ಮಂಗಳೂರು, ಡಿ.18 (DaijiworldNews/HR): ಶಾಸಕ ವೇದವ್ಯಾಸ ಕಾಮತ್ ಅವರು ಡಿ.18ರ ಶನಿವಾರ ನಗರದ ಬೆಂಗರೆ ಪ್ರದೇಶದಲ್ಲಿ 3.70 ಕೋಟಿ ರೂ.ಗಳ ಅನುದಾನದಲ್ಲಿ ನಾಡದೋಣಿ ತಂಗಲು ರೇವು ನಿರ್ಮಾಣ ಕಾಮಗಾರಿ ಹಾಗೂ 2 ಕೋಟಿ ಅನುದಾನದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಶಾಸಕರು, "ನಾಡದೋಣಿಗಳನ್ನು ನಿಲುಗಡೆ ಮಾಡಲು ಇಲ್ಲಿ ಜಾಗದ ಕೊರತೆಯಿತ್ತು. ಇನ್ನೂ ಮುಂದೆ ಈ ತೊಂದರೆ ನಿವಾರಣೆಯಾಗಲಿದೆ. ನಿಗದಿತ ಅವಧಿಯೊಳಗೆ ನಾಡದೋಣಿ ನಿಲುಗಡೆಗೆ ರೇವು ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳಲಿದೆ" ಎಂದರು.
"ಮೂರನೇ ಹಂತದ ಮೀನುಗಾರಿಕಾ ಜೆಟ್ಟಿ ನಿರ್ಮಾಣ ಕಾರ್ಯವು 22 ಕೋಟಿ ರು.ಗಳಲ್ಲಿ ನಡೆಯಲಿದೆ. ಇದಕ್ಕೆ ಟೆಂಡರ್ ಅಂತಿಮ ಹಂತದಲ್ಲಿದೆ, ಇದೂ ಕೂಡ ತಾಂತ್ರಿಕ ಕಾರಣಗಳಿಂದ ವಿಳಂಬವಾಗಿತ್ತು, ಶೀಘ್ರವೇ ಹೊಯಿಗೆ ಬಝಾರ್ನಲ್ಲಿ ಶಿಲನ್ಯಾಸ ನೆರವೇರಿಸಲಾಗುವುದು" ಎಂದು ಹೇಳಿದರು.
ಇನ್ನು "94 ಕೋಟಿ ರು.ಗಳಲ್ಲಿ ವಾಣಿಜ್ಯ ಜೆಟ್ಟಿ ನಿರ್ಮಾಣ ಕಾಮಗಾರಿಯೂ ಬೆಂಗರೆಯಲ್ಲಿ ನಡೆಯಲಿದೆ. ಇದರಲ್ಲಿ 65 ಕೋಟಿ ರು. ಜೆಟ್ಟಿ ನಿರ್ಮಾಣಕ್ಕೆ ಹಾಗೂ 29 ಕೋಟಿ ರೂ.ಗಳು ಹೂಳೆತ್ತುವ ಕಾಮಗಾರಿಗೆ ವೆಚ್ಚವಾಗಲಿದೆ. ಈ ಎಲ್ಲ ಕಾಮಗಾರಿಗಳಿಂದ ಬೆಂಗರೆ ಪ್ರದೇಶದಲ್ಲಿ ಉದ್ದಿಮೆ ಮತ್ತು ವ್ಯಾಪಾರದ ಬೆಳವಣಿಗೆಗೆ ಉತ್ತಮ ಅವಕಾಶ ಲಭ್ಯವಾಗಲಿದೆ, ಇದಲ್ಲದೇ ತೇಲುವ ಜಟ್ಟಿ ನಿರ್ಮಿಸುವ ಉದ್ದೇಶ ಹೊಂದಲಾಗಿದೆ" ಎಂದರು.
ಇದೇ ಮೊದಲ ಬಾರಿಗೆ 150ರಷ್ಟು ನಾಡದೋಣಿಗಳಿಗೆ ಇಲ್ಲಿ ತಂಗಲು ಅವಕಾಶ ಸಿಗಲಿದೆ. 90 ಮೀಟರ್ ಉದ್ದಕ್ಕೆ ನಾಡದೋಣಿ ನಿಲುಗಡೆಗೆ ಬೀಚ್ ಲ್ಯಾಂಡಿಂಗ್ ಸೌಲಭ್ಯ ಇರಲಿದೆ ಎಂದು ಬಂದರು ಇಲಾಖೆ ಅಧಿಕಾರಿ ತಿಳಿಸಿದರು.
ಬಳಿಕ ಶಾಸಕ ವೇದವ್ಯಾಸ ಕಾಮತ್ ಅವರು ಅಲ್ಪ ಸಂಖ್ಯಾತರಿಗೆ ನಿಗಮದಿಂದ ಜನವಿಕಾಸ ಯೋಜನೆಯಡಿ ಮಂಜೂರಾದ 2 ಕೋಟಿ ರೂ.ಗಳ ಕೌಶಲ್ಯಾಭಿವೃದ್ದಿ ಕೇಂದ್ರಕ್ಕೆ ಶಿಲನ್ಯಾಸ ನೆರವೇರಿಸಿದರು.
ಈ ಸಂದರ್ಭದಲ್ಲಿ ಮಂಗಳೂರು ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರು, ಪಾಲಿಕೆ ಸದಸ್ಯ ಮುನಿಪ್ ಬೆಂಗ್ರೆ, ಮುಖಂಡರಾದ ಮೀರಾ ಕರ್ಕೇರಾ, ವಿಜಯ್ ಕುಮಾರ್ ಶೆಟ್ಟಿ, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕಿ ಸುಶ್ಮಿತಾ, ಪ್ರಮುಖರಾದ ಶಶಿಕುಮಾರ್, ಮೋಹನ್ ಬೆಂಗ್ರೆ, ಅಜಿತ್ ಬೆಂಗ್ರೆ, ಸುಶೀಂದ್ರ, ಚೇತನ್ ಬೆಂಗ್ರೆ, ಧನಂಜಯ ಪುತ್ರನ್, ಗಂಗಾಧರ್ ಸಾಲ್ಯಾನ್, ಹೇಮಚಂದ್ರ ಸಾಲ್ಯಾನ್, ಲೋಕೇಶ್ ಬೆಂಗ್ರೆ, ಮಹೇಶ್ ಬೆಂಗ್ರೆ, ಗುತ್ತಿಗೆದಾರರು, ಬಂದರು ಹಾಗೂ ಮೀನುಗಾರಿಕಾ ಇಲಾಖೆಯ ಅಧಿಕಾರಿಗಳು ಇದ್ದರು.