ಉಪ್ಪಿನಂಗಡಿ, ಡಿ.16 (Daijiworld/PY): ಉಪ್ಪಿನಂಗಡಿಯಲ್ಲಿ ಡಿ.14ರ ಮಂಗಳವಾರ ರಾತ್ರಿ ನಡೆದ ಪೊಲೀಸ್ ಲಾಠಿ ಚಾರ್ಜ್ ವೇಳೆ ಕಲ್ಲು ತೂರಾಟ, ಪೊಲೀಸರ ಮೇಲೆ ಹಲ್ಲೆ, ಕೊಲೆ ಯತ್ನ, ಸರಕಾರಿ ಸೊತ್ತಿಗೆ ಹಾನಿ ಸೇರಿದಂತೆ ಇನ್ನಿತರ ಕೃತ್ಯಗಳಿಗೆ ಸಂಬಂಧಿಸಿದಂತೆ 10 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮೊಹಮ್ಮದ್ ತಾಹೀರ್, ಸ್ವಾಧಿಕ್, ಅಬ್ದುಲ್ ಮುಬಾರಕ್, ಅಬ್ದುಲ್ ಶರೀನ್, ಮೊಹಮ್ಮದ್ ಜಾಹಿರ್, ಸುಜೀರ್ ಮಹಮ್ಮದ್ ಫೈಜಲ್, ಮೊಹಮ್ಮದ್ ಹನೀಫ್, ಎನ್ ಕಾಸಿಂ, ಮೊಹಮ್ಮದ್ ಆಸಿಫ್, ತುಪೈಲ್ ಮಹಮ್ಮದ್ ಎಂದು ಗುರುತಿಸಲಾಗಿದೆ.
ಈ ಎಲ್ಲಾ ಕೃತ್ಯಕ್ಕೆ ಕಾರಣರಾದ 10 ಮಂದಿಯನ್ನು ಪೊಲೀಸರು ಬಂಧಿಸಿದ್ದು, ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಇದರಲ್ಲಿ ಇಬ್ಬರು ಉಪ್ಪಿನಂಗಡಿ ಪರಿಸರದವರಾದರೆ, ಉಳಿದವರು ಬೇರೆ ಬೇರೆ ಕಡೆಯಿಂದ ಬಂದವರಾಗಿದ್ದಾರೆ. ಈ ಮೂರು ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹಲವರ ಬಂಧನವಾಗಬೇಕಿದ್ದು, ಅವರ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.
ಉಪ್ಪಿನಂಗಡಿ ಹಳೆ ಗೇಟ್ ಬಳಿ ಹಿಂದೂ ಕಾರ್ಯಕರ್ತನ ಮೇಲೆ ನಡೆದ ತಲ್ವಾರ್ ದಾಳಿಗೆ ಸಂಬಂಧಿಸಿ ವಿಚಾರಣೆಗಾಗಿ ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದಿದ್ದ ಮೂವರು ಪಿಎಫ್ಐ ಮುಖಂಡರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿ ಪಿಎಫ್ಐ ಕಾರ್ಯಕರ್ತರು ಠಾಣೆಯ ಮುಂದೆ ಜಮಾಯಿಸಿದ್ದು, ರಸ್ತೆಯಲ್ಲೇ ನಮಾಜ್ ನಿರ್ವಹಿಸಿದ ಘಟನೆ ಡಿ.14ರಂದು ನಡೆದಿತ್ತು.
ಠಾಣೆಗೆ ನುಗ್ಗಲು ಯತ್ನಿಸಿದ ಪ್ರತಿಭಟನಾಕಾರರನ್ನು ತಡೆಯಲು ಯತ್ನಿಸಿದ ಸಂದರ್ಭದಲ್ಲಿ ಬಂದೋಬಸ್ತ್ ಗೆ ತೆರಳಿದ ಬಂಟ್ವಾಳ ಎಸ್.ಐ ಪ್ರಸನ್ನ ಅವರ ಮೇಲೆ ಸಂಘಟನೆಯ ಕಾರ್ಯಕರ್ತರು ದಾಳಿ ನಡೆಸಿದ್ದು ಇವರೊಂದಿಗೆ ಪೊಲೀಸ್ ಇನ್ಸ್ ಪೆಕ್ಟರ್ ಉಮೇಶ್, ಎಸ್ .ಐ ವಾಮನ ಕುಟ್ಟಿ, ಹಾಗೂ ಹಲವು ಸಿಬ್ಬಂದಿಗಳಿಗೆ ಗಾಯಗೊಂಡಿದ್ದರು.