ಮಂಗಳೂರು, ಡಿ.11 (DaijiworldNews/PY): ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ನೂರ್ಜಹಾನ್ ಎಂಬಾಕೆ ಮತಾಂತರಕ್ಕೆ ಯತ್ನಿಸಿದ್ದು ವಾಯ್ಸ್ನೋಟ್ನಲ್ಲಿ ಆತ್ಮಹತ್ಯೆಗೆ ಮತಾಂತರ ಕಾರಣ ಎಂದು ಆರೋಪಿಸಲಾಗಿದೆ ಎಂದು ಪೊಲೀಸ್ ಕಮೀಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂರ್ಜಹಾನ್ ಮದುವೆ ಬ್ರೋಕರ್ ಕೆಲಸ ಮಾಡುತ್ತಿದ್ದು, ನಾಗೇಶ್ಗೆ ಡೈವೋರ್ಸ್ ನೀಡು, ಮುಸ್ಲಿಂ ಹುಡುಗನೊಂದಿಗೆ ನಿನ್ನ ವಿವಾಹ ಮಾಡಿಸುತ್ತೇನೆ ಎಂದು ಹೇಳಿದ್ದಳು. ವಿಜಯಲಕ್ಷ್ಮೀ ಅವರನ್ನು ಮಾತ್ರವಲ್ಲದೇ ಮಕ್ಕಳನ್ನೂ ಸಹ ಮತಾಂತರ ಮಾಡುವಂತೆ ನೂರ್ಜಹಾನ್ ಒತ್ತಾಯಿಸಿದ್ದಳು ಎಂದು ತಿಳಿಸಿದ್ದಾರೆ.
ನಾಗೇಶ್ ಕುಟುಂಬ ನೂರ್ಜಹಾನ್ ಅಪಾರ್ಟ್ಮೆಂಟ್ನಲ್ಲಿ ವಾಸಾಗಿದ್ದರು. ಬಳಿಕ ಅವರು ಬೇರೆಡೆಗೆ ಶಿಫ್ಟ್ ಆಗಿದ್ದಾರೆ. ಕೆಲ ಸಮಯದ ಹಿಂದೆ ವಿಜಯಲಕ್ಷ್ಮೀ ನೂರ್ಜಹಾನ್ ಮನೆಯಲ್ಲಿ ತಂಗಿದ್ದರು ಎಂದು ಮಾಹಿತಿ ನೀಡಿದ್ದಾರೆ.
ನೂರ್ಜಹಾನ್ ಮನೆಯಲ್ಲಿ ವಿಜಯಲಕ್ಷ್ಮೀ ಫೋಟೋ ಪತ್ತೆಯಾಗಿದೆ. ಆದರೆ, ಅವರು ಮತಾಂತರ ಆಗಿರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಇನ್ನು ನೂರ್ಜಹಾನ್ ವಿಚ್ಛೇದನಕ್ಕೆ ಅಡ್ವಕೇಟ್ ಕೂಡಾ ಗೊತ್ತುಪಡಿಸಿದ್ದಳು ಎಂದು ತಿಳಿಸಿದ್ಧಾರೆ.
ಈ ವಿಚಾರದ ಬಗ್ಗೆ ನಾಗೇಶ್ ಪತ್ನಿಯೊಂದಿಗೆ ಜಗಳವಾಡಿದ್ದ. ನಂತರ ನಾಗೇಶ್ ವಿಜಯಲಕ್ಷ್ಮೀಯನ್ನು ಹತ್ಯೆಗೈದು ಮಕ್ಕಳಾದ ಸಪ್ನಾ (8) ಸಮರ್ಥ್ (4) ಅನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದ ಎಂದಿದ್ದಾರೆ.
ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾದ ಘಟನೆ ದಾರುಣ ಘಟನೆ ನಗರದ ಮೋರ್ಗನ್ಸ್ ಗೇಟ್ ಬಳಿ ಡಿ. 08 ರ ಬುಧವಾರ ಬೆಳಕಿಗೆ ಬಂದಿದೆ.
ಮೃತರನ್ನು ನಾಗೇಶ ಶೇರಿಗುಪ್ಪಿ (30), ವಿಜಯಲಕ್ಷ್ಮಿ ( 26), ಸಪ್ನಾ (8) ಸಮರ್ಥ್ (4 ) ಎಂದು ಗುರುತಿಸಲಾಗಿದೆ. ಮೂಲತಃ ಬಾಗಲಕೋಟೆ ಬೀಳಗಿಯ ಸುನಗ್ ಗ್ರಾಮದವರಾಗಿರುವ ಇವರು ಮಂಗಳೂರಿನಲ್ಲಿ ನೆಲೆಸಿ ಕೆಲಸ ಮಾಡುತ್ತಿದ್ದರು. ನಾಗೇಶ್ ಡ್ರೈವರ್ ಆಗಿ ದುಡಿಯುತ್ತಿದ್ದರೆ , ವಿಜಯಲಕ್ಷ್ಮಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದರು.
ನಾಗೇಶ್ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿದ್ದರೆ, ವಿಜಯಲಕ್ಷ್ಮೀ ಮತ್ತು ಮಕ್ಕಳು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.