ಮಂಗಳೂರು, ಡಿ. 14 (DaijiworldNews/HR): ನೀರುಮಾರ್ಗ ಸಮೀಪದ ಪಡು ಪೋಸ್ಟ್ ಆಫೀಸ್ ಬಳಿ ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದ ಮಹಮ್ಮದ್ ರಿಯಾಜ್ ಕೊಲೆಗೆ ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿ ಐದು ಮಂದಿಯನ್ನು ಬಂಧಿಸಲಾಗಿದ್ದು, ರಿಯಾಜ್ ಮೇಲೆಯೂ 5 ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ತಿಳಿಸಿದ್ದಾರೆ.
ಮಹಮ್ಮದ್ ರಿಯಾಜ್
ಈ ಕುರಿತು ಮಾಹಿತಿ ನೀಡಿರುವ ಅವರು, ರಿಯಾಜ್ ಮೇಲೆ ಈ ಹಿಂದೆ ಕಮಿಷನರೇಟ್ ವ್ಯಾಪ್ತಿಯ 5 ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪೈಕಿ ಮೂರು ವೇಶ್ಯಾವಾಟಿಕೆ ಪ್ರಕರಣಗಳು ದಾಖಲಾಗಿದೆ. ಈತ ನಡೆಸುತ್ತಿದ್ದ ವೇಶ್ಯಾವಾಟಿಕೆ ಚಟುವಟಿಕೆಗಳಿಗೆ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದು, ಇದೇ ವಿಚಾರಕ್ಕೆ ಸ್ಥಳೀಯ ಯುವಕರು, ರಿಯಾಜ್ ಮಧ್ಯೆ ಸಂಘರ್ಷ ನಡೆದಿದೆ" ಎಂದಿದ್ದಾರೆ.
ಇನ್ನು ಹಲ್ಲೆಗೊಳಗಾದ ಆರೋಪಿ ರಿಯಾಜ್ ಮಂಡ್ಯ, ಹಾಸನ, ಮಂಗಳೂರು ಇತರೆಡೆಗಳಿಂದ ಹೆಣ್ಣುಮಕ್ಕಳನ್ನು ಸಪ್ಲೈ ಮಾಡುತ್ತಿದ್ದು, ಈ ಆರೋಪದಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಬಂಧಿತರು ಹೇಳಿರುವುದಾಗಿ ತಿಳಿಸಿದ್ದಾರೆ.
ಸಂತ್ರಸ್ತನ ಮೇಲೆ ಹಲವು ಪ್ರಕರಣಗಳು ಬೆಳಕಿಗೆ ಬಂದಿದ್ದು, ಮಧ್ಯವರ್ತಿ, ಮನೆ ಬಾಡಿಗೆ, ಲಾಡ್ಜ್ ಬಾಡಿಗೆಯ ಸಮಗ್ರ ತನಿಖೆ ನಡೆಸಲಾಗುತ್ತದೆ. ಈ ಬಗ್ಗೆ ಕದ್ರಿ ಠಾಣೆಯಲ್ಲಿ ದಾಖಲಾದ ಪ್ರಕರಣದ ಸಮಗ್ರ ತನಿಖೆ ಆಗಲಿದೆ ಎಂದು ಮಾಹಿತಿ ನೀಡಿದ್ದಾರೆ.
ಇನ್ನು ರಿಯಾಜ್ ವೇಶ್ಯಾವಾಟಿಕೆ ದಂಧೆಯಲ್ಲೇ ತೊಡಗಿದ್ದು, ಈ ಕುರಿತಾಗಿ ಆಡಿಯೋವೊಂದನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.