ಉಳ್ಳಾಲ, ಡಿ.11 (DaijiworldNews/HR): ಜಿಲ್ಲಾಡಳಿತದ ಮನವಿಯ ಮೇರೆಗೆ ಇದೇ 23ರಿಂದ ಆರಂಭಗೊಂಡು ಜನವರಿ 16ರವರೆಗೆ ನಡೆಯಬೇಕಿದ್ದ ಉಳ್ಳಾಲ ಸಯ್ಯಿದ್ ಮದನಿ ದರ್ಗಾ ಉರೂಸ್ ಎರಡು ತಿಂಗಳ ಅವಧಿಗೆ ಮುಂದೂಡಲಾಗಿದೆ ಎಂದು ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಅಧಿಕೃತ ಘೋಷಣೆ ಮಾಡಿದ್ದಾರೆ.
ಉರುಸ್ ಹಿನ್ನೆಲೆಯಲ್ಲಿ ಆಡಳಿತ ಸಮಿತಿ ಸಕಲ ಸಿದ್ಧತೆಯಲ್ಲಿ ತೊಡಗಿದ್ದು ಬಹುತೇಕ ವ್ಯವಸ್ಥೆಗಳು ಪೂರ್ಣಗೊಂಡಿದೆ. ಜನರೂ ದರ್ಗಾಕ್ಕೆ ಬರುತ್ತಿದ್ದು ಹರಕೆಯ ರೂಪದಲ್ಲಿ ನಗದು, ವಿವಿಧ ವಸ್ತುಗಳನ್ನು ನೀಡುತ್ತಿದ್ದು, ಆಡು, ಕುರಿಗಳು ಬಂದು ತಲುಪಿವೆ. ಆದರೆ ಕೊರೊನಾ ಮತ್ತು ಓಮ್ರಿಕಾನ್ ಹಿನ್ನೆಲೆಯಲ್ಲಿ ಗಡಿಭಾಗವಾದ ಮಹಾರಾಷ್ಟ್ರ, ಕೇರಳ ಮತ್ತು ತಮಿಳ್ನಾಡಿನಿಂದ ಕರ್ನಾಟಕಕ್ಕೆ ಬರುವ ಜನರಿಗೆ ಆರ್ಟಿಪಿಎಸ್ ಕಡ್ಡಾಯಗೊಳಿಸಲಾಗಿದ್ದು, ಇದೇ ಅವಸ್ಥೆಯಲ್ಲಿ ಉರುಸ್ ನಡೆದರೆ ಹೊರರಾಜ್ಯಗಳ ಜನರು ಆಗಮಿಸಲು ಕಷ್ಟವಾಗಲಿದೆ. ಉರುಸ್ ನಿಗದಿತ ದಿನದಲ್ಲೇ ನಡೆಯಬೇಕೆನ್ನುವ ನಿಯಮ ಇಲ್ಲದ ಕಾರಣ ಒಂದೆರೆಡು ತಿಂಗಳು ಮುಂದೂಡಲು ಜಿಲ್ಲಾಧಿಕಾರಿ ಮನವಿ ಮಾಡಿದ್ದಾರೆಂದು ತಿಳಿಸಿದರು.
ಉಳ್ಳಾಲದ ಉರುಸ್ ಎಂದರೆ ಕೇವಲ ಉಳ್ಳಾಲಕ್ಕೆ ಮಾತ್ರ ಸೀಮಿತವಾಗದೆ, ರಾಜ್ಯ, ರಾಷ್ಟ್ರ ಮಟ್ಟಕ್ಕೆ ಸಂಬಂಧಿಸಿದೆ. ಜಿಲ್ಲಾಧಿಕಾರಿಯ ಮನವಿ ಹಿನ್ನೆಲೆಯಲ್ಲಿ ಶುಕ್ರವಾರ ಆಡಳಿತ ಸಮಿತಿ ಸಭೆ ಸೇರಿ ಎರಡು ತಿಂಗಳ ಮಟ್ಟಿಗೆ ಉರುಸ್ ಮುಂದೂಡಲು ತೀರ್ಮಾನಿಸಿದ್ದು, ಅದರಂತೆ ಫೆಬ್ರವರಿಯಲ್ಲಿ ನಡೆಸಲು ಯೋಚಿಸಲಾಗಿದೆ. ಇದನ್ನು ಅರ್ಥೈಸಿಕೊಂಡು ಹೊರರಾಜ್ಯದಿಂದ ಬರಲು ಸಿದ್ಧರಾಗಿರುವ ಭಕ್ತರು, ತಮ್ಮ ಸಹಕಾರ ನೀಡಬೇಕು ಎಂದು ಪತ್ರಿಕಾ ಹೇಳಿಕೆಯ ಮೂಲಕ ಮನವಿ ಮಾಡಿದ್ದಾರೆ.