ಉಡುಪಿ, ಡಿ 22 (DaijiworldNews/MS): ಮಹಿಳೆಯರ ಮದುವೆ ವಯಸ್ಸನ್ನು 21ಕ್ಕೆ ಏರಿಸಿರುವುದು ಅವಶ್ಯಕವಿದೆ. ಕೇಂದ್ರ ಸರಕಾರ ಮಹಿಳೆಯರ ಸಬಲೀಕರಣ ನಡೆಸುವುದಕ್ಕಾಗಿಯೇ ಈ ನೀತಿಯನ್ನು ತರಲಾಗುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯೆ ಶ್ಯಾಮಲಾ ಕುಂದರ್ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ ಮೋದಿ ಜೀಯವರ ಭೇಟಿ ಬಜಾವೋ, ಭೇಟಿ ಪಡಾವೋ ಯೋಜನೆಯೂ ಮಹಿಳೆಯರು ಶಿಕ್ಷಿತರಾಗಬೇಕೆಂದು ಜಾರಿಗೆ ತರಲಾಗಿದೆ. ಆದರೆ ಹೆಚ್ಚಿನ ಕಡೆಗಳಲ್ಲಿ 18 ತುಂಬಿದ ಯುವತಿಗೆ ಮದುವೆ ಮಾಡಿ ವಿದ್ಯಾಭ್ಯಾಸವನ್ನು ಮೊಟಕು ಗೊಳಿಸಲಾಗುತ್ತಿತ್ತು. ಪದವಿಯನ್ನು ಪಡೆಯಲಾಗದೇ ಅನೇಕ ವಿದ್ಯಾರ್ಥಿನಿಯರು ಮನೆಯವರ ಒತ್ತಾಯಕ್ಕೆ ಮಣಿದು ಮದುವೆಯಾದ ಘಟನೆಗಳು ಇವೆ.
18 ತುಂಬಿದ ಯುವತಿ ಮದುವೆಯ ಜೀವನದ ಬಗ್ಗೆ ಮಾನಸಿಕವಾಗಿ ಸಿದ್ದವಾಗಿರುವುದಿಲ್ಲ. ಅದಕ್ಕಾಗಿ ರಾಷ್ಟ್ರೀಯ ಮಹಿಳಾ ಆಯೋಗ ಯುವತಿಯ ಮದುವೆ ವಯಸ್ಸನ್ನು ೨೧ ಕ್ಕೆ ಏರಿಸಬೇಕೆಂದು ಸರಕಾರಕ್ಕೆ ಸಲಹೆ ನೀಡಿತ್ತು. ಕಾಲೇಜ್ ದಿನಗಳನ್ನು ಪೂರೈಸಬೇಕಾದ ಯುವತಿಗೆ ಮದುವೆ ಮಾಡಿಸಿದರೇ ಆಕೆಯ ಮಾನಸಿಕತೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ವರದಿಗಳಿಂದ ಸಾಭೀತಾಗಿದೆ.
ಗರ್ಭಿಣಿ, ಬಾಣಂತಿ ಜೀವನ, ಮಗುವನ್ನು ನೋಡಿಕೊಳ್ಳುವುದು ಹೇಗೆ ಎಂದು ತಿಳಿಯದ ವಯಸ್ಸಿನಲ್ಲಿ ಮದುವೆಯಾಗಿ ಗರ್ಭಿಣಿಯಾಗುತ್ತದೆ. ಭಾರತದಲ್ಲಿ ಪ್ರತಿ 1,00,000 ತಾಯಂದಿರಲ್ಲಿ ಜನಿಸುವ ಮಕ್ಕಳಲ್ಲಿ 113 ಮಕ್ಕಳು 30 ದಿನಗಳೊಳಗೆ ಮೃತರಾಗುತ್ತಿದ್ದಾರೆ. ಇದಕ್ಕೆ ಕಾರಣ ಯುವತಿ ಬೇಗ ಮದುವೆಯಾಗುವುದು. ಮತ್ತು ಬಾಲ್ಯ ವಿವಾಹವನ್ನು ಸಂಪೂರ್ಣ ನಿಷೇಧಿಸಲು ಈ ಕರಡು ಮಸೂದೆ ಜಾರಿಗೆ ತರುವ ಅವಶ್ಯಕತೆ ಇದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.