ಮಂಗಳೂರು, ಡಿ.10 (DaijiworldNews/SM): ಮುಸ್ಲಿಂ ಹುಡುಗನನ್ನು ಹಿಂದೂ ಯುವತಿಯೊಬ್ಬಳು ಮದುವೆಯಾಗಲು ಮುಂಡಾಗಿದ್ದು, ಅವಳ ಮನೆಗೆ ತೆರಳಿ ಆಕೆಯನ್ನು ಎಚ್ಚರಿಸಿದ್ದೆವು. ಇದೀಗ ಮತ್ತೊಂದು ಘಟನೆಯಾಗಿದ್ದು ಬಸ್ ನಲ್ಲಿ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿಯೊಬ್ಬಳು ತೆರಳಿದ್ದಾಳೆ ಎಂದು ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಅಸಮಾಧಾನ ಹೊರ ಹಾಕಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ನಾವೇ ಬೆಂಕಿಗೆ ಬೀಳುತ್ತೇವೆ ಎನ್ನುವವರಿಗೆ ಏನು ಮಾಡಲು ಸಾಧ್ಯವಿಲ್ಲ. ಆದರೆ, ಯಾವುದೇ ಕಾರಣಕ್ಕೂ ಮತಾಂತರ ಸಹಿಸಲು ಸಾಧ್ಯವಿಲ್ಲ ಎಂದಿದ್ದಾರೆ.
ಮುಸ್ಲಿಂ ಹುಡುಗನ ಜತೆ ಹಿಂದೂ ಹುಡುಗಿ ಬಸ್ನಲ್ಲಿ ತೆರಳಿದ ವಿಚಾರವನ್ನು ಕೂಲಂಕುಷ ತನಿಖೆಗೆ ಪೊಲೀಸ್ ಇಲಾಖೆಗೆ ಒತ್ತಾಯಿಸಿದ್ದೇವೆ ಎಂದು ಮಂಗಳೂರಿನಲ್ಲಿ ವಜ್ರದೇಹಿ ಸ್ವಾಮೀಜಿ ಆಗ್ರಹಿಸಿದ್ದಾರೆ.
ಮತಾಂತರ ತಡೆ ಕಾನೂನು ಹಲ್ಲಿಲ್ಲದ ಹಾವು:
ಮತಾಂತರ ತಡೆ ಕಾನೂನಿನಲ್ಲಿ ಬದಲಾವಣೆ ಆಗಬೇಕು. ಈ ಕುರಿತು ಸರ್ಕಾರವನ್ನು ಒತ್ತಾಯಿಸಿದ್ದೇವೆ. ಬಾಗಲಕೋಟೆಯ ಕುಟುಂಬ ಮತಾಂತರಕ್ಕೆ ಬಲಿಯಾಗಿದೆ. ಪ್ರಕರಣದಲ್ಲಿ 2 ಮಕ್ಕಳು ಕೂಡಾ ಬಲಿಯಾಗಿದ್ದಾರೆ. ಹೀಗಾಗಿ ಮತಾಂತರ ನಿಷೇಧ ಕಾನೂನು ಜಾರಿಗೆ ಬರಬೇಕು ಎಂದು ಮಂಗಳೂರಿನಲ್ಲಿ ವಜ್ರದೇಹಿ ಸ್ವಾಮೀಜಿ ಆಗ್ರಹಿಸಿದ್ದಾರೆ.