ಉಪ್ಪಿನಂಗಡಿ, ಡಿ16 (DaijiworldNews/MS): ಪಶ್ಚಿಮ ವಲಯದ ಇನ್ಸ್ಪೆಕ್ಟರ್ ಜನರಲ್ ಆಫ್ ಪೊಲೀಸ್ (ಐಜಿಪಿ), ದೇವಜ್ಯೋತಿ ರೇ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ), ಋಷಿಕೇಶ್ ಸೋನವಾನೆ, ಹೆಚ್ಚುವರಿ ಎಸ್ಪಿ ಶಿವಕುಮಾರ್ ಗುನಾರೆ ಅವರು ಡಿ.15 ರಂದು ಬುಧವಾರ ಉಪ್ಪಿನಂಗಡಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ಈ ಸಂದರ್ಭ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಎಸ್ಪಿ, ಋಷಿಕೇಶ್ ಸೋನವಾನೆ ," ಮಾರಕಾಸ್ತ್ರಗಳಿಂದ ದಾಳಿ ಪ್ರಕರಣದ ತನಿಖೆ ಚುರುಕುಗೊಂಡಿದೆ. ಪ್ರಕರಣದ ನಿಜವಾದ ಆರೋಪಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳಲಾಗುವುದು" ಎಂದರು.
"ನಿಖರ ಮಾಹಿತಿ ಆಧಾರದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಮೂವರು ಕಾರ್ಯಕರ್ತರನ್ನು ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಕರೆಸಿಕೊಳ್ಳಲಾಗಿತ್ತು.ಆದರೆ ಇದನ್ನು ಆಕ್ಷೇಪಿಸಿದ ಜನರ ಗುಂಪೊಂದು ಉಪ್ಪಿನಂಗಡಿಯ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿ ಪೊಲೀಸ್ ಠಾಣೆಗೆ ನುಗ್ಗಿ ಹಿಂಸಾತ್ಮಕವಾಗಿ ವರ್ತಿಸಿತು. ಹೀಗಾಗಿ ಪೊಲೀಸರು ಜನರ ಮೇಲೆ ಲಾಠಿ ಪ್ರಹಾರ ಮಾಡಬೇಕಾಯಿತು. ಪೊಲೀಸರ ಮೇಲೂ ಹಲ್ಲೆ ನಡೆಸಲಾಗಿದೆ. ಈ ಸಂಬಂಧ ಮೂರು ಪ್ರಕರಣಗಳು ದಾಖಲಾಗಿವೆ. ಆರೋಪಿಗಳನ್ನು ಪತ್ತೆ ಹಚ್ಚುವ ಕಾರ್ಯ ಪ್ರಗತಿಯಲ್ಲಿದೆ,’’ ಎಂದು ವಿವರಿಸಿದರು.
ಯಾವುದೇ ಕಾರಣಕ್ಕೂ ಜನರು ವದಂತಿಗಳಿಗೆ ಬಲಿಯಾಗಬೇಡಿ ಎಂದು ಮನವಿ ಮಾಡಿದ ಅವರು "ಜನರು ಪೊಲೀಸ್ ಇಲಾಖೆಯ ಮೇಲೆ ವಿಶ್ವಾಸವಿಡಬೇಕು, ಅವರಿಗೆ ಯಾವುದೇ ಗೊಂದಲ ಅಥವಾ ಸಂದೇಹವಿದ್ದರೆ, ಅವರು ನೇರವಾಗಿ ಸಂಬಂಧಿಸಿದವರನ್ನು ಸಂಪರ್ಕಿಸಬಹುದು. ಬಲವಂತ ಹಾಗೂ ಬೆದರಿಕೆ ಮೂಲಕ ಇಲಾಖೆಯನ್ನು ಬಗ್ಗಿಸಬಹುದು ಎಂಬ ಭ್ರಮೆ ಯಾರಿಗೂ ಬೇಡ. ನಾವು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಿದ್ದೇವೆ. ಯಾವುದೇ ಅಮಾಯಕರ ವಿರುದ್ಧ ಪ್ರಕರಣ ದಾಖಲಾಗದಂತೆ ನಿಗಾ ಇರಿಸಲಾಗಿದೆ,'' ಎಂದು ಹೇಳಿದರು
ಹಿಂಸಾಚಾರದಿಂದಾಗಿ ಉಪ್ಪಿನಂಗಡಿಯಲ್ಲಿ ಉದ್ವಿಗ್ನತೆ ಉಂಟಾಗಿರುವ ಕಾರಣ ಹೆಚ್ಚುವರಿ ಪೊಲೀಸ್ ಗಸ್ತು ವ್ಯವಸ್ಥೆ ಮಾಡಲಾಗಿದೆ. ರಾಜ್ಯ ಮೀಸಲು ಪೊಲೀಸ್ ಪಡೆಯ ಮೂರು ಪಡೆಯನ್ನು ಕೆಲವು ಆಯಕಟ್ಟಿನ ಸ್ಥಳಗಳಲ್ಲಿ ನಿಯೋಜಿಸಲಾಗಿದೆ ಎಂದು ಅವರು ಹೇಳಿದರು.