ಕಾರ್ಕಳ, ಡಿ.18 (Daijiworld/PY): "ಮಿಯ್ಯಾರು ಜೋಡುಕರೆ ಕಂಬಳವು ಸರ್ವ ಧರ್ಮಿಯರ ಸಾಮಾರಸ್ಯ ಸಂಗಮ ಭೂಮಿಯಾಗಿದೆ. ದೇವಸ್ಥಾನ, ಬಸದಿ, ಮಸೀದಿ, ಚರ್ಚ್ ಒಳಗೊಂಡಂತೆ ಧಾರ್ಮಿಕ ಕ್ಷೇತ್ರಗಳು ಕಂಬಳದ ಪರಿಸರದಲ್ಲಿ ಇದ್ದು, ತ್ನಮೂಲಕ ಶಾಂತಿ, ಸೌಹಾರ್ದತೆಯು ಶಾಶ್ವತ ನೆಲೆಸುವಂತೆ ಮಾಡಿದೆ. ತುಳುನಾಡಿದ ಸಂಸ್ಕೃತಿ, ಸಾಹಿತ್ಯ, ಕಲೆ, ಬಾಷೆಯ ಪ್ರತಿರೂಪವೇ ಕಂಬಳವಾಗಿದೆ" ಎಂದು ಮಿಯಾರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹರಿದಾಸ್ ಭಟ್ ಹೇಳಿದರು.
ಶನಿವಾರ ಬೆಳಿಗ್ಗೆ ಜರುಗಿದ್ದ ಮಿಯ್ಯಾರು ಕಂಬಳ ಸಮಿತಿ ಹಾಗೂ ನವೋದಯ ಗ್ರಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು ಸಹಯೋಗದೊಂದಿಗೆ 18ನೇ ವರ್ಷದ ಮಿಯ್ಯಾರು ಲವ-ಕುಶ ಜೋಡುಕರೆ ಕಂಬಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಿಯ್ಯಾರು ಚರ್ಚ್ನ ಧರ್ಮಗುರು ರೆ. ಫಾ. ಪಾವುಲ್ ರೇಗೋ ಮಾತನಾಡಿ, "ತುಳುನಾಡ ಜಾನಪಧ ಕ್ರೀಡೆ ಕಂಬಳವಾಗಿದೆ. ರೈತಾಪಿ ವರ್ಗದವರು ವರ್ಷದ ತಮ್ಮ ಕಾಯಕ ಮುಗಿದ ಬಳಕ ತಮ್ಮ ಕೋಣಗಳನ್ನು ಸ್ವರ್ಧಾ ರೂಪದಲ್ಲಿ ಕಂಬಳ ಆಚರಿಸುತ್ತಾ ಬಂದಿದ್ದರು" ಎಂದರು.
ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖಾ ಸಚಿವ ವಿ.ಸುನಿಲ್ಕುಮಾರ್, ಕಂಬಳ ಸಮಿತಿ ಕಾರ್ಯಾಧ್ಯಕ್ಷ ಜೀವನ್ದಾಸ್ ಅಡ್ಯಂತಾಯ, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಭಾಸ್ಕರ್ ಕೋಟ್ಯಾನ್, ನವೋದಯ ಸಂಘದ ಸುನೀಲ್ಬಜಗೋಳಿ, ಪುರಸಭಾ ಕೌನ್ಸಿಲರ್ ಶುಭದರಾವ್, ಉದ್ಯಮಿ ರವೀಂದ್ರ ಬಜಗೋಳಿ ಸೇರಿದಂತೆ ಕಂಬಳ ಸಮಿತಿಯವರು, ಕಂಬಳ ಪ್ರೇಮಿಗಳು ಉಪಸ್ಥಿತರಿದ್ದರು.
ಪಶು ವೈದ್ಯಕೀಯ ಸೇವೆ ಮತ್ತು ಆರೋಗ್ಯ ಸೇವೆಗಳನ್ನು ಸ್ಥಳದಲ್ಲಿ ವ್ಯವಸ್ಥೆಗೊಳಿಸಲಾಗಿದೆ. ಕೊರೊನಾ ಲಸಿಕೆ ಹಾಕುವ ವ್ಯವಸ್ಥೆ ಕೂಡ ಕಂಬಳ ಸ್ಥಳದಲ್ಲಿ ಕಲ್ಪಿಸಲಾಗಿದೆ. ಕಂಬಳ ತುಳು ಚಿತ್ರತಂಡದವರು ಕೂಡ ಭಾಗವಹಿಸಿದ್ದರು.
ಸಂಘಟನಾ ಕಾರ್ಯದರ್ಶಿ ಪ್ರೊ. ಕೆ.ಗುಣಪಾಲ ಕಡಂಬ ಸ್ವಾಗತಿಸಿದರು. ಜೆರಾಲ್ಡ್ ಮಿಯ್ಯಾರು ಧನ್ಯವಾದ ಸಲ್ಲಿಸಿದರು.