೆ ನಿಗದಿತ ಅವಧಿಯೊಳಗೆ ಬ್ಯಾಂಕುಗಳಿಂದ ಸವಲತ್ತು ಒದಗಿಸಿಕೊಡಲು ಜಿಲ್ಲೆಯ ಬ್ಯಾಂಕುಗಳು ಶ್ರಮಿಸಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಅವರು ಕರೆ ನೀಡಿದರು.
ಅವರು ನಗರದ ಜಿಲ್ಲಾ ಪಂಚಾಯತ್ನ ನೇತ್ರಾವತಿ ಸಭಾಂಗಣದಲ್ಲಿ ಡಿ.22ರ ಬುಧವಾರ ಲೀಡ್ ಬ್ಯಾಂಕ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಜಿಲ್ಲಾ ಸಮಾಲೋಚನಾ ಸಮಿತಿ (ಡಿಸಿಸಿ) ಹಾಗೂ ಜಿಲ್ಲಾ ಮಟ್ಟದ ಪರಿಶೀಲನಾ (ಡಿ.ಎಲ್.ಆರ್.ಸಿ) ಸಮಿತಿ ಸದಸ್ಯರ ತ್ರೈಮಾಸಿಕ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಬ್ಯಾಂಕುಗಳ ಮೂಲಕ ಸರ್ಕಾರದಿಂದ ನೀಡಲಾಗುವ ಸಾಲಸೌಲಭ್ಯಗಳ ಲಾಭ ಪಡೆಯಲು ಶ್ರಮಿಸಬೇಕು, ಜನಧನ್ ಖಾತೆ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ನೀಡಬೇಕು, ಸಾಮಾಜಿಕ ಭದ್ರತಾ ಯೋಜನೆಗಳನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವ ಮೂಲಕ ದಕ್ಷಿಣ ಕನ್ನಡವನ್ನು ಶೇ.100ರಷ್ಟು `ಭಿಮಾ ಜಿಲ್ಲೆ' ಎಂದು ಘೋಷಿಸುವ ನಿಟ್ಟಿನಲ್ಲಿ ಬ್ಯಾಂಕ್ಗಳು ಕಾರ್ಯೋನ್ಮುಖವಾಗಬೇಕು ಎಂದರು.
ಕೇಂದ್ರ ಸರ್ಕಾರದ ಸಾಮಾಜಿಕ ಭದ್ರತಾ ಯೋಜನೆಗಳಾದ ಪಿಎಂಜೆಜೆಬಿವೈ(ಪ್ರಧಾನ ಮಂತ್ರಿ ಜೀವನ್ ಜ್ಯೋತಿ ಬಿಮಾ ಯೋಜನಾ), ಪಿಎಂಎಸ್ಬಿವೈ(ಪ್ರಧಾನ ಮಂತ್ರಿ ಸುರಕ್ಷ ಬಿಮಾ ಯೋಜನಾ) ಹಾಗೂ ಎಪಿವೈ(ಅಟಲ್ ಪಿಂಚಣಿ ಯೋಜನಾ)ಗೆ ಬ್ಯಾಂಕುಗಳು ಹೆಚ್ಚಿನ ಆದ್ಯತೆ ನಿಡಬೇಕು ಎಂದು ತಿಳಿಸಿದರು.
ಸಾಮಾಜಿಕ ಭದ್ರತಾ ಯೋಜನೆಗಳ ಬಗ್ಗೆ ಅಗತ್ಯ ಮಾಹಿತಿಯನ್ನು ಅರ್ಹರಿಗೆ ತಲುಪಿಸದಿದ್ದರೆ ಜನತೆ ಬ್ಯಾಂಕ್ ವಹಿವಾಟಿನಿಂದ ದೂರವಾಗಬಹುದು ಎಂಬ ಶಂಕೆ ವ್ಯಕ್ತಪಡಿಸಿದ ಅವರು, ಆರ್ಬಿಐ ಕೂಡ ಸಾಮಾಜಿಕ ಭದ್ರತಾ ಯೋಜನೆಯಲ್ಲಿ ನೂರಕ್ಕೆ ನೂರರಷ್ಟು ಗುರಿ ಸಾಧಿಸುವಂತೆ ಸೂಚನೆ ನೀಡಿದೆ. ಬ್ಯಾಂಕ್ ಮ್ಯಾನೇಜರ್ಗಳು ಈ ಬಗ್ಗೆ ಗಮನ ಹರಿಸಿ ಗ್ರಾಮೀಣ ಜನತೆಯನ್ನು ಈ ಯೋಜನೆ ತಲುಪುವಂತೆ ಮಾಡಬೇಕು. ಸಾಮಾಜಿಕವಾಗಿ ಹಿಂದುಳಿದವರು, ಕಡಿಮೆ ಆದಾಯ ಹೊಂದಿರುವವರು ಹಾಗೂ ತೀರ ಹಿಂದುಳಿದ ವರ್ಗಗಳಿಗೆ ಯೋಜನೆ ತಲುಪಿಸುವುದು ಬ್ಯಾಂಕ್ಗಳ ಆದ್ಯತೆಯಾಗಬೇಕು. ಈ ಬಗ್ಗೆ ತಕ್ಷಣದಿಂದಲೇ ಕಾರ್ಯಪ್ರವೃತ್ತವಾಗುವಂತೆ ಅವರು ಬ್ಯಾಂಕ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಾಮಾಜಿಕ ಭದ್ರತಾ ಯೋಜನೆಯ ಕ್ಲೇಮ್ಗಳನ್ನು ಯಾವುದೇ ದೂರು ಬಾರದಂತೆ ನಿರ್ವಹಿಸಬೇಕು. ಯೋಜನೆಗಳ ಬಗ್ಗೆ ಜನತೆಗೆ ಸದಭಿರುಚಿ ಭಾವನೆ ಮೂಡುವಂತೆ ಮಾಡಬೇಕು, ಗ್ರಾಹಕ ಸ್ನೇಹಿಯಾಗಿ ಬ್ಯಾಂಕ್ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.
ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಹಿಂದುಳಿದ ವರ್ಗಗಳ, ಮಹಿಳೆಯರಿಗೆ ಕನಿಷ್ಠ 10 ಲಕ್ಷದಿಂದ ಗರಿಷ್ಠ ಒಂದು ಕೋಟಿ ರೂ.ಗಳ ವರೆಗೆ ಉದ್ಯೋಗಕ್ಕೆ ನೀಡುವ ಸಾಲ ಯೋಜನೆಗೆ ಯಾವುದೇ ಅಡ್ಡಿಪಡಿಸದೆ ತ್ವರಿತವಾಗಿ ಸಾಲ ನೀಡಬೇಕು. ಇದನ್ನು ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಯ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಸಲಹೆ ನೀಡಿದರು.
ಎಂಎಸ್ಎಂಇ(ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮ)ಯೋಜನೆಯಡಿ ಗರಿಷ್ಠ 2 ಕೋಟಿ ರೂ.ಗಳ ವರೆಗೆ ಸಾಲ ಸೌಲಭ್ಯಕ್ಕೆ ಅವಕಾಶ ಇದೆ. ಆದರೆ ಈ ಸಾಲಸೌಲಭ್ಯ ಪಡೆಯುವಲ್ಲಿ ಬ್ಯಾಂಕ್ ಅಧಿಕಾರಿಗಳು ಗ್ರಾಹಕರಿಗೆ ಗ್ಯಾರಂಟಿ ನೀಡುವಂತೆ ಒತ್ತಡ ಹಾಕುತ್ತಿರುವ ಬಗ್ಗೆ ದೂರುಗಳು ಬಂದಿವೆ. ಗ್ರಾಹಕರಿಗೆ ಈ ಯೋಜನೆಯಲ್ಲಿ ಸಾಲ ನೀಡುವಲ್ಲಿ ಒತ್ತಡ ಹಾಕುವಂತಿಲ್ಲ ಎಂದು ಸ್ಪಷ್ಟಪಡಿಸಿದರು.
ಕೃಷಿ, ಶಿಕ್ಷಣ ಹಾಗೂ ಗೃಹ ನಿರ್ಮಾಣ ವಿಭಾಗಗಳಲ್ಲಿ ಜಿಲ್ಲೆಯ ಬ್ಯಾಂಕ್ಗಳು ನಿರೀಕ್ಷಿತ ಪ್ರಗತಿ ಸಾಧಿಸಿಲ್ಲ. ಈ ವಿಭಾಗಗಳಲ್ಲಿ ಅಗತ್ಯ ಕ್ರಮಗಳನ್ನು ವಹಿಸಬೇಕು, ಕೃಷಿಯಲ್ಲಿ ಶೇ.35.27, ಶಿಕ್ಷಣದಲ್ಲಿ ಶೇ.35.40 ಹಾಗೂ ಗೃಹ ಸಾಲದಲ್ಲಿ ಶೇ.22.34 ಮಾತ್ರ ನಿರ್ವಹಣೆ ಆಗಿದೆ. ಆದ್ದರಿಂದ ಈ ಯೋಜನೆಗಳಿಗೆ ಇನ್ನು ಮುಂದೆ ಹೆಚ್ಚಿನ ಆದ್ಯತೆ ನೀಡದಿದ್ದರೆ, ಬ್ಯಾಂಕ್ಗಳಿಗೆ ಪ್ರಗತಿ ದಾಖಲಿಸಲು ಸಾಧ್ಯವಾಗುವುದಿಲ್ಲ ಎಂದ ಅವರು ಕನಿಷ್ಠ ಗುರಿಯನ್ನೂ ಸಾಧಿಸದ ಬ್ಯಾಂಕ್ಗಳ ಅಧಿಕಾರಿಗಳು, ಗ್ರಾಮೀಣ ಭಾಗದಲ್ಲಿ ಸುತ್ತಾಡಿ ಬ್ಯಾಂಕ್ನಲ್ಲಿ ಇರುವ ಯೋಜನೆ, ಸಾಲ ಸೌಲಭ್ಯದ ಬಗ್ಗೆ ಜನತೆಗೆ ಹೆಚ್ಚಿನ ಮಾಹಿತಿ ನೀಡುವುದರೊಂದಿಗೆ ಅವರನ್ನು ಪ್ರೋತ್ಸಾಹಿಸಬೇಕು ಎಂದರು.
ಕಳೆದ ಮೂರು ತಿಂಗಳ ಅವಧಿಯಲ್ಲಿ ಸೆಪ್ಟೆಂಬರ್ ಅಂತ್ಯಕ್ಕೆ ಜಿಲ್ಲೆಯ ಬ್ಯಾಂಕ್ಗಳ ಒಟ್ಟು ವ್ಯವಹಾರ 88,100.12 ಕೋಟಿ ರೂ.ಗಳಾಗಿದ್ದು, ವರ್ಷದಿಂದ ವರ್ಷಕ್ಕೆ ಶೇ.9.32ರಷ್ಟು ಬೆಳವಣಿಗೆ ಸಾಧಿಸಿದೆ. ಪ್ರಸಕ್ತ ಜಿಲ್ಲೆಯಲ್ಲಿ ಬ್ಯಾಂಕ್ಗಳ ಶಾಖೆ ಒಟ್ಟು 619 ಆಗಿದೆ ಎಂದು ಲೀಡ್ ಬ್ಯಾಂಕ್ ಮ್ಯಾನೇಜರ್ ಪ್ರವೀಣ್ ಸಭೆಗೆ ತಿಳಿಸಿದರು.
ಸೆಪ್ಟೆಂಬರ್ ಅಂತ್ಯಕ್ಕೆ ಜಿಲ್ಲೆಯ ಬ್ಯಾಂಕ್ಗಳ ಒಟ್ಟು ಠೇವಣಿ 54,600.93 ಕೋಟಿ ರೂ. ಗಳಾಗಿದ್ದು, ವಾರ್ಷಿಕ ಶೇ.7.07 ರಷ್ಟು ಬೆಳವಣಿಗೆ ಹೊಂದಿದೆ. ಒಟ್ಟು ಸಾಲ, 33,499.10 ಕೋಟಿ ರೂ.ಗಳಾಗಿದ್ದು, ಶೇ.13.18ರ ಬೆಳವಣಿಗೆ ಸಾಧಿಸಿದೆ, ಸಾಲದ ಅನುಪಾತ ಶೇ.61.35 ಆಗಿದ್ದು, ಹಿಂದಿನ ತ್ರೈಮಾಸಿಕಕ್ಕೆ ಹೋಲಿಸಿದಾಗ ಶೇ.3.31ರಷ್ಟು ಅಭಿವೃದ್ಧಿ ಸಾಧಿಸಿದೆ ಎಂದರು.
2021-22ನೇ ಸಾಲಿನ ಮೊದಲ ಅರ್ಧ ವರ್ಷದಲ್ಲಿ ಜಿಲ್ಲೆಯಲ್ಲಿ ಒಟ್ಟು 11,352.75 ಕೋಟಿ ರೂ.ಗಳಷ್ಟು ಸಾಲ ವಿತರಿಸಲಾಗಿದ್ದು, ವಾರ್ಷಿಕ ಗುರಿ 19,335 ಕೋಟಿ ರೂ.ಗಳಾಗಿದ್ದು, ಶೇ.58.72 ನಿರ್ವಹಣೆ ಸಾಧಿಸಿದಂತಾಗಿದೆ ಎಂದರು.
ಆದ್ಯತಾ ಕ್ಷೇತ್ರದಲ್ಲಿ 5,332.96 ಕೋಟಿ ರೂ.ಗಳಷ್ಟು ಸಾಲ ವಿತರಿಸಲಾಗಿದೆ. ವಾರ್ಷಿಕ ಗುರಿ 12,534.74 ಕೋಟಿ ರೂ.ಗಳಾಗಿದ್ದು, ಶೇ.42.55ರಷ್ಟು ನಿರ್ವಹಣೆ ತೋರಿಸಿದೆ. ಮುದ್ರಾ ಯೋಜನೆಯಲ್ಲಿ 21,520 ಖಾತೆಗಳಲ್ಲಿ 209.40 ಕೋಟಿ ರೂ. ಸಾಲ ಈಗಾಗಲೇ ವಿತರಿಸಲಾಗಿದೆ ಎಂದರು.ಅಂಟಲ್ ಪಿಂಚಣಿ ಯೋಜನೆಯಲ್ಲಿ 1,04,838 ಖಾತೆ ತೆರೆಯಲಾಗಿದೆ. ಪಿ.ಎಂ. ಸ್ವನಿಧಿಯಡಿ ಜಿಲ್ಲೆಯಲ್ಲಿ ಇದೇ. ಡಿ.13ರ ವರೆಗೆ 5,092 ಅರ್ಜಿಗಳು ಮಂಜೂರಾತಿಗೊಂಡಿದೆ ಎಂದು ಮಾಹಿತಿ ನೀಡಿದರು.
ಪ್ರತಿ ಬಾರಿಯೂ ಲೀಡ್ ಬ್ಯಾಂಕ್ ಸಭೆಗೆ ಗೈರಾಗುತ್ತಿರುವ ಐಸಿಐಸಿ ಬ್ಯಾಂಕ್ ಅಧಿಕಾರಿಗೆ ನೋಟಿಸ್ ನೀಡುವಂತೆ ತಿಳಿಸಿದ ಜಿ.ಪಂ. ಸಿಇಒ ಡಾ.ಕುಮಾರ್, ಬ್ಯಾಂಕಿನಲ್ಲಿ ಇರುವ ಸರ್ಕಾರದ ಖಾತೆಯನ್ನು ಹಿಂಪಡೆಯುವಂತೆ ಎಲ್ಲ ಇಲಾಖೆಗಳಿಗೆ ಸೂಚಿಸುವುದಾಗಿ ಎಚ್ಚರಿಕೆ ನೀಡಿದರು.
ಆರ್ಬಿಐನ ಬೆಂಗಳೂರು ಪ್ರಾದೇಶಿಕ ಕಚೇರಿಯ ಸಹಾಯಕ ಮಹಾಪ್ರಭಂದಕ ಟಿ.ಆರ್. ಆಚಾರ್ಯ, ನಬಾರ್ಡ್ನ ಜಿಲ್ಲಾ ಅಭಿವೃದ್ಧಿ ಅಧಿಕಾರಿ ಸಂಗೀತ ಕಾರ್ತ್, ಕೆನರಾ ಬ್ಯಾಂಕ್ ಉಪ ಮಹಾಪ್ರಬಂಧಕ ಶ್ರೀಕಾಂತ್ ಬಿ.ಕೆ, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕಿ ಸುಶ್ಮಿತಾ, ಎಲ್ಲಾ ಬ್ಯಾಂಕ್ಗಳ ಅಧಿಕಾರಿಗಳು ಹಾಗೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.