ಮಂಗಳೂರು, ಡಿ.12 (DaijiworldNews/PY): ನಗರದ ಹೊರವಲಯದ ಬೊಂದೇಲ್ನ ಕೃಷ್ಣನಗರದಲ್ಲಿ ಶನಿವಾರ ತಡೆಗೋಡೆ ಕುಸಿದು ಬಿದ್ದು ಗಾಯಗೊಂಡಿದ್ದ ಮಹಿಳೆ ಮೃತಪಟ್ಟಿದ್ದಾರೆ.
ಮೃತ ಮಹಿಳೆಯನ್ನು ಆಂಧ್ರಪ್ರದೇಶ ಮೂಲದ ತಿಮ್ಮಕ್ಕ (42) ಎಂದು ಗುರುತಿಸಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯ ಜಲಸಿರಿ ಯೋಜನೆಯಡಿ ಪೈಪ್ಲೈನ್ ಹಾಕಲು ಗುಂಡಿ ಅಗೆಯುವ ಕಾಮಗಾರಿ ನಡೆಯುತ್ತಿದ್ದ ಸಂದರ್ಭ ತಡೆಗೋಡೆ ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಬಿದ್ದಿದೆ. ಮಣ್ಣಿನಡಿಯಲ್ಲಿ ಮಹಿಳೆ ಸಿಲುಕಿದ್ದು, ನಂತರ ಅವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅವರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮಹಾನಗರ ಪಾಲಿಕೆಯ ಕಾಮಗಾರಿ ನಿರ್ವಹಿಸುತ್ತಿದ್ದ ಗುತ್ತಿಗೆದಾರನ ಮೇಲೆ ಕಾವೂರು ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.