ಸುಳ್ಯ, ಡಿ.22 (DaijiworldNews/SM): ಬಾಡಿಗೆಯ ನೆಪದಲ್ಲಿ ರಿಕ್ಷಾ ಚಾಲಕನನ್ನು ಕರೆದೊಯ್ದು ಬಳಿಕ ಹಲ್ಲೆ ನಡೆಸಿ ಆತನಿಂದ ರಿಕ್ಷಾ ದರೋಡೆಗೈದ ಘಟನೆ ತಾಲೂಕಿನಲ್ಲಿ ನಡೆದಿದ್ದು, ರಿಕ್ಷಾ ಕೊಂಡೊಯ್ಯುತ್ತಿದ್ದಾಗ ಆರೋಪಿಗಳು ಕೇರಳ ಪೊಲೀಸರಿಗೆ ಸೆರೆ ಸಿಕ್ಕ ಘಟನೆ ನಡೆದಿದೆ.
ಅಜ್ಜಾವರದಿಂದ ಆಟೋರಿಕ್ಷಾವನ್ನು ಮಂಡೆಕೋಲಿಗೆ ಬಾಡಿಗೆಗೆಂದು ಇಬ್ಬರು ಕರೆದೊಯ್ದಿದ್ದರು. ಆಟೋ ಅಡ್ಪಂಗಾಯದ ಬಳಿ ತಲುಪುತ್ತಿದ್ದಂತೆ ಆಟೋದಲ್ಲಿದ್ದ ವ್ಯಕ್ತಿ ಏಕಾಏಕಿ ಆಟೋ ಚಾಲಕ ಹುಸೈನ್ ಮೇಲೆ ಹಲ್ಲೆಗೆ ಮುಂದಾದನೆನ್ನಲಾಗಿದೆ. ನಂತರ ಆಟೋ ಚಾಲಕನ ಬಳಿಯಲ್ಲಿದ್ದ ಮೊಬೈಲ್ ಮತ್ತು ಹಣವನ್ನು ಕಿತ್ತು ಆಟೋ ಸಮೇತ ಕೇರಳದ ಕಡೆಗೆ ಪರಾರಿಯಾಗಿದ್ದಾನೆ.
ಘಟನೆ ತಿಳಿದ ಸ್ಥಳೀಯರು ಆದೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆ ಆದೂರು ಪೊಲೀಸರು ದೇವರಡ್ಕ ಪುದಿಯಂಬಲಂ ಎಂಬಲ್ಲಿ ಆತನನ್ನು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಆರೋಪಿಯನ್ನು ಆದೂರು ಠಾಣೆಯಲ್ಲಿ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿದುಬಂದಿದೆ.