ಬಂಟ್ವಾಳ, ಡಿ.19 (DaijiworldNews/HR): ಬಂಟ್ವಾಳ ತಾಲೂಕಿನ ಪುಣಚ ಗ್ರಾಮದ ಅರೀಪೆಕಟ್ಟೆ ಎಂಬಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ಮನೆಯಲ್ಲಿ ಕೂಡಿ ಹಾಕಿ ಬೆಂಕಿ ಹಚ್ಚಿದ ಘಟನೆ ನಡೆದಿದೆ.
ಮಹಮ್ಮದ್ ಕಬೀರ್(25) ಎಂಬವರು ದೂರು ನೀಡಿದ್ದು, ಆರೋಪಿ ಗೌಸ್ ಜಲಾಲುದ್ದೀನ್ ವಿರುದ್ಧ ಪ್ರಕರಣ ದಾಖಲಾಗಿದೆ.
ಮಹಮ್ಮದ್ ಕಬೀರ್ ಅವರ ಸಹೋದರಿ ಫಾತಿಮತ್ ಬುಶ್ರಾ ಅವರನ್ನು ವಿಟ್ಲ ನಿವಾಸಿ ಗೌಸ್ ಜಲಾಲುದ್ದಿನ್ ಎಂಬಾತನಿಗೆ ವಿವಾಹ ಮಾಡಿ ಕೊಟ್ಟ ಬಳಿಕ ಇತ್ತೀಚೆಗೆ ಸುಮಾರು ಒಂದು ತಿಂಗಳಿನಿಂದ ಮನಸ್ತಾಪ ಉಂಟಾಗಿತ್ತು. ಮನೆಯಲ್ಲಿಯೇ ಇದ್ದು ಹತ್ತು ದಿನಗಳ ಹಿಂದೆ ಗೌಸ್ ಜಲಾಲುದ್ದೀನ್ ಕಬೀರ್ ಮನೆಗೆ ಬಂದು ಅಕ್ಕನನ್ನು ಕಳುಹಿಸಿಕೊಡುವ ವಿಚಾರದಲ್ಲಿ ಕೋಪಗೊಂಡಿದ್ದು ಶನಿವಾರ ಮಧ್ಯಾಹ್ನ ಮನೆಗೆ ಬಂದು ಬಾಟ್ಲಿಯಲ್ಲಿ ಇಂಧನವನ್ನು ತಂದು ಅಕ್ಕನಿಗೆ ಅವಾಚ್ಯ ಶಬ್ದಗಳಿಂದ ಬೈದು ಜೀವ ಬೆದರಿಕೆ ಹಾಕಿ ಮನೆಗೆ ಬೆಂಕಿ ಹಚ್ಚುವ ಉದ್ದೇಶದಿಂದ ಮನೆಯಲ್ಲಿದ್ದ ಸೋಫಾ ಸೆಟ್ ಗೆ ಬೆಂಕಿ ಹಚ್ಚಿದಾಗ ಬೆಂಕಿಯ ಜ್ವಾಲೆಯು ಹಬ್ಬಿ ಅಲ್ಲಿದ್ದ ಸೋಫಾ ಸೆಟ್, ಧರ್ಮಗ್ರಂಥ, ಹೊದಿಕೆಗಳು,ಅಕ್ಕಿ,ತೆಂಗಿನಕಾಯಿ ಹೊತ್ತಿ ಉರಿದು ಸುಮಾರು ಹತ್ತು ಸಾವಿರ ನಷ್ಟ ಉಂಟಾಗಿತ್ತು.
ಈ ವೇಳೆ ಕಬೀರ್ ಇದನ್ನು ಆಕ್ಷೇಪಿಸಲು ಬಂದಾಗ ಕೈಯಿಂದ ಹೊಡೆದು ದೂಡಿ ಹಾಕಿದ ಪರಿಣಾಮ ಗಾಯಗೊಂಡಿದ್ದಾರೆ.
ವಿಟ್ಲ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.