ಮಂಗಳೂರು, ಡಿ16 (DaijiworldNews/MS): ಮಂಗಳೂರು ಮಹಾನಗರ ಪಾಲಿಕೆಯ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಈಗಾಗಲೇ ಅನ್ ಲೈನ್ ಮುಖೇನ ಗಣಕೀಕರಿಸಿ ಪಾವತಿಸಲಾಗುತ್ತಿದ್ದು, ಈ ಕುರಿತು ಸಾರ್ವಜನಿಕರಿಂದ ಬಂದ ದೂರಿನಂತೆ ಅವರಿಗೆ ಆಗುವ ತೊಂದರೆಗಳನ್ನು ಪರಿಶೀಲಿಸಲು ಮೇಯರ್ ಪ್ರೇಮಾನಂದ ಶೆಟ್ಟಿಯವರು ಖುದ್ದಾಗಿ ಸ್ವಯಂ ಘೋಷಿತ ಆಸ್ತಿ ತೆರಿಗೆ ನಮೂನೆ ಭರ್ತಿ ಮಾಡುವ ಸ್ಥಳಕ್ಕೆ ಬೇಟಿ ನೀಡಿದರು.
ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಚರ್ಚಿಸಿ ಸೂಕ್ತ ಪರಿಹಾರ ಕ್ರಮ ಕೈಗೊಳ್ಳುವ ಬಗ್ಗೆಸೂಚನೆ ನೀಡಿದರು.
ಈ ಹಿಂದೆ ಕನಾ೯ಟಕ ಬ್ಯಾಂಕ್ ನ ಒಂದು ಶಾಖೆಯಲ್ಲಿ ಮಾತ್ರ ಈ ಆಸ್ತಿ ತೆರಿಗೆ ಪಾವತಿಗೆ ಅವಕಾಶವಿತ್ತು ಆದರೇ ಪ್ರಸ್ತುತ ಕರ್ನಾಟಕ ಮತ್ತು ಕೆನರಾ ಬ್ಯಾಂಕ್ ನ ಎಲ್ಲಾ ಶಾಖೆಗಳಲ್ಲಿ ಆಸ್ತಿ ತೆರಿಗೆಯನ್ನು ಪಾವತಿಸಲು ಅನುಕೂಲ ಮಾಡಿಕೊಡಲಾಗಿದೆ ಮತ್ತು ಸಾವ೯ಜನಿಕೆರಿಗೆ ಸ್ವಯಂ ಘೋಷಿತ ಆಸ್ತಿ ತೆರಿಗೆಯನ್ನು ಭರ್ತಿ ಮಾಡಲು ಎಲ್ಲಿಯಾದರು ಗೊಂದಲವಿದ್ದಲ್ಲಿ ಪಾಲಿಕೆಯ ಕಂದಾಯ ವಿಭಾಗದಿಂದ ಸಹಕರಿಸಲಾಗುವುದೆಂದು ಮೇಯರ್ ರವರು ತಿಳಿಸಿದರು.
ಪ್ರಸ್ತುತ ಸಾವ೯ಜನಿಕರು ಅನುಭವಿಸುವ ಸಮಸ್ಯೆಗಳನ್ನು ಸರಿಪಡಿಸಿ ಮುಂದಿನ ದಿನಗಳಲ್ಲಿ ಯಾವುದೇ ಸಮಸ್ಯೆಗಳಿಲ್ಲದೆ ಓನ್ ಲೈನ್ ಮೂಲಕ ತೆರಿಗೆ ಪಾವತಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಅಲ್ಲಿ ನೆರೆದಿರುವ ಸಾವ೯ಜನಿಕರಿಗೆ ಮನವರಿಕೆ ಮಾಡಿದರು.
ಈ ಸಮಯದಲ್ಲಿ ಸಂಬಂಧಪಟ್ಟ ಕಂದಾಯ ಅಧಿಕಾರಿಗಳಾದ ವಿಜಯ್ ಕುಮಾರ್ ರವರು ಹಾಗೂ ಸಹಾಯಕ ಕಂದಾಯ ಅಧಿಕಾರಿಗಳು ಉಪಸ್ಥಿತರಿದ್ದರು.