ಮಂಗಳೂರು, ಡಿ 17 (DaijiworldNews/MS): ಲಂಚ ಸ್ವೀಕಾರ ಪ್ರಕರಣವೊಂದಕ್ಕೆ ಸಂಬಂಧಿಸಿ ಆರೋಪಿಯಾಗಿರುವ ಮಂಗಳೂರು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಯು.ಜಿತೇಂದ್ರನಾಥ್ಗೆ 7 ವರ್ಷ ಶಿಕ್ಷೆ ಹಾಗೂ 30 ಸಾವಿರ ರೂ.ದಂಡ ಹಾಗೂ ಎರಡನೇ ಆರೋಪಿ ಗುತ್ತಿಗೆ ಆಧಾರಿತ ಕಂಪ್ಯೂಟರ್ ಆಪರೇಟರ್ ಅನುಷ್ಕಾಗೆ 3 ವರ್ಷಗಳ ಸಾದಾ ಸಜೆ ಹಾಗೂ 10 ಸಾವಿರ ದಂಡವನ್ನು ಮಂಗಳೂರಿನ ೩ ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶ ಬಿ.ಬಿ ಜಕಾತಿ ಅವರು ತೀರ್ಪು ನೀಡಿದ್ದಾರೆ.
ಅಲ್ಪಸಂಖ್ಯಾತ ಅಭ್ಯರ್ಥಿಗಳಿಗೆ ರಾಜ್ಯ ಸರಕಾರದಿಂದ ಪ್ರವಾಸಿ ಟ್ಯಾಕ್ಸಿ ಖರೀದಿಸಲು ದೊರೆಯುವ ಸಹಾಯ ಧನದ ಮಂಜೂರಾತಿಗೆ ಜಿತೇಂದ್ರನಾಥ್ 15 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಬರ್ನಾಡ್ ರೋಶನ್ ಮಸ್ಕರೇನ್ಹಸ್ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಅದರಂತೆ 2014ರ ಸೆ.10ರಂದು ದಾಳಿ ನಡೆದಿತ್ತು.
ಪೊಲೀಸ್ ನಿರೀಕ್ಷಕ ವಿಜಯ ಪ್ರಸಾದ್ ದಾಳಿ ನಡೆಸಿ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಸರಕಾರದ ಪರವಾಗಿ ವಿಶೇಷ ಸಾರ್ವಜನಿಕ ಅಭಿಯೋಜಕ ರವೀಂದ್ರ ಮುನ್ನಿಪ್ಪಾಡಿ ವಾದ ಮಂಡಿಸಿದ್ದರು.