ಉಡುಪಿ, ಡಿ.15 (DaijiworldNews/HR): ದೇಶಕ್ಕೋಸ್ಕರ ಬಿಜೆಪಿಯಲ್ಲಿ ಯಾರೂ ಬಲಿದಾನ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಕೇಳುತ್ತಾರೆ. ಅವರ ನಾಲಿಗೆಗೆ ಲಂಗು ಇಲ್ಲ ಲಗಾಮು ಇಲ್ಲ ಸಂಸ್ಕಾರವೂ ಇಲ್ಲ. ಮೂರು ಇಲ್ಲದೆ ಇರುವುದರಿಂದ ಈ ಪ್ರಶ್ನೆಯನ್ನು ಹಾದಿಬೀದಿಯಲ್ಲಿ ಕೇಳುತ್ತಿರುತ್ತಾರೆ" ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ ಎಲ್ ಸಂತೋಷ್ ಅವರು ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಉಡುಪಿಯಲ್ಲಿ ನಡೆದ ಶಕ್ತಿಕೇಂದ್ರಗಳ ಪ್ರಮುಖರ ಸಮಾವೇಶದಲ್ಲಿ ಮಾತನಾಡಿದ ಅವರು, "ದೇಶಕ್ಕೋಸ್ಕರ ಬಿಜೆಪಿಯಲ್ಲಿ ಯಾರೂ ಬಲಿದಾನ ಮಾಡಿದ್ದಾರೆ ಎಂದು ಸಿದ್ದರಾಮಯ್ಯ ಕೇಳುತ್ತಾರೆ. ಈ ಸಾಲಿನಲ್ಲಿ ಬರುವ ಮೊದಲನೆ ಹೆಸರು ಶಾಮ್ ಪ್ರಸಾದ್ ಮುಖರ್ಜಿ ಅವರದ್ದು, ಶಾಂತವಾಗಿ ಮನೆಯಲ್ಲಿ ಕುಳಿತುಕೊಂಡು ಶಾಮಪ್ರಸಾದ ಮುಖರ್ಜಿ ಯಾರು ಎಂದು ಓದಲಿ. ಆತ್ಮಸಾಕ್ಷಿಯನ್ನು ಭಗವಂತ ಎಲ್ಲರಿಗೂ ಕೊಟ್ಟಿದ್ದಾನೆ. ಆದರೆ ಆತ್ಮಸಾಕ್ಷಿಯನ್ನು ಕೆಲವರು ಕೊಂದು ಹಾಕುತ್ತಾರೆ, ಅದರಲ್ಲಿ ನಮ್ಮ ವಿರೋಧ ಪಕ್ಷದ ನಾಯಕರೂ ಕೆಲವರಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಸಿದ್ದರಾಮಯ್ಯಗೆ ಉತ್ತರ ಕೊಟ್ಟರೆ ಕೊಚ್ಚೆಗೆ ಕಲ್ಲು ಹೊಡೆದಂತೆ. ಸಿದ್ಧರಾಮಯ್ಯ ಸಂಘವನ್ನು ಆರೆಸ್ಸೆಸ್ಸನ್ನು ಪುಂಖಾನುಪುಂಖವಾಗಿ ಬೈಯುತ್ತ ಓಡಾಡಿದರು. ಮೇಲ್ಸೇತುವೆಗೆ ಸಾವರ್ಕರ್ ಹೆಸರಿಡುವ ಸಂದರ್ಭ ಬದುಕಿಗೆ ಬೆಂಕಿ ಬಿದ್ದಂತೆ ಆಡಿದರು. ಸಾವರ್ಕರ್ ಜೀವನವನ್ನು ಪ್ರತಿ ಯುವಕರಿಗೆ ತಲುಪಿಸಬೇಕು. ಸಿದ್ದರಾಮಯ್ಯ ಈಗಾಗಲೇ ಕಸದಬುಟ್ಟಿಯಲ್ಲಿ ಇದ್ದಾರೆ. ಮುಂದೆ ಅವರು ದೊಡ್ಡ ಕಸದಬುಟ್ಟಿಗೆ ಹೋಗುತ್ತಾರೆ ಹಾಗಾಗಿ ಅವರ ಎಲ್ಲ ಮಾತಿಗೆ ಉತ್ತರ ಕೊಡಬೇಕಾಗಿಲ್ಲ" ಎಂದಿದ್ದಾರೆ.
ವೋಟ್ ಮಾರಾಟ ಮಾಡಬಾರದು ಅದೊಂದು ನಡವಳಿಕೆ. ನಾನು ಮಾರಾಟಕ್ಕಿಲ್ಲ ಎನ್ನುವುದು ರಾಜಕಾರಣಿಯೊಬ್ಬನಿಗೆ ಇರಬೇಕಾದ ಅತಿ ದೊಡ್ಡ ಗುಣ. ದ.ಕ ಮತ್ತು ಉಡುಪಿ ಶೇ.99 ನಾವು ಮಾರಾಟಕ್ಕಿಲ್ಲ ಅಂತ ತೋರಿಸಿಕೊಟ್ಟಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲಿ ಇದು ಸಾಬೀತಾಗಿದೆ" ಎಂದರು.