ಮಂಗಳೂರು, ಡಿ 22 (DaijiworldNews/MS):ಕರಾವಳಿ ಜಿಲ್ಲೆಗಳಲ್ಲಿ ಚಳಿ ಆರಂಭವಾಗಿದ್ದು, ಉಷ್ಣಾಂಶದಲ್ಲಿ ಇಳಿಕೆಯಾಗಿದೆ. ಇದಲ್ಲದೆ ಜಿಲ್ಲೆಯಲ್ಲಿ ಅಕಾಲಿಕ ಮಳೆಯ ಅಬ್ಬರ ತಗ್ಗಿದ್ದು, ಕಳೆದೆರಡು ದಿನಗಳಿಂದ ಚಳಿ ವಾತಾವರಣ ಹೆಚ್ಚಿದೆ. ಸಂಜೆಯಿಂದಲೇ ಇಬ್ಬನಿ ಬೀಳಲು ಆರಂಭವಾಗಿದ್ದು, ಮುಂಜಾನೆ ಮಂಜು ಕವಿದ ವಾತಾವರಣದ ನಡುವೆ ಎಲ್ಲೆಡೆ ಚಳಿ ಆವರಿಸಿದೆ.
ಬಿಸಿಲಿನ ವಾತಾವರಣ ಹೆಚ್ಚಿರುವ ಕರಾವಳಿಯಲ್ಲಿ ಕನಿಷ್ಟ ತಾಪಮಾನ 20 ಡಿಗ್ರಿ ದಾಖಲಾಗಿದೆ. ಬುಧವಾರ ಬೆಳಗ್ಗೆಯೂ ಚಳಿಯ ವಾತಾವರಣದಿಂದ ಕೂಡಿತ್ತು. ಇನ್ನು ಇದೇ ವಾತಾವರಣ ಎರಡು ಮೂರು ದಿನ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ
ಚಾರ್ಮಾಡಿ ಹಾಗೂ ಶಿರಾಡಿ ಘಾಟಿ ಪ್ರದೇಶಗಳಲ್ಲಿ ರಾತ್ರಿ ಸಂಚಾರ ಕಷ್ಟವಾಗಿದ್ದು , ರಸ್ತೆ ಹಾಗೂ ಮುಂದಿನಿಂದ ಬರುವ ವಾಹನ ಕಾಣದಷ್ಟು ದಟ್ಟ ಮಂಜು ಆವರಿಸುತ್ತಿದೆ. ಕನಿಷ್ಠ 18ರಿಂದ 20 ಡಿಗ್ರಿವರೆಗೆ ವಾತಾವರಣ ತಂಪೇರುತ್ತಿದ್ದು, ಇನ್ನು ಮಧ್ಯಾಹ್ನ ಉತ್ತಮ ಬಿಸಿಲಿನ ವಾತಾವರಣವೂ ಕಂಡುಬರುತ್ತಿದೆ.
ಅಕಾಲಿಕ ಮಳೆಯಿಂದ ತತ್ತರಿಸಿದ್ದ ಕೃಷಿಕರು, ಚಳಿಯ ವಾತಾವರಣದಿಂದ ಕೊಂಚ ನಿರಾಳರಾಗಿದ್ದಾರೆ.