ಮಂಗಳೂರು, ಡಿ.23 (DaijiworldNews/PY): ನಗರದ ಬಂದರ್ನಲ್ಲಿ ಮೀನುಗಾರನೊಬ್ಬನನ್ನು ಬೋಟ್ನ ಕ್ರೇನ್ ಒಂದಕ್ಕೆ ತಲೆಕೆಳಗೆ ತೂಗು ಹಾಕಿ ಸಹ ಕಾರ್ಮಿಕರು ದೌರ್ಜನ್ಯ ಎಸಗಿದ ಘಟನೆಗೆ ಸಂಬಂಧಿಸಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ.
ಬಂಧಿತರನ್ನು ಕೊಂಡೂರು ಪೋಲಯ್ಯ (23), ಅವುಲ ರಾಜ್ ಕುಮಾರ್ (26), ಕಾಟಂಗೇರಿ ಮನೋಹರ್ (21), ವೂಟುಕೋರಿ ಜಾಲಯ್ಯ (30), ಕರಪಿಂಗಾರ ರವಿ (27) ಹಾಗೂ ಪ್ರಲಯಕಾವೇರಿ ಗೋವಿಂದಯ್ಯ (47) ಎಂದು ಗುರುತಿಸಲಾಗಿದ್ದು, ಎಲ್ಲಾ ಆರೋಪಿಗಳು ಆಂಧ್ರಪ್ರದೇಶದವರು ಎನ್ನಲಾಗಿದೆ.
ದಕ್ಕೆಯಲ್ಲಿ ಮೀನುಗಾರಿಕೆ ಕೆಲಸ ಮಾಡುತ್ತಿರುವ ಆಂಧ್ರಪ್ರದೇಶದ ಕಾಟಮ್ವಾರಿ ಪಾಲೆಮ್ ನಿವಾಸಿ ವೈಲ ಶೀನು (32) ಎಂಬಾತ ದಕ್ಕೆಯಲ್ಲಿ ನಿಲ್ಲಿಸಿದ್ದ ಜಾನ್ ಶೈಲೇಶ್ 2 ಎನ್ನುವ ಬೋಟಿಗೆ ಹೋಗಿ ವಾಪಾಸ್ಸು ತಾನು ಕೆಲಸ ಮಾಡುವ ಬೋಟಿಗೆ ಬಂದು ಮಲಗಿದ್ದಾನೆ. ಡಿ.15ರಂದು ಜಾನ್ ಶೈಲೇಶ್ 2 ಬೋಟ್ನಲ್ಲಿ ಕೆಲಸ ಮಾಡುತ್ತಿರುವ ಆಂಧ್ರ ಪ್ರದೇಶದ ಕರಪಿಂಗಾರ ರವಿ, ಕೊಂಡೂರು ಪೋಲಯ್ಯ, ಅವುಲ ರಾಜ್ ಕುಮಾರ್, ಕಾಟಂಗೇರಿ ಮನೋಹರ್, ವೂಟುಕೋರಿ ಜಾಲಯ್ಯ, ಹಾಗೂ ಪ್ರಲಯಕಾವೇರಿ ಗೋವಿಂದಯ್ಯ ವೈಲ ಶೀಲ ಇದ್ದಲ್ಲಿಗೆ ಬಂದು ರಾತ್ರಿ ಬೋಟ್ಗೆ ಬಂದವನು ಮೊಬೈಲ್ ಕಳ್ಳತನ ಮಾಡಿದ್ದೀಯಾ ಎಂದು ಹೇಳಿ ವೈಲ ಶೀನು ಅನ್ನು ಅಪಹರಿಸಿ ಜಾನ್ ಶೈಲೇಶ್ 2 ಬೋಟ್ಗೆ ಕರೆದುಕೊಂಡು ಹೋಗಿ ಆತನ ಕಾಲುಗಳನ್ನು ಹಗ್ಗದಿಂದ ಕಟ್ಟಿ ಬಳಿಕ ಕಾಲಿಗೆ ಕಟ್ಟಿದ ಹಗ್ಗವನ್ನು ಬೋಟ್ನ ಕ್ರೇನ್ಗೆ ಸಿಕ್ಕಿಸಿ ತಲೆಕೆಳಗಾಗಿ ತೂಗು ಹಾಕಿ ಮರದ ರೀಪಿನಿಂದ ಹಾಗೂ ಕಬ್ಬಿಣದ ಸರಪಳಿಯಿಂದ ಹಲ್ಲೆ ನಡೆಸಿ, ಕೊಲೆ ನಡೆಸಲು ಯತ್ನಿಸಿದ್ದಾರೆ ಎನ್ನಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ದಕ್ಕೆ ಬಳಿಯಿಂದ ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯ ಪೊಲೀಸರು ಆರೋಪಿಗಳನ್ನು ಬಂಧಿಸಿ ಕೃತ್ಯಕ್ಕೆ ಉಪಯೋಗಿಸಿದ ಮರದ ರೀಪು, ಕಬ್ಬಿಣದ ಸರಪಳಿ, ಹಗ್ಗ ಹಾಗೂ ಮೊಬೈಲ್ ಹ್ಯಾಂಡ್ ಸೆಟ್ ಅನ್ನು ವಶಪಡಿಸಿಕೊಂಡಿದ್ಧಾರೆ.