ಪುತ್ತೂರು, ಡಿ.20 (DaijiworldNews/HR): ದ್ವಿಚಕ್ರ ವಾಹನಗಳ ಮಧ್ಯೆ ಡಿಕ್ಕಿ ಸಂಭವಿಸಿ ಓರ್ವ ಮೃತಪಟ್ಟು ಮತ್ತೊಬ್ಬ ಗಂಭೀರ ಗಾಯಗೊಂಡ ಘಟನೆ ಸೋಮವಾರ ಬೆಳಿಗ್ಗೆ ಕುಂಬ್ರ ಸಮೀಪದ ಕೊಲ್ಲಾಜೆ ಎಂಬಲ್ಲಿ ನಡೆದಿದೆ.
ಕೊಲ್ಲಾಜೆ ಒಳರಸ್ತೆಯಿಂದ ವ್ಯಕ್ತಿಯೋರ್ವರು ಚಲಾಯಿಸಿಕೊಂಡು ಬರುತ್ತಿದ್ದ ಟಿವಿಎಸ್ ಜುಪಿಟರ್ ದ್ವಿಚಕ್ರ ವಾಹನ ಮುಖ್ಯ ರಸ್ತೆಗೆ ಎಂಟ್ರಿ ಕೊಡುತ್ತಿದ್ದ ವೇಳೆ ಕೆಯ್ಯೂರು ಕಡೆಯಿಂದ ಕುಂಬ್ರ ಕಡೆಗೆ ಹೋಗುತ್ತಿದ್ದ ಕೆ.ಟಿ.ಎಂ ಬೈಕ್ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಎರಡೂ ದ್ವಿಚಕ್ರ ಸವಾರರು ರಸ್ತೆಗೆಸೆಯಲ್ಪಟ್ಟಿದ್ದು ಬೈಕ್ ಸಮೀಪದ ಚರಂಡಿಗೆ ಉರುಳಿ ಬಿದ್ದಿದೆ.
ಜುಪಿಟರ್ ಸವಾರ ರಬ್ಬರ್ ಟ್ಯಾಪಿಂಗ್ ಕಾರ್ಮಿಕ ಗಂಭೀರ ಸ್ವರೂಪದ ಗಾಯಗಳೊಂದಿಗೆ ರಸ್ತೆ ಮಧ್ಯೆದಲ್ಲಿ ಬಿದ್ದುಕೊಂಡಿದ್ದ ದೃಶ್ಯ ಕಂಡು ಬಂದಿತ್ತು. ಕೆಟಿಎಂ ಸವಾರ ಪುತ್ತೂರು ಖಾಸಗಿ ಕಾಲೇಜಿನ ವಿದ್ಯಾರ್ಥಿ ಎಂದು ತಿಳಿದು ಬಂದಿದೆ.
ಇನ್ನು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲು ಅನೇಕ ವಾಹನ ಸವಾರರು ನಿರಾಕರಿಸಿದ ಘಟನೆಯೂ ನಡೆಯಿತು. ನಂತರ ಅನ್ಯ ಉಪಾಯ ಕಾಣದೆ ಕುಂಬ್ರದ ಅಬ್ಬಾಸ್ ಎಂಬವರು ತಮ್ಮ ಗೂಡ್ಸ್ ರಿಕ್ಷಾದಲ್ಲಿ ಕರೆದುಕೊಂಡು ಹೋಗಲು ಮುಂದಾಗಿ ಇಬ್ಬರೂ ಗಾಯಾಳುಗಳನ್ನು ಆಸ್ಪತ್ರೆಗೆ ಕರೆದೊಯ್ದಿದಿದ್ದು, ಸಂಪ್ಯದಲ್ಲಿ ಓರ್ವ ಗಾಯಾಳುವನ್ನು ಆಂಬ್ಯುಲೆನ್ಸ್ಗೆ ಶಿಫ್ಟ್ ಮಾಡಲಾಗಿದ್ದು, ಸ್ಕೂಟರ್ ಸವಾರ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಪುತ್ತೂರು ಗ್ರಾಮಾಂತರ ಪೊಲೀಸರು ಕೇಸು ದಾಖಲಿಸಿದ್ದಾರೆ.