ಕಾಪು, ಡಿ.23 (DaijiworldNews/PY): "ಕಾಂಗ್ರೆಸ್ ಪಕ್ಷವು ಮತಬ್ಯಾಂಕ್ ಭದ್ರಪಡಿಸಿಕೊಳ್ಳಲು ಮತಾಂತರ ನಿಷೇಧ ಕಾಯ್ದೆಯನ್ನು ವಿರೋಧಿಸುತ್ತಿದೆ" ಎಂದು ಕೇಂದ್ರ ಹಾಗೂ ರೈತ ಕಲ್ಯಾಣ ಇಲಾಖೆಯ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದೇಶ ಹಾಗೂ ಸಮಾಜಕ್ಕೆ ಆಗಬಹುದಾದ ಕೆಟ್ಟ ಪರಿಣಾಮಗಳನ್ನು ಲೆಕ್ಕಿಸದೇ ಕಾಂಗ್ರೆಸ್ ಅಧಿಕಾರಕ್ಕೆ ಏರುವುದರ ಮೇಲೆ ಮಾತ್ರವೇ ಗಮನಹರಿಸುತ್ತಿದೆ" ಎಂದು ಆರೋಪಿಸಿದ್ದಾರೆ.
"ಕಾಂಗ್ರೆಸ್ಸಿರು ಅಧಿಕಾರ ಪಡೆದುಕೊಳ್ಳಲು ಯಾವುದೇ ಬೆಲೆ ತೆತ್ತಾದರೂ ತನ್ನ ಮತ ಬ್ಯಾಂಕ್ ಅನ್ನು ಉಳಿಸಿಕೊಳ್ಳಲು ನೋಡುತ್ತಾರೆ. ಈ ಕಾಯ್ದೆಯ ಬಗ್ಗೆ ಕಾಂಗ್ರೆಸ್ ಚರ್ಚೆಯಲ್ಲಿ ಭಾಗವಹಿಸುತ್ತದೆ ಹಾಗೂ ಅದನ್ನು ಸುಧಾರಿಸಲು ಸಲಹೆಗಳನ್ನು ನೀಡುತ್ತದೆ ಎಂದು ನಿರೀಕ್ಷಿಸಿದ್ದೆವು. ಆದರೆ, ಕಾಂಗ್ರೆಸ್ ಆ ರೀತಿ ಮಾಡಲಿಲ್ಲ. ಮಸೂದೆಯನ್ನು ವಿರೋಧಿಸುವುದು ಸಮಾಜಕ್ಕೆ ಮಾಡಿದ ದ್ರೋಹವಾಗಿದೆ" ಎಂದಿದ್ದಾರೆ.
"ಮತಾಂತರ ಎಂಬುದು ಸಮಾಜಕ್ಕೆ ಮಾರಕ, ಬಡತನ, ಅನಾರೋಗ್ಯ, ಅನಕ್ಷರತೆಯನ್ನು ಬಳಸಿಕೊಂಡು ಮತಾಂತರ ಮಾಡುವ ಹುನ್ನಾರ ದೇಶಾದ್ಯಂತ ನಡೆಯುತ್ತಿದೆ. ಇದನ್ನು ತಡೆಯಲು ಮತಾಂತರ ನಿಷೇಧ ಕಾಯ್ದೆಯ ಜಾರಿ ಅಗತ್ಯವಿದೆ" ಎಂದು ಹೇಳಿದ್ದಾರೆ.
ಕಾಪು ಪಟ್ಟಣದ ಪುರಸಭೆಯ ಮುಂಬರುವ ಚುನಾವಣೆಯ ಹಿನ್ನೆಲೆ ಶೋಭಾ ಕರಂದ್ಲಾಜೆ ಅವರು ಕಾಪು ನಗರದ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಬಿಜೆಪಿ ಪರ ಮತಯಾಚನೆ ಮಾಡಿದರು.