ಮಂಗಳೂರು, ಡಿ 23 (DaijiworldNews/MS): ನಗರದ ಬಂದರ್ ನಲ್ಲಿ ಮೀನುಗಾರನೊಬ್ಬನನ್ನು ಬೋಟ್ ನ ಕ್ರೇನ್ ಒಂದಕ್ಕೆ ತಲೆಕೆಳಗೆ ತೂಗು ಹಾಕಿ ಸಹ ಕಾರ್ಮಿಕರು ದೌರ್ಜನ್ಯ ಎಸಗಿದ ಘಟನೆ ಬೆಳಕಿಗೆ ಬಂದಿದೆ. ದೌರ್ಜನ್ಯಕ್ಕೆ ಒಳಗಾದ ವ್ಯಕ್ತಿಯನ್ನು ಆಂಧ್ರಪ್ರದೇಶ ಮೂಲದ ಬೆಸ್ತ ಸಮುದಾಯದ ವೈಲ ಶೀನು ಎಂದು ಗುರುತಿಸಲಾಗಿದೆ.
ಈತನನ್ನು ಇತರ ಮೀನುಗಾರ ಕಾರ್ಮಿಕರು ಬೋಟ್ ನ ಕ್ರೇನ್ ಗೆ ಕಾಲು ಕಟ್ಟಿ ತಲೆಕೆಳಗಾಗಿ ತೂಗು ಹಾಕಿ ಹಿಂಸಿಸುತ್ತಿರುವ ಹಾಗೂ ಹೊಡೆಯುವಂತೆ ಪ್ರೇರೆಪಿಸುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಮೊಬೈಲ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಈ ರೀತಿಯಾಗಿ ತೂಗು ಹಾಕಿದ್ದರು ಎಂದು ಪೊಲೀಸ್ ಪ್ರಾಥಮಿಕ ಮಾಹಿತಿ ತಿಳಿಸಿದೆ.
ಈ ಘಟನೆ ಕೆಲ ದಿನಗಳ ಹಿಂದೆ ನಡೆದಿದ್ದು , ದೌರ್ಜನ್ಯ ಎಸಗಿದ ಆರೋಪಿಗಳ ವಿರುದ್ಧ ಪಾಂಡೇಶ್ವರ ಠಾಣೆ ಪೊಲೀಸರು ಕೊಲೆಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ ಎಂದು ಪೊಲೀಸ್ ಆಯುಕ್ತ ಶಶಿಕುಮಾರ್ ಮಾಹಿತಿ ನೀಡಿದ್ದಾರೆ.