ವಿಟ್ಲ, ಡಿ.15 (DaijiworldNews/HR): ಸರ್ಕಾರಿ ಪ್ರೌಢಶಾಲೆಯ ಶಿಕ್ಷಕಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಂಟ್ವಾಳ ತಾಲೂಕಿನ ವಿಟ್ಲದಲ್ಲಿ ನಡೆದಿದೆ.
ಮೃತಪಟ್ಟ ಶಿಕ್ಷಕಿಯನ್ನು ಬಂಟ್ವಾಳ ತಾಲೂಕಿನ ವಿಟ್ಲ ಕಸಬ ಗ್ರಾಮದ ಸಿಪಿಸಿಆರ್ಐ ಬಳಿಯ ನಿವಾಸಿ ಪ್ರಿಯಾ ಕುಮಾರಿ (38) ಎಂದು ಗುರುತಿಸಲಾಗಿದೆ.
ಸುಮಾರು 12 ವರ್ಷಗಳಿಂದ ಪುತ್ತೂರಿನ ಹಾರಾಡಿ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದ ಅವರು ವಾರದ ಹಿಂದೆಯಷ್ಟೆ ಪಾಪೆಮಜಲು ಸರಕಾರಿ ಪ್ರೌಢ ಶಾಲೆಗೆ ವರ್ಗಾವಣೆಗೊಂಡಿದ್ದರು.
ಕೆಲಸದ ಒತ್ತಡದಿಂದ ಮಾನಸಿಕ ಖಿನ್ನತೆಗೆ ಒಳಗಾಗುತ್ತಿದ್ದು ಮನೆಯಲ್ಲಿರುವಾಗ ಆಗಾಗ ನನಗೆ ಕರ್ತವ್ಯದ ಒತ್ತಡ ಜಾಸ್ತಿಯಾಗಿದೆ ಎಂದು ಹೇಳುತ್ತಿದ್ದರು. ಡಿಸೆಂಬರ್ 13ರಂದು ಬೆಳಗ್ಗೆ ಅಳಿಯ ರಮೇಶ ಕರೆ ಮಾಡಿ ಪ್ರಿಯಾ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಮಾಹಿತಿ ನೀಡಿದ್ದು, ನಾನು ಅವರ ಮನೆಗೆ ತೆರಳಿ ನೋಡಿದಾಗ ಮಗಳು ಮನೆಯ ಒಳಗಿರುವ ಕೋಣೆಯೊಂದರ ಕಿಟಕಿಯ ಮೇಲ್ಚಾವಣಿಗೆ ಚೂಡಿದಾರದ ಶಾಲಿನಿಂದ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ತಕ್ಷಣ ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿನ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಕೆಎಂಸಿ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದು, ಅಲ್ಲಿಂದ ತಕ್ಷಣ ಕೆಎಂಸಿ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಸಂಜೆ ಮೃತಪಟ್ಟಿದ್ದಾರೆ ಎಂದು ಮೃತರ ತಂದೆ ಗಣಪ ಪೂಜಾರಿಯವರು ವಿಟ್ಲ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಮೃತರು ನಿವೃತ್ತ ಯೋಧ ರಮೇಶ್ ಬಿ.ಕೆ, ಪುತ್ರಿಯರಾದ ವಂಶಿ, ದೃಷ್ಟಿ ಮತ್ತು ತಂದೆ ಗಣಪ ಪೂಜಾರಿ ಹಾಗೂ ತಾಯಿ ಜಯಂತಿ ಅವರನ್ನು ಅಗಲಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821