ಕಾಸರಗೋಡು, ಡಿ.20 (DaijiworldNews/SM): ರಾಷ್ಟ್ರಪತಿ ರಾಮನಾಥ್ ಕೋವಿಂದ್ ನಾಳೆ ಕಾಸರಗೋಡಿಗೆ ಆಗಮಿಸಲಿದ್ದು, ಸಂಜೆ 3. 30ಕ್ಕೆ ಪೆರಿಯ ಕೇಂದ್ರ ವಿಶ್ವವಿದ್ಯಾನಿಲಯದ ಐದನೇ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ.
ಕೇರಳ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್, ಕೇರಳ ಸ್ಥಳೀಯಾಡಳಿತ ಸಚಿವ ಎಂ.ವಿ. ಗೋವಿಂದನ್ ಮಾಸ್ಟರ್ ಹಾಗೂ ಇನ್ನಿತರ ಗಣ್ಯರು ಉಪಸ್ಥಿತರಿರುವರು. ಮಧ್ಯಾಹ್ನ ಕಣ್ಣೂರು ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿರುವ ರಾಷ್ಟಪತಿಯವರು, 3. 20ಕ್ಕೆ ಪೆರಿಯದಲ್ಲಿರುವ ಹೆಲಿಪ್ಯಾಡ್ ಗೆ ಬರಲಿದ್ದಾರೆ.
ಇನ್ನು ರಾಷ್ಟ್ರಪತಿ ಆಗಮನ ಹಿನ್ನೆಲೆಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ರ ತನಕ ಕಾಸರಗೋಡು ಜಿಲ್ಲೆಯಲ್ಲಿ ಸಂಚಾರ ನಿಯಂತ್ರಣ ಜಾರಿಗೆ ತರಲಾಗಿದೆ. ರಾಷ್ಟ್ರೀಯ ಹೆದ್ದಾರಿಯ ಮಿಂಗೋತ್ ನಿಂದ ಚಟ್ಟಂಚಾಲ್ ತನಕ ರಾಜ್ಯ ಹೆದ್ದಾರಿಯ ಪಳ್ಳಿಕೆರೆಯಿಂದ ಕಳ್ನಾಡ್ ತನಕ ಸಂಚಾರ ನಿಯಂತ್ರಣ ಮಾಡಲಾಗಿದೆ.
ಬಸ್ಸು ಹಾಗೂ ಇತರ ಲಘು ವಾಹನಗಳನ್ನು ನಿಯಂತ್ರಣದೊಂದಿಗೆ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು. ಸರಕು ಸೇರಿದಂತೆ ಘನ ವಾಹನಗಳು ಬೆಳಿಗ್ಗೆ 10ರಿಂದ ಸಂಜೆ 5.30ರ ತನಕ ನಿರ್ಬಂಧಿಸಲಾಗಿದೆ.