ಉಡುಪಿ, ಡಿ.15 (DaijiworldNews/HR): ಸಂತೆಕಟ್ಟೆ ಬಳಿಯ ಶಮಾ ಹೋಂಡಾ ಶೋ ರೂಮ್ ಎದುರುಗಡೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಲಾರಿಯೊಂದು ಸೂಚನಾ ಫಲಕದ ಕಂಬಕ್ಕೆ ಢಿಕ್ಕಿ ಹೊಡೆದು ಚಾಲಕ ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟವರನ್ನು ಭಟ್ಕಳ ಹೆಬ್ಳೆ ಮದೀನಾ ಕಾಲೋನಿಯ ನಿವಾಸಿ ಮಹಮ್ಮದ್ ತೌಫಿಕ್(29) ಎಂದು ಗುರುತಿಸಲಾಗಿದ್ದು, ಲಾರಿಯಲ್ಲಿದ್ದ ಮತ್ತೊಬ್ಬ ಚಾಲಕ ಭಟ್ಕಳದ ನಜುರುಲ್ಲಾ(32) ಗಾಯಗೊಂಡಿದ್ದಾರೆ.
ಲಾರಿಯು ಕೇರಳದ ಚಾವಕಾಡದಿಂದ ಭಟ್ಕಳಕ್ಕೆ ಬರುತ್ತಿದ್ದಾಗ ಸಂತೆಕಟ್ಟೆ ಬಳಿ ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೆ ಹತ್ತಿ, ಕುಂದಾಪುರ, ಕಾರವಾರ, ಪಣಜಿ ಸೂಚನಾ ಫಲಕದ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಲಾರಿಯ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.
ಇನ್ನು ಈ ಅವಘಡದಿಂದ ಗಂಭೀರ ಗಾಯಗೊಂಡ ಚಾಲಕ ಮಹಮ್ಮದ್ ತೌಫಿಕ್ ಉಡುಪಿ ಜಿಲ್ಲಾ ಸರಕಾರಿ ಆಸ್ಪತ್ರೆ, ನಂತರ ಹೆಚ್ಚಿನ ಚಿಕೆತ್ಸೆಗೆ ಮಣಿಪಾಲ ಆಸ್ಪತ್ರೆಗೆ ಕರೆದು ಕೊಂಡು ಹೋಗುವಾಗ ಮೃತಪಟ್ಟಿದ್ದಾರೆ.
ನಜರುಲ್ಲಾ ಅವರ ಎಡಗೈ ಮತ್ತು ಎರಡೂ ಕಾಲುಗಳಿಗೆ ಗಾಯಗಳಾಗಿದ್ದು, ಅಪಘಾತದಿಂದ ಸೂಚನಾ ಫಲಕದ ಕಂಬ ಜಖಂಗೊಂಡಿದೆ.
ಈ ಕುರಿತು ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.