ಉಡುಪಿ, ಡಿ16 (DaijiworldNews/MS): "ಮಾನವೀಯ ಮೌಲ್ಯಕ್ಕೆ ಒತ್ತು ಕೊಡದ ಒಬ್ಬ ಕೆಟ್ಟ ಪ್ರಧಾನ ಮಂತ್ರಿ ಕಳೆದ ಏಳು ವರ್ಷಗಳಿಂದ ದೇಶದಲ್ಲಿ ಅಧಿಕಾರದಲ್ಲಿದ್ದಾರೆ" ಎಂದು ದಲಿತ ಮುಖಂಡ ಸುಂದರ್ ಮಾಸ್ತರ್ ಹೇಳಿದ್ದಾರೆ.
ಉಡುಪಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು "ಮಾನವೀಯ ಮೌಲ್ಯ ಕ್ಕಾಗಿ ಧ್ವನಿ ಎತ್ತದ ಪ್ರಧಾನಿ ಸೆಲೆಬ್ರಿಟಿ ಗಳ ಹುಟ್ಟುಹಬ್ಬಕ್ಕೆ ಮತ್ತು ಇತರ ವಿಷಯಗಳಿಗೆ ಟ್ವಿಟ್ ಮಾಡುತ್ತಾರೆ. ಸಂವಿಧಾನದ ವಿರೋಧಿ ಹೇಳಿಕೆ ನೀಡಿದ ತಮ್ಮದೇ ಸಂಪುಟದ ಸಹೋದ್ಯೋಗಿಗಳನ್ನು ಪ್ರಧಾನಿಗಳು ಬೆಂಬಲಿಸುತ್ತಾರೆ. ಅವರಿಗೆ ಸಂವಿಧಾನದ ಮೇಲೆ ನಂಬಿಕೆ ಇಲ್ಲ. ದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ದಲಿತರ ಮೇಲಿನ ದಾಳಿಗಳು ಹೆಚ್ಚಾಗಿವೆ. ಆದರೆ ಇಂತಹ ಯಾವುದೇ ಘಟನೆಗೆ ಪ್ರಧಾನಿಗಳು ಖಂಡನೆ ವ್ಯಕ್ತಪಡಿಸಿಲ್ಲ. ಅಧಿಕಾರ ಸ್ವೀಕರಿಸುವಾಗ ಸಂಸತ್ತು, ಸಂವಿಧಾನಕ್ಕೆ ಅಡ್ಡ ಬೀಳುವ ನಾಟಕ ಮಾಡಿದರು. ಈ ದೇಶಕ್ಕೆ ಮಾನವೀಯ ಮೌಲ್ಯಗಳ ಬಗ್ಗೆ ಗೌರವ ಇರುವ ಸರ್ಕಾರ ಬೇಕಾಗಿದೆ. ತ್ರಿಶೂಲ, ಭರ್ಜಿ, ಕತ್ತಿಗಳನ್ನು ವಿತರಿಸಿ ಭಯದ ವಾತಾವರಣವನ್ನು ಸೃಷ್ಟಿಸುವ ಸರ್ಕಾರ ನಮಗೆ ಅಗತ್ಯ ಇಲ್ಲ. ಮಂಗಳೂರಿನಲ್ಲಿ ಅತಿ ಹೆಚ್ಚು ಕೋಮು ಹಿಂಸೆಗಳು ನಡೆಯುತ್ತಿವೆ. ಇದಕ್ಕೆ ಸಚಿವ, ಶಾಸಕರ ಕುಮ್ಮಕ್ಕು ಇದೆ" ಎಂದರು
"ಭಯದ ವಾತಾವರಣದಲ್ಲಿ ಬದುಕುತ್ತಿದ್ದೇವೆ. ಇತರರು ಭಯಬೀತರಾಗಬೇಕು ಎಂಬ ಕಾರಣಕ್ಕಾಗಿ ಅಲ್ಪಸಂಖ್ಯಾತ ಸಮುದಾಯದ ಮೇಲೆ ದಾಳಿಗಳು ಆಗುತ್ತಿವೆ. ಮುಂದಿನ ದಿನಗಳಲ್ಲಿ ದಲಿತ, ಅಲ್ಪಸಂಖ್ಯಾತ ರು ಒಟ್ಟಾದರೆ ಕೋಮುವಾದಿ ಶಕ್ತಿಗಳಿಗೆ ಉಳಿಗಾಲವಿಲ್ಲ. ಈ ದೇಶದಲ್ಲಿ ಕೇವಲ 2-3 ರಾಜ್ಯಗಳಲ್ಲಿ ಬಿಜೆಪಿ ಗೆ ಬಹುಮತ ಇದೆ. ಉಳಿದೆಡೆಗಳಲ್ಲಿ ಅದು ಬೇರೆಯೇ ಮಾರ್ಗದಿಂದ ಅಧಿಕಾರವನ್ನು ಹಿಡಿದಿದೆ. ಈ ದೇಶದಲ್ಲಿ ಒಂದೇ ಒಂದು ಮತಾಂತರದ ಪ್ರಕರಣ ಕೋರ್ಟ್ ನಲ್ಲಿ ಸಾಬೀತು ಆಗಿಲ್ಲ. ವೋಟ್ ಬ್ಯಾಂಕ್ ಗಾಗಿ ಈ ಕಾಯಿದೆಯನ್ನು ತರುತ್ತಿದ್ದಾರೆ. ಹಿಂದೂ ಧರ್ಮದಲ್ಲಿ ಇರುವ ಕೆಟ್ಟ ಸಂಪ್ರದಾಯಗಳಿಂದಾಗಿ ಜನರು ಮತಾಂತರ ಆಗುತಿದ್ದಾರೆ. ದಲಿತರು ಕೂಡಾ ಬೌದ್ಧ ಧರ್ಮಕ್ಕೆ ಹೋಗುತಿದ್ದಾರೆ. ಗೋವುಗಳನ್ನು ಗೋಶಾಲೆಗೆ ಕಳುಹಿಸುತ್ತಾರೆ. ಆದರೆ ಅವುಗಳನ್ನು ಅಲ್ಲಿಯೇ ಮಾರಾಟ ಮಾಡುತ್ತಾರೆ ಎಂದರು.