ಕುಂದಾಪುರ, ಡಿ 20 (DaijiworldNews/MS): ಮಾಜಿ ಶಾಸಕ ಬಸ್ರೂರು ಅಪ್ಪಣ್ಣ ಹೆಗ್ಡೆ ಜನ್ಮದಿನ ಹಿನ್ನೆಲೆಯಲ್ಲಿ ಬಸ್ರೂರು ಅಪ್ಪಣ್ಣ ಹೆಗ್ಡೆ ಪ್ರತಿಷ್ಠಾನ ನೀಡುತ್ತಾ ಬಂದಿರುವ ಬಸ್ರೂರು ಅಪ್ಪಣ್ಣ ಹೆಗ್ಡೆ ಕೃಷಿ ಪ್ರಶಸ್ತಿಗೆ ಕುರಿಯಾಜೆ ತಿರುಮಲೇಶ್ವರ ಭಟ್ ಆಯ್ಕೆ ಆಗಿದ್ದಾರೆ.
ಬಸ್ರೂರು ಶಾರದಾ ಕಾಲೇಜ್ ಆವರಣದಲ್ಲಿ ಡಿ.24ರ ಸಂಜೆ 4ಕ್ಕೆ ನಡೆಯುವ ಅಪ್ಪಣ್ಣ ಹೆಗ್ಡೆ 87ನೇ ಹುಟ್ಟು ಹಬ್ಬದಲ್ಲಿ ಪ್ರಶಸ್ತಿ ಪ್ರಧಾನ, ವಿದ್ಯಾರ್ಥಿಗಳು, ಅನಾರೋಗ್ಯ ಪೀಡಿತರು ಹಾಗೂ ಅಶಕ್ತರಿಗೆ ದತ್ತಿನಿಧಿ ಸಹಾಯಧನ ವಿತರಿಸಲಾಗುತ್ತದೆ.
ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ. ಸಿ. ಮಾಧುಸ್ವಾಮಿ ಅಧ್ಯಕ್ಷತೆ ವಹಿಸಲಿದ್ದು, ಸುಬ್ರಹ್ಮಣ್ಯ ಮಠ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ ಎಂದು ಕುಂದಾಪುರ ತಾಪಂ ಮಾಜಿ ಉಪಾಧ್ಯಕ್ಷ ರಾಮ್ಕಿಶನ್ ಹೆಗ್ಡೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕುರಿಯಾಜೆ ತಿರುಮಲೇಶ್ವರ ಭಟ್ ಸುಳ್ಯ ತಾಲೂಕು, ಬೆಳ್ಳಾರೆ ಸಮೀಪದ ಕುರಿಯಾಜೆಯವರಾಗಿದ್ದು, ಕಳೆದ ಕೆಲವು ವರ್ಷಗಳಿಂದ ಕೃಷಿಯಲ್ಲಿ ಅದ್ಭುತವಾದ ಸಾಧನೆ ಮಾಡಿದ್ದಾರೆ. ದೇಶ-ವಿದೇಶಗಳಿಂದ ತಂದು ಬೆಳೆಸಿದ ಹಣ್ಣು ಹೂವು ಗಿಡಮೂಲಿಕೆ ಸೇರಿದಂತೆ ನೂರಾರು ಬಗೆಯ ಸಸ್ಯರಾಶಿಯೇ ಇವರ ತೋಟದಲ್ಲಿ ಇದೆ. ಸಾಂಪ್ರದಾಯಿಕ ಬೆಳೆಗಳೊಂದಿಗೆ ಅಲಂಕಾರಿಕ ಕಲ್ಲುಗಳು ತೋಟದ ಸುಂದರತೆ ಹೆಚ್ಚಿಸಿದ್ದು, ತೋಟ ನಂದನವನದಷ್ಟೇ ಆಕರ್ಷಕವಾಗಿ ನಿರ್ಮಿಸಿದ್ದಾರೆ.