ಉಡುಪಿ, ಡಿ.12 (DaijiworldNews/HR): "ಗೋಮಾತೆಯ ರಕ್ಷಣೆಗೆ ನಮ್ಮ ಸರ್ಕಾರ ಬದ್ಧವಾಗಿದ್ದು, ಯುಪಿ ಮುಖ್ಯಮಂತ್ರಿ ಯೋಗಿ ಅವರ ಜೊತೆ ಚರ್ಚೆ ಮಾಡಿ ಗೋ ನಿಷೇಧ ಕಾಯ್ದೆ ಜಾರಿ ಮಾಡಿದ್ದೇವೆ. ಸಾಕಷ್ಟು ಅಧ್ಯಯನ ಮಾಡಿಯೇ ಕಾಯ್ದೆ ಜಾರಿ ಮಾಡಿದ್ದೇವೆ. ಆದರೆ ಕೆಲವರು ನ್ಯಾಯಾಲಯದಲ್ಲಿ ಪಿಐಎಲ್ ಹಾಕಿದ್ದಾರೆ. ನ್ಯಾಯಾಲಯದಲ್ಲಿ ತೀರ್ಪು ಶೇಕಡ 100 ನಮ್ಮ ಪರ ಬರುತ್ತೆ. ಗೋಹತ್ಯಾ ನಿಷೇಧ ಕಾಯ್ದೆ ಸಂಪೂರ್ಣ ಜಾರಿಯಾಗುತ್ತದೆ" ಎಂದು ಪಶುಸಂಗೋಪನಾ ಸಚಿವ ಪ್ರಭು ಚೌಹಾಣ್ ಹೇಳಿದ್ದಾರೆ.
ಕೃಷ್ಣಮಠದಲ್ಲಿ ಗೋಪಾಲಕರ ಸಮ್ಮೇಳನ ಉದ್ಘಾಟಿಸಿ ಬಳಿಕ ಮಾತನಾಡಿದ ಅವರು, "ಹೊಸ ಗೋ ನಿಷೇಧ ಕಾಯ್ದೆ ಬಂದ ನಂತರ 10000 ಗೋವು ರಕ್ಷಿಸಲಾಗಿದ್ದು, ಆರುನೂರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದೆ. ಈ ಹಿಂದೆ ಕೇವಲ ಒಂದು ಸಾವಿರ ರೂಪಾಯಿ ದಂಡ ಇದ್ದು, ಭವಿಷ್ಯದಲ್ಲಿ ದಂಡದ ಪ್ರಮಾಣ 50 ಸಾವಿರದಿಂದ 10 ಲಕ್ಷ ರೂಪಾಯಿ ಆಗಲಿದೆ" ಎಂದರು.
ಇನ್ನು "ಪೊಲೀಸ್ ಇಲಾಖೆ ಮತ್ತು ಗೃಹ ಸಚಿವರು ಉತ್ತಮ ಸಹಕಾರ ನೀಡುತ್ತಿದ್ದಾರೆ. ತೀರ್ಪು ನಮ್ಮ ಪರವಾಗಿ ಬಂದನಂತರ ಗೋಹತ್ಯೆ ಹೇಗೆ ಆಗುತ್ತೆ ನೋಡೋಣ. ದಂಡದ ಪ್ರಮಾಣ ಹೆಚ್ಚಾದರೆ ಯಾರು ಗೋಹತ್ಯೆ ಮಾಡುತ್ತಾರೆ. ಏಳು ವರ್ಷಗಳ ಜೈಲುವಾಸ ಕ್ಕೂ ಅವಕಾಶವಿದೆ "ಎಂದಿದ್ದಾರೆ.
"ಪ್ರತಿ ತಾಲೂಕಿಗೆ ಒಂದು ಸುಸಜ್ಜಿತ ಆಂಬುಲೆನ್ಸ್ ನೀಡುತ್ತೇವೆ. ಪ್ರಾಣಿ ಸಹಾಯವಾಣಿ ಕೇಂದ್ರ ಆರಂಭಿಸಿದ್ದೇವೆ. ಕಳೆದ ಮೂರು ತಿಂಗಳಲ್ಲಿ 30000 ದೂರು ಬಂದಿದೆ. ಪ್ರತಿ ಜಿಲ್ಲೆಯಲ್ಲೂ ಗೋಶಾಲೆ ಆರಂಭಿಸುತ್ತೇವೆ. 50ರಿಂದ 100 ಎಕರೆ ಪ್ರದೇಶದಲ್ಲಿ ಗೋಶಾಲೆ ನಿರ್ಮಾಣವಾಗಲಿದ್ದು, ಬೆಳಗಾವಿ ಅಧಿವೇಶನ ಮುಗಿದ ನಂತರ 25 ಜಿಲ್ಲೆಗಳಲ್ಲಿ ಗೋಶಾಲೆ ಆರಂಭವಾಗಲಿದೆ" ಎಂದು ಹೇಳಿದ್ದಾರೆ.