ಶಿರೂರು, ಡಿ 13 (DaijiworldNews/MS): ಶಿರೂರು ಟೋಲ್ ಗೇಟ್ನಲ್ಲಿ ಡಿ.13 ರ ಸೋಮವಾರ ನಸುಕಿನ ವೇಳೆ 2 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಟೋಲ್ ಸಿಬ್ಬಂದಿ ರಾಘವೇಂದ್ರ ಮೇಸ್ತ (44)ಗಂಭೀರ ಗಾಯಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಮೃತಪಟ್ಟ ಘಟನೆ ನಡೆದಿದೆ.
ರಾತ್ರಿ 2 ಗಂಟೆ ವೇಳೆ ವೇಗವಾಗಿ ಬಂದ ಜಿಎ 10 ಎ 3398 ಕಾರು ಟೋಲ್ ಗೇಟ್ ಮುಂಬಾಗದ ಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕರ್ತವ್ಯದಲ್ಲಿದ್ದ ರಾಘವೇಂದ್ರ ಮೇಸ್ತ ಗಂಭೀರ ಗಾಯಗೊಂಡು ಮೃತ ಪಟ್ಟಿದ್ದು ಕಾರಿನಲ್ಲಿರುವವರು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ:
ಈ ಘಟನೆಗೆ ಟೋಲ್ ಗೇಟ್ ನಿರ್ವಹಣೆ ಮಾಡುತ್ತಿರುವವರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಬೆಳಿಗ್ಗೆಯಿಂದ ಪ್ರತಿಭಟನೆ ಆರಂಭವಾಗಿದೆ. ಟೋಲ್ ಸಿಬ್ಬಂದಿ ಮೃತಪಟ್ಟ ನಂತರವೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ, ಮೃತ ರಾಘವೇಂದ್ರ ಮೆಸ್ತನ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ, ಮೃತನು ಕೆಲಸ ಮಾಡುತ್ತಿದ್ದ ಟೋಲ್ ಗೇಟ್ ನಿರ್ವಹಣೆ ಮಾಡುತ್ತಿದ್ದ ಕಂಪನಿಯಾದ ಪೂಜಾ ಅಶೋಷಿಯೇಷನ್ ನಲ್ಲಿ ಆತನ ಹೆಂಡತಿಗೆ ಕೆಲಸ ಕೊಡಿಸಬೇಕು, ವಾಹನದ ವಿಮೆ ಹಾಗೂ ಇತರೆ ವಿಮೆಗಳನ್ನು ಕಂಪನಿಯೇ ಕೊಡಿಸುವ ಜವಾಬ್ದಾರಿ ತೆಗೆದುಕೊಳ್ಳಬೇಕು, ಈ ಬಗ್ಗೆ ಲಿಖಿತವಾಗಿ ಬರೆದುಕೊಡಬೇಕು ಎಂದು ಒತ್ತಾಯಿಸಿ ಶ್ರೀ ರಾಮ ಮೇಸ್ತ( ಮುಖಂಡರು ಮೇಸ್ತ ಸಂಘಟನೆ)ರವರ ನೇತೃತ್ವದಲ್ಲಿ ಮೇಸ್ತ ಜಾತಿ ಹಾಗೂ ಸ್ಥಳೀಯರ ಸಹಿತ ಸುಮಾರು 125 ಜನರು ಶಿರೂರು ಟೋಲ್ ಬಳಿ ಪ್ರತಿಭಟನೆ ನಡೆಸಿದರು.