ಉಳ್ಳಾಲ, ಡಿ.20 (DaijiworldNews/HR): ಅವರಿಬ್ಬರದ್ದು ಎರಡು ವರ್ಷಗಳ ಪ್ರೀತಿ, ಒಂದೇ ಬ್ಯಾಚಿನಲ್ಲಿ ಎಂಬಿಬಿಎಸ್ ಪದವಿ ಪೂರೈಸಿ ಇನ್ನೇನು ಪರೀಕ್ಷೆಯನ್ನು ಮುಗಿಸುವವರಿದ್ದರು. ಆದರೆ ಇವರಿಬ್ಬರ ನಡುವಿನ ಪ್ರೀತಿಯಲ್ಲಿ ಬಿರುಕು ಕಾಣಿಸಿಕೊಂಡು ಡಿಪ್ರೆಷನ್ ಒಳಗಾದ ವಿದ್ಯಾರ್ಥಿ ಊರಿಗೆ ಮರಳಿದ್ದರೆ ಇತ್ತ ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಬದುಕಿಗೆ ಅಂತ್ಯ ಹಾಡಿದ್ದಾಳೆ.
ಬೀದರ್ ಜಿಲ್ಲೆಯ ಆನಂದನಗರ ನಿವಾಸಿ ವಿಜಯಕುಮಾರ್ ಗಾಯಕವಾಡ್ ಎಂಬವರ ಪುತ್ರಿ ವೈಶಾಲಿ ಗಾಯಕ್ವಾಡ್ (25) ಆತ್ಮಹತ್ಯೆ ನಡೆಸಿದವರು.
ಆತ್ಮಹತ್ಯೆ ಪ್ರಚೋದನೆ ಆರೋಪದಡಿ ಸಹಪಾಠಿ ವಿದ್ಯಾರ್ಥಿ ಕೇರಳದ ಪಾಲಕ್ಕಾಡ್ ಜಿಲ್ಲೆಯ ಸುಜೀಶ್ ಎಂಬಾತನನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ನಾಲ್ಕು ವರ್ಷಗಳ ಎಂಬಿಬಿಎಸ್ ಪದವಿ ಮುಗಿಸಿ ಇನ್ನು ಇಬ್ಬರು ಪರೀಕ್ಷೆ ಬರೆಯುವವರಿದ್ದರು. ಇಬ್ಬರ ನಡುವೆ ಸಂಶಯಗಳು ಹುಟ್ಟಿ ಇಬ್ಬರ ನಡುವಿನ ಪ್ರೀತಿ ದೂರವಾಗಿತ್ತು. ಇದರಿಂದ ವಿದ್ಯಾರ್ಥಿನಿಯೂ ಖಿನ್ನತೆಗೆ ಒಳಗಾಗಿದ್ದು, ವಿದ್ಯಾರ್ಥಿ ಸುಜೀಶ್ ಕೂಡಾ ಖಿನ್ನತೆಗೆ ಒಳಗಾಗಿ ತಿಂಗಳ ಹಿಂದೆ ಊರಿಗೆ ಮರಳಿದ್ದನು.
ಇನ್ನು ಮೂರು ದಿನಗಳ ಹಿಂದಷ್ಟೇ ತಂದೆಯ ಜೊತೆಗೆ ಬಂದಿದ್ದ ಮನೀಶ್ ನನ್ನು ಭೇಟಿ ಮಾಡಲು ವೈಶಾಲಿ ಹಾಗೂ ಸ್ನೇಹಿತರು ಬಂದಿದ್ದರು. ಆದರೆ ಅಲ್ಲಿ ಮಾತುಕತೆ ನಡೆಸಿ ಮುಂದೆ ಇಬ್ಬರೂ ಪ್ರೀತಿಯಲ್ಲಿ ಮುಂದುವರೆಯದಂತೆ ತೀರ್ಮಾನಿಸಿದ್ದರು. ಆದರೆ ಭಾನುವಾರ ವೈಶಾಲಿ ತನ್ನ ಕುತ್ತಾರು ಜಂಕ್ಷನ್ ನಲ್ಲಿರುವ ಸಿಲಿಕೋನಿಯಾ ಫ್ಲ್ಯಾಟ್ ನಲ್ಲಿ ಫ್ಯಾನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಳು.
ಸುಜೀಶ್ ಭೇಟಿಯಾದ ಬಳಿಕ ವೈಶಾಲಿ ಮೊಬೈಲ್ ಸ್ವಿಚ್ ಆಫ್ ಆಗಿರುವುದರಿಂದ ಸಂಶಯಗೊಂಡ ಸ್ನೇಹಿತರು ಭಾನುವಾರ ಫ್ಲ್ಯಾಟ್ ಗೆ ತೆರಳಿದಾಗ ಬಾಗಿಲು ಮುಚ್ಚಿತ್ತು. ಬಾಗಿಲು ಮುರಿದು ನೋಡಿದಾಗ ವೈಶಾಲಿ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ.
ಸದ್ಯ ಪ್ರಿಯಕರ ಸುಜೀಶ್ ನನ್ನು ವಿಚಾರಣೆ ನಡೆಸಿದ ಉಳ್ಳಾಲ ಪೊಲೀಸರು ಆತ್ಮಹತ್ಯೆ ಪ್ರಚೋದನೆಯಡಿ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ.