ಮಂಗಳೂರು, ಡಿ 20 (DaijiworldNews/MS): ಕರಾವಳಿಯಲ್ಲಿ ಮತ್ತೆ ಒಮಿಕ್ರಾನ್ ಪ್ರಕರಣ ಪತ್ತೆಯಾಗಿದೆ. ಈ ಬಗ್ಗೆ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ಡಾ|ಕೆ .ಸುಧಾಕರ್ ಅವಿಭಜಿತ ಜಿಲ್ಲೆ ಹಾಗೂ ಧಾರವಾಡ, ಭದ್ರಾವತಿ ಪ್ರಕರಣ ಪತ್ತೆಯಾಗಿರುವುದನ್ನು ದೃಢಪಡಿಸಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಕೊರೊನಾ ರೂಪಾಂತರಿ ತಳಿ ಒಮಿಕ್ರಾನ್ ಪತ್ತೆಯಾಗಿದ್ದು 82 ವರ್ಷದ ವೃದ್ದ ಹಾಗೂ 73 ವರ್ಷದ ವೃದ್ದೆ ಸೋಂಕು ದೃಢಪಟ್ಟಿದೆ.ಇನ್ನು ಮಂಗಳೂರಿನ ನರ್ಸಿಂಗ್ ಕಾಲೇಜಿನ 19 ವರ್ಷದ ಯುವತಿಗೆ ದೃಢಪಟ್ಟಿದೆ. ಧಾರವಾಡದಲ್ಲಿ 54 ವರ್ಷದ ಪುರುಷ ಹಾಗೂ ಭದ್ರಾವತಿಯಲ್ಲಿ 20 ವರ್ಷದ ಯುವತಿಯಲ್ಲಿ ಸೋಂಕು ಪತ್ತೆಯಾಗಿದೆ.
ಉಡುಪಿಯ ಪ್ರಕರಣದಲ್ಲಿ ಕುಟುಂಬದಲ್ಲಿ ಕೊವಿಡ್ ಪಾಸಿಟಿವ್ ಪತ್ತೆಯಾದ ಹಿನ್ನಲೆಯಲ್ಲಿ ಪ್ರಾಥಮಿಕ ಸಂಪರ್ಕಿತರಾದ ಕಾರಣ ಕುಟುಂಬದ 4 ಮಂದಿ ಸದಸ್ಯರು ಕೊವೀಡ್ ಪರೀಕ್ಷೆಗೆ ಒಳಪಟ್ಟಿದ್ದರು. ಒಂದೇ ಕುಟುಂಬದ ಮೂವರಿಗೆ ಕೊವಿಡ್ ಪಾಸಿಟಿವ್ ಪತ್ತೆಯಾಗಿದ್ದು ಡಬ್ಲ್ಯೂಜಿಎಸ್ ಪರೀಕ್ಷೆ ಯಲ್ಲಿ ಇಬ್ಬರಿಗೆ ಒಮಿಕ್ರಾನ್ ದೃಢಪಟ್ಟಿದೆ. ಈ ಹಿನ್ನಲೆಯಲ್ಲಿ ಸೋಂಕು ಹರಡಿದ ಮೂಲ ಸಂಪರ್ಕಿತರನ್ನು ಆರೋಗ್ಯ ಇಲಾಖೆ ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿದೆ.ಇಬ್ಬರು ರೋಗಿಗಳಲ್ಲಿ ಕೂಡಾ ಯಾವುದೇ ಕೊವಿಡ್ ರೋಗ ಲಕ್ಷಣ ಕಂಡುಬಂದಿಲ್ಲ.
ಶನಿವಾರ ದಕ್ಷಿಣ ಕನ್ನಡದಲ್ಲಿ ಎರಡು ಕ್ಲಸ್ಟರ್ ಗಳಲ್ಲಿ ಐವರು ವಿದ್ಯಾರ್ಥಿಗಳಿಗೆ ಒಮಿಕ್ರಾನ್ ಸೋಂಕು ದೃಢಪಡುವ ಮೂಲಕ ಜಿಲ್ಲೆಯಲ್ಲಿ ಮೊದಲ ಕೇಸ್ ಪತ್ತೆಯಾಗಿತ್ತು. ಮಂಗಳೂರಿನ ಹೊರವಲಯದ ಮುಡಿಪು ಸಮೀಪ ಇರುವ ವಸತಿ ನಿಲಯದಲ್ಲಿ ನಾಲ್ವರು ವಿದ್ಯಾರ್ಥಿಗಳಿಗೆ ಮತ್ತು ಮಂಗಳೂರಿನ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿನಿ ಸೇರಿದಂತೆ ಒಟ್ಟು ಐವರಲ್ಲಿ ಒಮಿಕ್ರಾನ್ ಸೋಂಕು ಕಂಡುಬಂದಿತ್ತು.
ರಾಜ್ಯದಲ್ಲಿ ಒಟ್ಟಾರೆ ಒಮಿಕ್ರಾನ್ ಸೋಂಕು ಪೀಡಿತರ ಸಂಖ್ಯೆ 19ಕ್ಕೆ ಏರಿಕೆಯಾದಂತಾಗಿದೆ.