ಉಡುಪಿ, ಡಿ 17 (DaijiworldNews/MS): ಇದು ಉಡುಪಿಯ ಒಂದು ಪ್ರಮುಖ ರಸ್ತೆ. ಈ ರಸ್ತೆಯಲ್ಲಿ ಪ್ರತಿ ನಿಮಿಷಕ್ಕೂ 50 ಕ್ಕೂ ಮಿಕ್ಕಿ ವಾಹನಗಳು ಸಂಚರಿಸುತ್ತವೆ. ಆದರೆ ಈ ರಸ್ತೆಯ ದುಸ್ಥಿತಿ ಕಂಡರೆ ಅಯ್ಯೋ ಎನಿಸದೆ ಇರದು.
ಇದು ಉಡುಪಿ ಮತ್ತು ಮಣಿಪಾಲ ನಗರಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ದುಸ್ಥಿತಿಯ ಕಥೆ. ಈ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಇಂದ್ರಾಳಿ ರೈಲ್ವೇ ಬ್ರಿಡ್ಜ್ ನ ದುಸ್ಥಿತಿ ಹೇಳತೀರದು. ಒಂದೆಡೆ ಹಾಳಾದ ರಸ್ತೆಯ ಧೂಳು ಆದಲ್ಲಿ ಮತ್ತೊಂದೆಡೆ ಸೇತುವೆಯ ಮೇಲಿನ ಸ್ಲ್ಯಾಬ್ ನ ಸರಳುಗಳು ಕಿತ್ತು ಮೇಲೆದ್ದು ಬಂದಿವೆ.
ಸೇತುವೆಯ ಎರಡೂ ಬದಿಗಳಲ್ಲಿ ಹೊಂಡಗಳು ಬಿದ್ದಿದ್ದು ಸಿಮೆಂಟ್ ಸ್ಲ್ಯಾಬ್ ಕಿತ್ತು ಬಂದಿದೆ. ಮಾತ್ರವಲ್ಲದೇ ಸ್ಲ್ಯಾಬ್ ಗೆ ಹಾಕಿದ ಕಾಂಕ್ರೀಟ್ ಸರಳುಗಳು ಮೇಲೆದ್ದು ಬಂದಿದ್ದು ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ. ಪ್ರತಿನಿತ್ಯ ಈ ರಸ್ತೆಯಲ್ಲಿ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇವುಗಳಲ್ಲಿ ದ್ವಿಚಕ್ರ ಮತ್ತು ತ್ರಿಚಕ್ರ ವಾಹನ ಸವಾರರ ಸ್ಥಿತಿಯಂತೂ ಹೇಳ ತೀರದು. ಚೂಪಾದ ಸರಳುಗಳು ವಾಹನದ ಚಕ್ರಗಳಿಗೆ ಸಿಲುಕಿದರೆ ವಾಹನದ ಟಯರ್ ಬ್ಲಾಸ್ಟ್ ಆಗುವುದಂತು ಖಂಡಿತ. ಹೊಂಡ ತಪ್ಪಿಸುವ ಸಂಧರ್ಭದಲ್ಲಿ ಈ ಭಾಗದಲ್ಲಿ ಹಲವಾರು ಮಂದಿ ಅಪಘಾತಕ್ಕೆ ಕೂಡಾ ಸಿಲುಕಿದ್ದಾರೆ.
ಪ್ರಸ್ತುತ ಇರುವ ಸೇತುವೆಗೆ ಸಮನಾಂತರವಾಗಿ ಮತ್ತೊಂದು ಹೊಸ ಸೇತುವೆಯನ್ನು ಕೂಡಾ ನಿರ್ಮಿಸಲಾಗುತಿದ್ದು, ಕಳೆದ ಕೆಲವು ವಾರಗಳಿಂದ ಈ ಕಾಮಗಾರಿ ಕೂಡ ನಿಂತು ಹೋಗಿದೆ. ಮಣಿಪಾಲದಿಂದ ಉಡುಪಿ ಕಡೆಗೆ ಮತ್ತು ಉಡುಪಿಯಿಂದ ಮಣಿಪಾಲದ ಕಡೆಗೆ ಬರುವ ವಾಹನಗಳು ವೇಗವಾಗಿ ಬರುವಾಗ ಅಚಾನಕ್ ಆಗಿ ಸಿಗುವ ಈ ಸ್ಥಳ ವಾಹನ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಈ ರಸ್ತೆಯ ಯಲ್ಲಿ ಪ್ರತಿನಿತ್ಯ ಬಸ್, ಕಾರು, ಆ್ಯಂಬುಲೆನ್ಸ್, ಘನ ವಾಹನಗಳು ಸಂಚರಿಸುತಿದ್ದು ಅಪಾಯ ಕಟ್ಟಿಟ್ಟ ಬುತ್ತಿ.
ಸಂಬಂಧಪಟ್ಟ ಇಲಾಖಾ ಅಧಿಕಾರಿಗಳ ಈ ಕುರಿತಾಗಿ ಗಮನ ಹರಿಸಿ ತಕ್ಷಣವೇ ಸಮಸ್ಯೆಯನ್ನು ಪರಿಹರಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.