ಮಂಗಳೂರು, ಡಿ 17 (DaijiworldNews/MS): "ಎಸ್.ಡಿ.ಪಿ.ಐ ಮತ್ತು ಪಿ.ಎಫ್.ಐ ಸಂಘಟನೆ ಇಂದು ಕರೆ ನೀಡಿರುವ ಪ್ರತಿಭಟನೆ ಹಾಗೂ ರ್ಯಾಲಿಯಲ್ಲಿ ಪ್ರತಿಭಟನೆಗೆ ಮಾತ್ರ ಮಂಗಳೂರು ತಾಲೂಕು ಕಚೇರಿ ಮುಂದೆ ಅವಕಾಶ ನೀಡಲಾಗಿದೆ. ಇದರ ಹೊರತಾಗಿ ಯಾವುದೇ ರ್ಯಾಲಿ ಅಥವಾ ಜಾಥಾ ನಡೆಸುವುದಕ್ಕೆ ಅವಕಾಶವಿಲ್ಲ" ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ತಿಳಿಸಿದ್ದಾರೆ.
ಈ ಬಗ್ಗೆ ಶುಕ್ರವಾರ ನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, "ಎಸ್ ಡಿ ಪಿ ಮತ್ತು ಪಿ ಎಫ್ ಐ ಸಂಘಟನೆ ರ್ಯಾಲಿಗೆ ಕರೆನೀಡಿದ್ದರು. ಆದರೆ ಪ್ರತಿಭಟನೆಗೆ ಅವಕಾಶ ಮಾತ್ರ ನೀಡಲಾಗಿದ್ದು ರ್ಯಾಲಿ ನಡೆಸಲು ಅವಕಾಶ ಇಲ್ಲ ಎಂದು ಆಯೋಜಕರಿಗೆ ಸ್ಪಷ್ಟವಾಗಿ ಹೇಳಿದ್ದೇವೆ. ಪ್ರತಿಭಟನೆ ಮಾಡುವ ಸಂದರ್ಭ ವೇಳೆ ಎಸ್ ಪಿ ಮನವಿ ಸ್ವೀಕರಿಸಬೇಕು ಎಂದು ಅವರು ಮನವಿ ಸಲ್ಲಿಸಿದ್ದಾರೆ" ಎಂದು ಹೇಳಿದರು.
"ಪ್ರತಿಭಟನೆಯಲ್ಲಿ ಭಾಗವಹಿಸುವ ಯಾರೂ ಕೂಡಾ ಕಾನೂನು ಉಲ್ಲಂಘಿಸುವಂತಿಲ್ಲ ಹಾಗೂ ಅತ್ಯಂತ ಶಾಂತಿಯುತವಾಗಿ ಪ್ರತಿಭಟನೆ ನಡೆಸುವುದರೊಂದಿಗೆ ಪೊಲೀಸ್ ಇಲಾಖೆಯ ಜೊತೆ ಸಹಕರಿಸುತ್ತಾರೆ ಎಂಬ ವಿಶ್ವಾಸ ಇದೆ" ಎಂದು ಶಶಿಕುಮಾರ್ ಹೇಳಿದ್ದಾರೆ.