ಮಂಗಳೂರು, ಡಿ.22 (DaijiworldNews/HR): ಮಂಗಳೂರು ರೈಲು ನಿಲ್ದಾಣದಲ್ಲಿ 4 ಮತ್ತು 5ನೇ ಪ್ಲಾಟ್ಫಾರಂ ಸೆಪ್ಟಂಬರ್ ವೇಳೆಗೆ ಸಿದ್ಧಗೊಂಡು ರೈಲು ಸಂಚಾರಕ್ಕೆ ಲಭ್ಯವಾಗಲಿದೆ ಎಂದು ದಕ್ಷಿಣ ರೈಲ್ವೇ ಮಹಾಪ್ರಬಂಧಕ ಜಾನ್ ಥಾಮಸ್ ಹೇಳಿದ್ದಾರೆ.
ರೈಲ್ವೇ ವ್ಯವಸ್ಥೆ ಹಾಗೂ ವಿವಿಧ ಕಾಮಗಾರಿಗಳ ಪರಿಶೀಲನೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಾನ್ ಥಾಮಸ್, "ಮಂಗಳೂರು ಸೆಂಟ್ರಲ್ನಲ್ಲಿ ಪಿಟ್ಲೆನ್ ಕಾಮಗಾರಿ ಪ್ರಗತಿಯಲ್ಲಿದ್ದು ಮುಂದಿನ ಮಾರ್ಚ್ ವೇಳೆಗೆ ಪೂರ್ಣಗೊಳ್ಳಲಿದೆ. ಇದಾದ ಬಳಿಕ ಹೊಸ ಪ್ಲಾಟ್ಫಾರಂಗಳ ಕಾಮಗಾರಿಯನ್ನು ಕೈಗೆತ್ತಿಕೊಂಡು ಆರು ತಿಂಗಳಿನಲ್ಲಿ ಪೂರ್ಣಗೊಳಿಸಲಾಗುವುದು. ಇದರ ನಿರ್ಮಾಣಕ್ಕೆ ಅನುದಾನ ಈಗಾಗಲೇ ಬಿಡುಗಡೆಯಾಗಿದ್ದು ಗುತ್ತಿಗೆ ಪ್ರಕ್ರಿಯೆ ಕೂಡ ನಡೆದಿದೆ "ಎಂದರು.
ಇನ್ನು ಹೆಚ್ಚುವರಿ ಪ್ಲಾಟ್ಫಾರಂಗಳ ನಿರ್ಮಾಣ ದಿಂದ ಜಿಲ್ಲೆಯ ಜನರ ಬೇಡಿಕೆಗೆ ಅನು ಗುಣವಾಗಿ ಹೆಚ್ಚಿನ ಸಂಖ್ಯೆಯಲ್ಲಿ ರೈಲು ಗಳನ್ನು ಓಡಿಸಲು ಅನುಕೂಲವಾಗಲಿದ್ದು, ರೈಲ್ವೇ ವಿಭಾಗೀಯ ಪ್ರಬಂಧಕ ತ್ರಿಲೋಕ್ ಕೊಠಾರಿ, ರೈಲ್ವೇ ಬಳಕೆದಾರರ ಸಲಹಾ ಸಮಿತಿಯ ಸದಸ್ಯರಾದ ಹನುಮಂತ ಕಾಮತ್, ಅಹ್ಮದ್ ಬಾವ, ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿಯ ಅನಿಲ್ ಹೆಗ್ಡೆ, ಜಿ.ಕೆ. ಭಟ್ ಉಪಸ್ಥಿತರಿದ್ದರು.
ಮಂಗಳೂರು ಭಾಗದ ವಿವಿಧ ಬೇಡಿಕೆ ಗಳ ಬಗ್ಗೆ ಪಶ್ಚಿಮ ಕರಾವಳಿ ರೈಲ್ವೇ ಯಾತ್ರಿ ಅಭಿವೃದ್ಧಿ ಸಮಿತಿ ಸದಸ್ಯರು, ಜಿ.ಎಂ. ಜಾನ್ ಥಾಮಸ್ ಅವರಿಗೆ ಮನವಿ ಸಲ್ಲಿಸಿದರು.