ಮಂಗಳೂರು, ಡಿ 22 (DaijiworldNews/MS): ಬೆಂಜಿನ್ ಟ್ಯಾಂಕರ್ ಗಳಿಂದ ಅನಿಲ ಸೋರಿಕೆಯಾದ ಸಂದರ್ಭದಲ್ಲಿ ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಮಂಗಳೂರು ತೈಲ ನೈಸರ್ಗಿಕ ಅನಿಲ ಕಾರ್ಪೋರೇಷನ್ನ ಲಿಮಿಟೆಡ್ನ ಮುಂಭಾಗದಲ್ಲಿ ಇತ್ತೀಚೆಗೆ ಅಣುಕು ಪ್ರದರ್ಶನ ಏರ್ಪಡಿಸಲಾಗಿತ್ತು.
ಅವಘಡ ಸಂಭವಿಸಿದ ವೇಳೆ ಹೊತ್ತಿ ಉರಿಯುವ ಉಗ್ರ ದ್ರವ್ಯದಿಂದ ಪಾರಾಗುವ ಬಗ್ಗೆ ಈ ಅಣಕು ಕಾರ್ಯಾಚರಣೆಯಲ್ಲಿ ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಾಯಿತು, ಅದರ ಭಾಗವಾಗಿ ಸೋರಿಕೆಯಾಗುತ್ತಿದ್ದ ಬೆಂಜಿನ್ ಟ್ಯಾಂಕರನ್ನು ಟ್ರ್ಯಾಕ್ಟರ್ನಲ್ಲಿ ಎಳೆದು ಸುರಕ್ಷಿತ ಪ್ರದೇಶಕ್ಕೆ ತರಲಾಯಿತು. ನಂತರ ಅಲ್ಲಿ ಜಮಾಯಿಸಿದ್ದವರನ್ನು ಚದುರಿಸಿ, ಅಣಕು ಕಾರ್ಯಾಚರಣೆಯನ್ನು ಯಶಸ್ವಿಗೊಳಿಸಲಾಯಿತು. ತದನಂತರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಒಎನ್ಜಿಸಿ ಮಂಗಳೂರು ಪೆಟ್ರೋಕೆಮಿಕಲ್ ಲಿಮಿಟೆಡ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಚೈನುಲ್ಲೋ, ಈ ಅಣುಕು ಕಾರ್ಯಚರಣೆ ಮತ್ತಷ್ಟು ಉತ್ತಮಗೊಳಿಸುವ ಕುರಿತು ಸಲಹೆ ಸೂಚನೆಯನ್ನು ನೀಡಿದರು.
ಮಂಗಳೂರು ವಿಭಾಗ-1 ರ ಪ್ಯಾಕ್ಟರಿಗಳ ಉಪನಿರ್ದೇಶಕ ರಾಜೇಶ್ ಸಿ. ಮಿಶ್ರೀಕೋಟೆ, ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತ ವಿಜಯ್ ಕುಮಾರ್ ಪೂಜಾರ್ ಸೇರಿದಂತೆ ಎಂ.ಆರ್.ಪಿ.ಎಲ್, ಎಂಸಿಎಫ್, ಎಚ್ಪಿಸಿಎಲ್, ಬಿಪಿಸಿಎಲ್, ಬಿಎಎಸ್ಎಫ್, ಎಂಎಸ್ಇಜಡ್ ಸೇರಿದಂತೆ ವಿವಿಧ ಬೃಹತ್ ಕೈಗಾರಿಕೆಗಳ ಪ್ರತಿನಿಧಿಗಳು ಸ್ಥಳದಲ್ಲಿದ್ದರು.ರಾಸಾಯನಿಕ ದುರಂತ ತಡೆಗಟ್ಟುವಿಕೆಯ ದಿನದ ಅಂಗವಾಗಿ ಈ ಅಣುಕು ಕಾರ್ಯಚರಣೆಯನ್ನು ಕೈಗೊಳ್ಳಲಾಗಿತ್ತು.