ಪುತ್ತೂರು,ಡಿ. 14 (DaijiworldNews/HR): 1865ರಲ್ಲಿ ಬ್ರಿಟಿಷರು ಆರಂಭಿಸಿದ್ದ ನೆಲ್ಲಿಕಟ್ಟೆಯ ಸರಕಾರಿ ಶಾಲಾ ಕಟ್ಟಡ ಅಪಾಯಕಾರಿ ಎನಿಸಿ ನೆಲ ಸಮ ಮಾಡಿರುವ ಘಟನೆ ಸೋಮವಾರ ನಡೆದಿದೆ.
1865 ರಲ್ಲಿ ಪುತ್ತೂರು ಮತ್ತು ನೆರೆಯ ಕೆಲವು ತಾಲ್ಲೂಕುಗಳಲ್ಲಿ ಶಾಲೆಗಳಿಲ್ಲದಿದ್ದಾಗ ಬ್ರಿಟಿಷ್ ಸರ್ಕಾರವು ಈ ಪ್ರದೇಶದಲ್ಲಿ ಮೊದಲ ಶಾಲೆಯನ್ನು ಪುತ್ತೂರಿನ ಹೃದಯಭಾಗದಲ್ಲಿ ಪ್ರಾರಂಭಿಸಿತು. ಇದಕ್ಕಾಗಿ ಭವ್ಯವಾದ ಕಟ್ಟಡವನ್ನು ನಿರ್ಮಿಸಲಾಗಿದೆ. ಶಾಲೆಗೆ 3.25 ಎಕರೆ ಜಮೀನಿದ್ದು, ಜಿಲ್ಲೆಯ ಕೆಲವೇ ಕೆಲವು ಪ್ರಾಚೀನ ಪಾರಂಪರಿಕ ಕಟ್ಟಡಗಳಲ್ಲಿ ಇದು ಕೂಡ ಒಂದಾಗಿದೆ. ಅಂತ್ಯಗೊಂಡಿತು.
ಈ ಶಾಲೆಯಲ್ಲಿ 83 ವರ್ಷಗಳ ಹಿಂದೆ ಜ್ಞಾನಪೀಠ ಪುರಸ್ಕೃತ ಸಾಹಿತಿ ಡಾ| ಕೆ.ಶಿವರಾಮ ಕಾರಂತರು ನಾಟ್ಯ ನಿರ್ದೇಶನ ಮಾಡುತ್ತಿದ್ದರು. ರಂಗಭೂಮಿ ಚಟುವಟಿಕೆಗಳ ಕೇಂದ್ರವಾಗಿ ಬೆಳೆಸಿದ್ದರು. ಜಿಲ್ಲೆಯಲ್ಲೇ ಅತ್ಯಂತ ಪ್ರಾಚೀನ ನಾಡಹಬ್ಬ ದಸರಾ ಆಚರಣೆಯನ್ನು ಇದೇ ಶಾಲೆಯಲ್ಲಿ ಆರಂಭಿಸಿದ್ದರು.
ಇನ್ನು ಡಿ.11 ರಂದು ಸ್ಥಳೀಯ ಶಾಲಾ ಮಕ್ಕಳು ಆಡವಾಡುತ್ತಿದ್ದ ವೇಳೆ ಕಟ್ಟಡದ ಒಂದು ಭಾಗ ಕುಸಿದು ಬಿದ್ದಿದ್ದು, ಮಕ್ಕಳ ಓಡಾಟದ ವೇಳೆ ಅಪಾಯ ಸಂಭವಿಸಬಾರದು ಎಂಬ ಕಾರಣ ನೀಡಿ ಸ್ಥಳೀಯ ಶಾಲಾ ಎಸ್ಡಿಎಂಸಿ ನೇತೃತ್ವದಲ್ಲಿ ಜೆಸಿಬಿ ಮೂಲಕ ಡಿ. 12ರ ರಾತ್ರಿ ಕಟ್ಟಡವನ್ನು ನೆಲಸಮ ಮಾಡಲಾಗಿದೆ.
ನೆಲ್ಲಿಕಟ್ಟೆ ಪ್ರಾಥಮಿಕ ಶಾಲಾ ಎಸ್.ಡಿ.ಎಂ.ಸಿ. ಮೂಲಕ ಶಾಲೆಯ ಕಟ್ಟಡವನ್ನು ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಅನೇಕ ಬಾರಿ ಶಾಸಕರಿಗೆ, ಸಂಬಂಧಿಸಿದ ಇಲಾಖೆಗೆ ಮನವಿ ಮಾಡಲಾಗಿತ್ತು. ಯಾವುದೇ ಅನುದಾನ ಬಾರದ ಕಾರಣ ದುರಸ್ತಿ ಆಗಿರಲಿಲ್ಲ. ಈ ನಡುವೆ ಶಾಲೆಯ ಮಕ್ಕಳು ಮತ್ತು ಪರಿಸರದ ಮಕ್ಕಳು ಅಲ್ಲಿ ಆಟವಾಡುತ್ತಿದ್ದ ವೇಳೆ ಕಟ್ಟಡದ ಕೆಲವು ಭಾಗ ಧರೆಗೆ ಉರುಳಿದ್ದು, ಈ ನಿಟ್ಟಿನಲ್ಲಿ ಶಾಲಾ ಎಸ್ಡಿಎಂಸಿ ಮತ್ತು ಸ್ಥಳೀಯರು ಸೇರಿ ಕಟ್ಟಡ ನಿರ್ವಹಣೆ ಮಾಡಲು ಶಾಸಕರ ಅನುಮತಿ ಪಡೆದು ಹೆಂಚು ತೆರವು ಕಾರ್ಯ ನಡೆಸಿದ್ದಾರೆ.
ಇನ್ನು ಈ ವೇಳೆ ಕಟ್ಟಡದ ಒಂದು ಭಾಗ ಪೂರ್ಣ ಕುಸಿದು ಬಿದ್ದಿದ್ದು, ಆ ಸಂದರ್ಭ ಮುಂದೆ ಕಟ್ಟಡದ ಉಳಿದ ಭಾಗವು ಬೀಳುವ ಹಂತದಲ್ಲಿದೆ ಎಂದು ತುರ್ತಾಗಿ ಎಸ್ಡಿಎಂಸಿ ಮತ್ತು ಸ್ಥಳೀಯರ ಜತೆ ಸಭೆ ನಡೆಸಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಕಟ್ಟಡ ತೆರವು ಮಾಡುವ ನಿರ್ಣಯ ಕೈಗೊಂಡು ಕಟ್ಟಡ ತೆರವುಗೊಳಿಸಿದ್ದೇವೆ ಎಂದು ಎಸ್ಡಿಎಂಸಿ ಅಧ್ಯಕ್ಷ ಪಂಚಾಕ್ಷರಿ ತಿಳಿಸಿದ್ದಾರೆ.