ಉಡುಪಿ, ಡಿ 11 (DaijiworldNews/MS): ' ಕೀಚಕರು, ದುರ್ಯೋಧನಂತ ನಮ್ಮ ದೇಶದಲ್ಲಿ ಕೆಟ್ಟ ರಾಜಕಾರಣಿಗಳು ವಿಶ್ವದ ಮುಂದೆ ಭಾರತ ಮಾತೆಯನ್ನು ಬೆತ್ತಲೆಯಾಗಿ ನಿಲ್ಲಿಸಿದ್ದಾರೆ. ಸಾರ್ವಜನಿಕವಾಗಿ ಮಹಿಳೆಯರ ವಸ್ತ್ರಾಪಹರಣ ಮಾಡಬೇಕಿಲ್ಲ. ಆಗ ಕೆಲವು ರಾಜಕಾರಣಿಗಳು ಭಾರತ ಮಾತೆಯ ಮಾನ ಹರಾಜು ಮಾಡಿದ್ದಾರೆ. ಆ ಹಿನ್ನೆಲೆಯಲ್ಲಿ ಗ್ರಂಥಗಳ ವಿಚಾರಧಾರೆಗಳು ಇಂದಿಗೂ ಪ್ರಸ್ತುತ', ಎಂದು ಯಕ್ಷಗಾನ ಪ್ರಸಂಗಕರ್ತರಾದ ಪ್ರೊ.ಪವನ್ ಕಿರಣಕೆರೆಯವರು ತಿಳಿಸಿದರು.
ಅವರು ಶುಕ್ರವಾರದಂದು ಆರನೇ ದಿನದ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಪರ್ಯಾಯ ಮಂಗಲೋತ್ಸವದ 'ವಿಶ್ವಾರ್ಪಣಮ್' ಸಮಾರಂಭದಲ್ಲಿ "ಜೈಮಿನಿ ಭಾರತದ ಕಾವ್ಯಾಂಶ ಮತ್ತು ವ್ಯಾಸ ಭಾರತದ ಒಂದು ಅವಲೋಕನ" ಕುರಿತಾದ ವಿಶೇಷ ಉಪನ್ಯಾಸ ನೀಡಿದರು.
ಸತ್ಯ ಅಸತ್ಯ, ನ್ಯಾಯ ಅನ್ಯಾಯ,ಧರ್ಮ ಅಧರ್ಮಗಳನ್ನುತಿಳಿಸುವದೇ ಎಲ್ಲಾ ಮಹಾನ್ ಕಾವ್ಯಗಳ ಸಾರಾಂಶ. ಆದರೆ ವಿಪರ್ಯಾಸವೆಂದರೆ, ಸಾಹಿತ್ಯವು ಎಡಪಂಥಿ ಮತ್ತು ಬಲಪಂಥಿ ಎಂದು ವಿಭಾಗವಾಗಿದೆ. ಇದು ಸರಿಯಲ್ಲ. ಮಹಾಕಾವ್ಯ ವಾಗಲಿ, ಗ್ರಂಥಗಳಲ್ಲಿ ಧರ್ಮ - ಅಧರ್ಮದ ವಿಮರ್ಶೆ ಆಗಬೇಕು. ಮಕ್ಕಳು ಹೆಚ್ಚು ಹೆಚ್ಚು ಪ್ರಶ್ನೆ ಗಳನ್ನು ಕೇಳಬೇಕು.
ಆ ಜಿಜ್ಞಾಸೆ ಗಳು ಜ್ಞಾನದ ಮೂಲವಾಗಿ ಬೆಳೆಯುತ್ತದೆ. ಆಗ ಗುರುಗಳು ಕೂಡ ಸ್ವಯಂ ಸಂಶೋಧನೆಯಲ್ಲಿ ತೊಡಗಿಕೊಳ್ಳುತ್ತಾರೆ. ಆದರೆ ಈಗ ಪಠ್ಯ ಪುಸ್ತಕದ ಸಿಲೇಬಸ್ ಗಳಿಗೆ ವಿಷಯಗಳಿಗೆ ಸೀಮಿತವಾಗಿ ಬಿಟ್ಟಿದೆ. ತರಗತಿಯಲ್ಲಿ ವಿರುದ್ಧ ಪ್ರಶ್ನೆಗಳನ್ನು ಕೇಳುವ ವಿದ್ಯಾರ್ಥಿಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಇದು ದುರಂತ, ಎಂದು ಅವರು ವಿಷಾದ ವ್ಯಕ್ತಪಡಿಸಿದರು.
ಭಾರತದಲ್ಲಿ ಇಂದು ಸಾಂಸ್ಕೃತಿಕ ದಿವಾಳಿತನ ಉಂಟಾಗಿದೆ. ಕಾರಣ ಇತ್ತೀಚಿನ ಯುವ ಪೀಳಿಗೆಗೆ ನಮ್ಮ ಗ್ರಂಥದ ಜ್ಞಾನದ ಕೊರತೆ ಇದೆ. ಇದನ್ನು ಯಾರು ಹೇಳಿಕೊಡಬೇಕು ಎಂಬ ಪ್ರಶ್ನೆ ಬಂದಾಗ ಧಾರ್ಮಿಕ ಕೇಂದ್ರದ ಮೇಲೆ ಬೊಟ್ಟು ಮಾಡುತ್ತಾರೆ. ಇದು ತಪ್ಪು. ಮಕ್ಕಳಿಗೆ ಅವರವರ ಮನೆಯೇ ಮೊದಲ ಪಾಠಶಾಲೆ ಆದಾಗ ಮಾತ್ರ ಸಾಧ್ಯ ವಾಗುತ್ತದೆ.ತಂತ್ರಜ್ಞಾನದ ಕಾಲದಲ್ಲಿ ನಮ್ಮ ಬಳಿ ಮಾಹಿತಿಯ ಹಾವಳಿಯೇ ಇದೆ ಆದರೆ ಅಗತ್ಯವಾಗಿ ಬೇಕಾದ ಮಾಹಿತಿ ಯಾರಲ್ಲೂ ಇಲ್ಲ. ವ್ಯಾಸ ಭಾರತ, ಜೈಮಿನಿ ಭಾರತವನ್ನು ಇತಿಹಾಸ, ಮೋಕ್ಷ ಗ್ರಂಥ, ಟಿಪಿಕಲ್ ಸಾಯನ್ಸ್, ಭೌತಿಕ ವಿಜ್ಞಾನದ ದೃಷ್ಟಿಯಿಂದ ಕೂಡ ನೋಡಬಹುದು.
ಮಹಾಭಾರತ ಭೀಷ್ಮನಂತಹ ಮಹಾನ್ ಆರ್ಥಿಕ ತಜ್ಞ ಬೇರೆ ಇಲ್ಲ, ಆದರೆ ಶಾಲೆಯಲ್ಲಿ ಆರ್ಥಿಕ ತಜ್ಞ ಆಡಂ ಸ್ಮಿತ್ ಎಂದೇ ಹೇಳಿಕೊಡಲಾಗುತ್ತಿದೆ. ಭಗವದ್ಗೀತೆಯಷ್ಟು ದೊಡ್ಡ ವಿಜ್ಞಾನ ಯಾವುದೂ ಇಲ್ಲ. ಆರ್ಥಿಕತೆ ಬಗ್ಗೆ ಅಲ್ಲದೆ ಯುದ್ಧದ ಬಗ್ಗೆಯೂ ವಿವರಣೆ ಇದೆ. ಯಾರೂ ಅದನ್ನು ಗಂಭೀರ ್ವಾಗಿ ಚಿಂತನೆ ವಿಮರ್ಶೆ ನಡೆಸುತ್ತಿಲ್ಲ', ಎಂದು ಪ್ರೊ. ಪವನ್ ಹೇಳಿದರು.
ಪರ್ಯಾಯ ಪೀಠಾಧೀಶರಾದ ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ತಮ್ಮ ಅನುಗ್ರಹ ಸಂದೇಶದಲ್ಲಿ, ' ನಮ್ಮ ದೇಶದ ಮಹಾನ್ ಗ್ರಂಥಗಳ ಅಧ್ಯಯನದಿಂದ ಜೀವನದಲ್ಲಿ ನೆಮ್ಮದಿ ಕಂಡುಕೊಳ್ಳುವುದು ಮುಖ್ಯ ಎಂದರು.ಒಡಿಯೂರಿನ ಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿಯವರು,ದೇವರ ಅಸ್ಥಿತ್ವ,ಇರವಿನ ಅರಿವು ಕಂಡಾಗ ಜಾಗೃತಿ ಉಂಟಾಗುತ್ತದೆ, ಭಾಷೆ ಬೇರೆಯಾದರೂ ಅನುಸಂದಾನ ಮುಖ್ಯವಾಗುತ್ತದೆ ಎಂದು ನುಡಿದರು.
ಕೊಯಮುತ್ತೂರಿನ ಅದ್ವೈತ್ ಲಕ್ಷ್ಮೀ ಇಂಡಸ್ಟ್ರೀಸ್ ನ ಆಡಳಿತ ನಿರ್ದೇಶಕರಾದ ರವಿ ಸ್ಯಾಮ್ ಇವರನ್ನು ವಿಶೇಷವಾಗಿ ಪುರಸ್ಕರಿಸಲಾಯಿತು.ಅಭ್ಯಾಗತರಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧ್ಯಕ್ಷರಾದ ಸುನಿಲ್ ಪುರಾಣಿಕ್ ರವರು ಭಾಗವಹಿಸಿ ನಮ್ಮ ಹಿಂದಿನ ತಪ್ಪುಗಳನ್ನು ,ತಿರುಚಿದ ಇತಿಹಾಸಗಳನ್ನು ಸರಿಪಡಿಸಿ ನಿಜವಾದ ಇತಿಹಾಸವನ್ನು ತೆರೆದಿಡಲು ಸಾದ್ಯವಾಗುತ್ತಿರುವದಕ್ಕೆ ಸಂತಸವಾಗುತ್ತಿದೆ ಎಂದರು.
ನಾಡಿನ ಹೆಮ್ಮೆಯ ಯೋಧರಾದ ಹವಾಲ್ದಾರ್ ಪ್ರಶಾಂತ್ ಜಿ ಎಸ್,ಆಗುಂಬೆ,ಸಿಪಾಯಿ ಸಚಿನ್ ಶೆಟ್ಟಿ ಹೆಬ್ರಿ,ಸುಬೇದಾರ್ ಸುರೇಂದ್ರ ಹೆಬ್ರಿ,ಅದಮಾರು ಮೂಲ ಮಠದ ಕೊಠಾರಿಗಳಾದ ಎನ್.ವಾಸುದೇವ ಭಟ್,ಅದಮಾರು ಮೂಲ ಮಠದ ಸೇವಕರಾದ ಬೇಬಿ ದೇವಾಡಿಗ ಮೊದಲಾದವರನ್ನು ಸನ್ಮಾನಿಸಲಾಯಿತು.
ಮಠದ ವ್ಯವಸ್ಥಾಪಕರಾದ ಗೋವಿಂದರಾಜ್ ಸ್ವಾಗತಿಸಿದರು.ಪ್ರೊ.ರಮೇಶ್ ಭಟ್ ರವರು ಕಾರ್ಯಕ್ರಮ ನಿರ್ವಹಿಸಿದರು.