ಮಂಗಳೂರು, ಡಿ 17 (DaijiworldNews/MS): ಉಪ್ಪಿನಂಗಡಿಯಲ್ಲಿ ನಡೆದ ಲಾಠಿಚಾರ್ಜ್ ಖಂಡಿಸಿ ಹಾಗೂ ಬಂಧಿತ ಅಮಾಯಕರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿ ಪಿಎಫ್ಐ ಸಂಘಟನೆ ಶುಕ್ರವಾರ ಡಿಸೆಂಬರ್ 17 ರಂದು ಕ್ಲಾಕ್ ಟವರ್ ಬಳಿ ಎಸ್ಪಿ ಕಚೇರಿ ಚಲೋ ಪ್ರತಿಭಟನೆ ನಡೆಸಿತು.
ಇದೇ ವೇಳೆ ಪಿಎಫ್ಐ ಕಾರ್ಯಕರ್ತರು ಹಂಪನಕಟ್ಟೆ ವೃತ್ತದಿಂದ ಕ್ಲಾಕ್ ಟವರ್ ವರೆಗೆ ರ್ಯಾಲಿ ನಡೆಸಿದರು.ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ ಪ್ರತಿಭಟನಕಾರರು ಪೊಲೀಸರ ವಿರುದ್ಧ ಘೋಷಣೆಗಳನ್ನು ಕೂಗಿದರು.
ಮುನ್ನೆಚ್ಚರಿಕಾ ಕ್ರಮವಾಗಿ ಹೆಚ್ಚಿನ ಪೊಲೀಸ್ ನಿಯೋಜಿಸಿ ಭದ್ರತೆ ಕೈಗೊಳ್ಳಲಾಗಿತ್ತು ಕ್ಲಾಕ್ ಟವರ್, ಟೌನ್ಹಾಲ್ ಮತ್ತು ಹಂಪನಕಟ್ಟೆಯಲ್ಲಿ ಪೊಲೀಸ್ ಬ್ಯಾರಿಕೇಡ್ ಹಾಕಲಾಗಿತ್ತು. ಪೊಲೀಸ್ ಆಯುಕ್ತರು ಅನುಮತಿ ನಿರಾಕರಿಸಿದ್ದರಿಂದ ಪ್ರತಿಭಟನಾಕಾರರನ್ನು ಎಸ್ಪಿ ಕಚೇರಿ ಕಡೆಗೆ ತೆರಳದಂತೆ ಪೊಲೀಸರು ಕ್ಲಾಕ್ಟವರ್ ಬಳಿ ತಡೆದರು.
ಇದೇ ವೇಳೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಹಿಂಸಾಚಾರಕ್ಕೆ ಕಾರಣರಾದ ಪೋಲೀಸರನ್ನು ಅಮಾನತುಗೊಳಿಸುವಂತೆ ಪ್ರತಿಭಟನಾಕಾರರು ಒತ್ತಾಯಿಸಿದರು.
ಎಸ್ಡಿಪಿಐ ಸಂಘಟನೆಯ ಶಾಫಿ ಬೆಳ್ಳಾರೆ ಮಾತನಾಡಿ, ಜನರೇ ಆರೋಪಿಗಳನ್ನು ಪೊಲೀಸ್ ಠಾಣೆಗೆ ಕರೆತರುವುದಾದರೆ, ಪೊಲೀಸರು ಸರ್ಕಾರದಿಂದ ಸಂಬಳ ಏಕೆ ತೆಗೆದುಕೊಳ್ಳುತ್ತಾರೆ ಎಂದು ಪ್ರಶ್ನಿಸಿದರು. ಪಿಸ್ತೂಲ್ ಮತ್ತು ಲಾಟಿಗೆ ಧರ್ಮವಿಲ್ಲ ಎಂದು ಟಿಡಿ ನಾಗರಾಜ್ ಪ್ರಚೋದನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು. ಜಿಲ್ಲಾಧಿಕಾರಿಗೆ ಬಹಿರಂಗ ಬೆದರಿಕೆ ಹಾಕಿದ ವ್ಯಕ್ತಿಗಳ ವಿರುದ್ದ ಪೊಲೀಸರು ಯಾವುದೇ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ ಏಕೆ ಎಂದು ಪ್ರಶ್ನಿಸಿದರು.
ಭದ್ರತೆಗಾಇ 4 ಕೆಎಸ್ಆರ್ಪಿ, 5 ಸಿಎಆರ್, 6 ಎಸಿಪಿ, 16 ಇನ್ಸ್ಪೆಕ್ಟರ್, 32 ಪಿಎಸ್ಐ ಸೇರಿದಂತೆ 600ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.