ಉಡುಪಿ, ಡಿ 13 (DaijiworldNews/MS): ಮತಾಂತರ ನಿಷೇಧ ಕಾಯಿದೆ ಜಾರಿಯನ್ನು ತೀವ್ರವಾಗಿ ಖಂಡಿಸಿರುವ ಭಾರತೀಯ ಕ್ರೈಸ್ತ ಒಕ್ಕೂಟ, " ಮತಾಂತರ ನಿಷೇಧ ಕಾಯಿದೆಯಲ್ಲಿ ಸರಕಾರದ ಮಟ್ಟದಲ್ಲಿ ಯಾವುದೇ ದಾಖಲೆ ಇಲ್ಲದೆ ಒಂದು ಸಮಾಜವನ್ನು ಗುರಿಯಾಗಿಸಿಕೊಂಡು ಕಾಯಿದೆಯನ್ನು ಮಾಡಲು ಹೊರಟಿದ್ದು, ತರಾತುರಿಯಲ್ಲಿ ಸರಕಾರ ಮತಾಂತರ ನಿಷೇಧ ಕಾಯಿದೆಯನ್ನು ಜಾರಿಗೆ ತರುವುದು ಸರಿಯಲ್ಲ. ಹೀಗಾಗಿ ರಾಜ್ಯ ಸರ್ಕಾರದ ವಿರುದ್ದ ಡಿಸೆಂಬರ್ 17 ರಂದು ಬೆಳಗಾವಿಯಲ್ಲಿ ಒಕ್ಕೂಟದ ವತಿಯಿಂದ ಒಂದು ದಿನದ ಸಾಂಕೇತಿಕ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಿದೆ" ಎಂದು ಹೇಳಿದೆ.
ಈ ಬಗ್ಗೆಸೋಮವಾರ ಪತ್ರಿಕಾಗೋಷ್ಟಿ ನಡೆಸಿ ಮಾತನಾಡಿದ ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯ ಅಧ್ಯಕ್ಷ ಪ್ರಶಾಂತ್ ಜತ್ತನ್ನ, ಮತಾಂತರ ನಿಷೇಧ ಬಗ್ಗೆ ಸಂವಿಧಾನದಲ್ಲಿ ಸಾಕಷ್ಟು ಮಾಹಿತಿ ಇದ್ದು ಇದಲ್ಲದೆ ಕಾನೂನು, ಕೋರ್ಟ್ ಇದೆ ಅದರ ಪ್ರಕಾರ ಕ್ರಮ ಕೈಗೊಳ್ಳಿ, ಅದು ಬಿಟ್ಟು ಶಾಸಕ ಗೂಳಿಹಟ್ಟಿ ಶೇಖರ ಅವರ ಹೇಳಿಕೆಯ ನಂತರ ಮತಾಂತರ ನಿಷೇಧ ಕಾಯಿದೆ ಜಾರಿಗೊಳಿಸಲು ಹೊರಟಿರುವುದು ಸರಿಯಲ್ಲ ಎಂದು ಹೇಳಿದರು.
ಇಂತಹ ಕಟ್ಟುನಿಟ್ಟಿನ ಕಾಯ್ದೆಯಿಂದ ಜನಸಾಮಾನ್ಯರ ಮೇಲೆ ಪರಿಣಾಮ ಏನಾಗಬಹುದು ಎಂದು ಸರ್ಕಾರ ಊಹಿಸಬೇಕು. ಕರ್ನಾಟಕದಲ್ಲಿ ಈವರೆಗೆ ಮತಾಂತರದ ಒಂದೇ ಒಂದು ಪ್ರಕರಣ ಕೂಡಾ ಪ್ರೂವ್ ಆಗಿಲ್ಲ.ಕೆಲವು ಸಂಘಟನೆಗಳು ಮಾತ್ರ ಈ ಕಾನೂನನ್ನು ಬೆಂಬಲಿಸುತ್ತಾರೆ. ಈ ಕಾನೂನು ಮೂಲಕ ಕೇವಲ ಒಂದು ಧರ್ಮದವರನ್ನು ಟಾರ್ಗೆಟ್ ಮಾಡಲಾಗಿದೆ.ಪೋಲಿಸ್ ಇಲಾಖೆ ಬಳಿ ಬಲವಂತದ ಮತಾಂತರ ಪ್ರೂವ್ ಆದ ಒಂದೇ ಒಂದು ಪ್ರಕರಣ ಇಲ್ಲ ಎಂದು ಹೇಳಿದರು.
ಸಂವಿಧಾನವನ್ನು ಪ್ರೀತಿಸುವ ಜನರು ಈ ದೇಶದಲ್ಲಿ ಇದ್ದಾರೆ. ಅವರು ಯಾರು ಕೂಡಾ ಮತಾಂತರ ನಿಷೇಧ ಕಾಯಿದೆಯನ್ನು ಬೆಂಬಲಿಸುವುದಿಲ್ಲ. ಇವತ್ತು ಆಗುತ್ತಿರುವುದು ಮತಾಂತರ ಅಲ್ಲ ಅದೊಂದು ಧಾರ್ಮಿಕ ನಂಬಿಕೆಯ ಬದಲಾವಣೆ ಅಷ್ಟೇ. ಬಲವಂತದ ಮತಾಂತರ ನಡೆದಿರುವುದು ತಿಳಿದುಬಂದರೆ ನಾವೇ ಇದರ ವಿರುದ್ದ ದೂರು ನೀಡುತ್ತೆವೆ.ಒಂದು ವೇಳೆ ಕಾನೂನು ಜಾರಿಗೆ ಬಂದರೆ ನಮ್ಮ ಧಾರ್ಮಿಕ ಸ್ವಾತಂತ್ರ್ಯ ಕಸಿದಂತಾಗುತ್ತದೆ. ಈ ಕಾನೂನಿನ ದುರುಪಯೋಗ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದರು.
ಈ ವೇಳೆ ಇಫ್ಕಾ ಜಿಲ್ಲಾಧ್ಯಕ್ಷ ಡಾ.ನೇರಿ ಕರ್ನೆಲಿಯೋ, ಕಾರ್ಯದರ್ಶಿ ರಿಚ್ಚಾರ್ಡ್ ಡಯಾಸ್, ಕಾನೂನು ಸಲಹೆಗಾರ ನೊಯೆಲ್ ಪ್ರಶಾಂತ್ ಕರ್ಕಡ, ಭಾರತೀಯ ಕ್ರೈಸ್ತ ಒಕ್ಕೂಟದ ರಾಜ್ಯ ಸಂಚಾಲಕ ಗ್ಲ್ಯಾಡ್ಸನ್ ಕರ್ಕಡ ಉಪಸ್ಥಿತರಿದ್ದರು.